- ಏಕಕಾಲದಲ್ಲಿ ಬೈಪಾಸ್, ಥೈರಾಯಿಡ್ ಕ್ಯಾನ್ಸರ್ ಶಸ್ತ್ರಕ್ರಿಯೆ ಯಶಸ್ವಿ
ಪುತ್ತೂರು:ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಭಾರತದಲ್ಲಿ ಪ್ರಥಮ ಬಾರಿಗೆ ಏಕಕಾಲದಲ್ಲಿ ರೋಗಿಯೊಬ್ಬರಿಗೆ ಹೃದಯದ ಬೈಪಾಸ್ ಮತ್ತು ಫೈರಾಯಿಡ್ನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ತಜ್ಞ ವೈದ್ಯರ ತಂಡದಲ್ಲಿ ಪುತ್ತೂರಿನ ಡಾ.ಸ್ಮಿತಾ ರಾವ್ ಕೂಡ ಒಬ್ಬರಾಗಿದ್ದರು.
ಕುತ್ತಿಗೆಯಲ್ಲಿ ಬಹು ದೊಡ್ಡ ಗಡ್ಡೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 72ರ ಮಹಿಳೆಯನ್ನು ತಪಾಸಣೆ ಮಾಡಿದಾಗ ಥೈರಾಯಿಡ್ನ ಕ್ಯಾನ್ಸರ್’ ಎಂದು ತಿಳಿಯಲ್ಪಟ್ಟಿತು.ಈ ಗಡ್ಡೆ ಎದೆಗೂಡಿನ ಒಳಕ್ಕೆ ಹರಡಿತ್ತು. ಚಿಕಿತ್ಸೆಗೆ ಬೇಕಾದ ತಪಾಸಣೆ ವೇಳೆ ಅವರಿಗೆ ಹೃದಯಾಘಾತದ ಲಕ್ಷಣಗಳಿರುವುದು ತಿಳಿದು ಬಂದಿದ್ದು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯೂ ಅವಶ್ಯವಾಯಿತು.ಎರಡೂ ಶಸ್ತ್ರಚಿಕಿತ್ಸೆಗಳು ಬಹಳ ಪ್ರಮುಖವಾಗಿದ್ದು ಸುದೀರ್ಘ ಪ್ರಕ್ರಿಯೆ ಆಗಿರುವುದರಿಂದ ನಿಭಾಯಿಸುವುದು ವೈದ್ಯರಿಗೆ ಸವಾಲಾಗಿತ್ತು. ಹೃದ್ರೋಗ, ಹೃದಯ ಶಸ್ತ್ರಚಿಕಿತ್ಸೆ ಎಂಡೋಕ್ರೈನ್ ಶಸ್ತ್ರಚಿಕಿತ್ಸೆ ಅರಿವಳಿಕೆ ಮತ್ತು ಎಂಡೋ ಕೈನಾಲಜಿ ವಿಭಾಗದ ವೈದ್ಯರು ಜತೆಗೂಡಿ 7 ಗಂಟೆ ಶಸ್ತ್ರಕ್ರಿಯೆ ನಡೆಸಿದರು.
ಒಂದೇ ವಾರದಲ್ಲಿ ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯ ಜತೆಗೆ ಥೈರಾಯಿಡ್ ಗ್ರಂಥಿಯ ಕ್ಯಾನ್ಸರಿನ ಶಸ್ತ್ರಚಿಕಿತ್ಸೆ ಒಟ್ಟೊಟ್ಟಿಗೆ ಮಾಡಿರುವ ದಾಖಲೆಗಳು ಭಾರತದ ಬೇರೆಲ್ಲಿಯೂ ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಅರಿವಳಿಕೆ ತಜ್ಞ ಡಾ.ಮಂಜುನಾಥ್ ಕಾಮತ್ ಉಪಸ್ಥಿತಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯನ್ನು ಡಾ.ಎ.ಜಿ. ಜಯಕೃಷ್ಣನ್, ಡಾ.ಗೋಪಾಲ ಕೃಷ್ಣನ್, ಡಾ.ಸುಬ್ರಹ್ಮಣ್ಯಮ್ ಕೆ., ಡಾ.ನರೇಶ್ ಚಂದ್ ಹೆಗ್ಡೆ, ಡಾ.ಅನೂಪ್ ಎಚ್.ಎಸ್. ನಡೆಸಿದರು. ಥೈರಾಯ್ಡ್ ಶಸ್ತ್ರಚಿಕಿತ್ಸೆಯನ್ನು ಎಂಡೋ ಕ್ರೈನ್ ತಜ್ಞೆ ಡಾ.ಸ್ಥಿತಾ ರಾವ್ ಮತ್ತು ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರಾದ ಡಾ.ವಿನಯ್ ಕುಮಾರ್ ಜೆ. ರಾಜೇಂದ್ರ ನಡೆಸಿದರು. ಡಾ.ಸ್ಮಿತಾ ರಾವ್ರವರು ಪುತ್ತೂರು ಪ್ರಗತಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಶ್ರೀಪತಿ ರಾವ್ ಮತ್ತು ಡಾ. ಸುಧಾ ಎಸ್.ರಾವ್ ದಂಪತಿ ಪುತ್ರಿ