ಕಾಣಿಯೂರು: ಬೆಳಂದೂರು ಗ್ರಾಮದ ಅಜಿರಂಗಳ ಎಂಬಲ್ಲಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದ್ದು , ಈ ಹಿಂದೆ ಅಜಿರಂಗಳದಲ್ಲಿ ದೇವರ ಸಾನಿಧ್ಯವಿತ್ತೆಂಬ ದೈವಜ್ಞರ ಅಭಿಪ್ರಾಯದಂತೆ ಪ್ರಾಯಶ್ಚಿತ ಕಾರ್ಯಗಳನ್ನು ಮುಗಿಸಿ ನೂತನವಾಗಿ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರೆವೇರಿಸಲಾಗಿದೆ.
ಇದೀಗ ದೇವಸ್ಥಾನದ ನಿರ್ಮಾಣಕ್ಕಾಗಿ ಸ್ಥಳದಲ್ಲಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವಾಗ, ಜೂ.೧೮ರಂದು ಈ ಹಿಂದೆ ದೇವಸ್ಥಾನ ಇದ್ದ ಕೆಲ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿದೆ. ಪತ್ತೆಯಾದ ಕಲ್ಲಿನ ಕುರುಹುಗಳನ್ನು ಅದರ ಹಿನ್ನೆಲೆ ಹಾಗೂ ಎಷ್ಟು ವರ್ಷದ ಪುರಾತನ ಇದೆ ಎಂದು ತಿಳಿದುಕೊಳ್ಳಲು ಪುರಾತತ್ವ ಇಲಾಖೆಗೆ ಕಳುಹಿಸಲಾಗುವುದು. ಅಲ್ಲದೇ ದೇವಸ್ಥಾನದ ಗರ್ಭಗುಡಿ ನಿರ್ಮಾಣ ಸ್ಥಳದಲ್ಲಿ ಅಕ್ಷಯ ಜಲ ವೃದ್ಧಿಯಾಗಿದ್ದು, ಜಲದಲ್ಲಿಯೇ ಗರ್ಭಗುಡಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮಾದೋಡಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮೀ ಸೇವಾ ಟ್ರಸ್ಟ್ ನ ಟ್ರಸ್ಟಿ ಮತ್ತು ಕಾರ್ಯದರ್ಶಿ ದೀನಬಂಧು ರೈ ಮಾದೋಡಿ ತಿಳಿಸಿದ್ದಾರೆ.