ಉಪ್ಪಿನಂಗಡಿ: ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ಅವರ ಕನಸಿನ ಕಾರ್ಯಕ್ರಮಗಳಾದ ಜಲಸಿರಿ, ವನಸಿರಿ, ವಿದ್ಯಾಸಿರಿ, ಆರೋಗ್ಯ ಸಿರಿ ಕಾರ್ಯಕ್ರಮಗಳನ್ನು ಆದ್ಯತೆಯೊಂದಿಗೆ ಸಾಕಾರಗೊಳಿಸಬೇಕಾಗಿದೆ ಎಂದು ರೋಟರಿ ಜಿಲ್ಲಾ ಕೌನ್ಸಿಲರ್ ಎಂ. ರಂಗನಾಥ್ ಭಟ್ ಹೇಳಿದರು.
ಅವರು ಜುಲೈ 9ರಂದು ಉಪ್ಪಿನಂಗಡಿ ಗಾಣಿಗ ಸಮುದಾಯ ಭವನದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ನ 2022-23ನೇ ಸಾಲಿನ ನೂತನ ಅಧ್ಯಕ್ಷ ಜಗದೀಶ್ ನಾಯಕ್ ಮತ್ತು ತಂಡಕ್ಕೆ ಪದಪ್ರಧಾನ ಮಾಡಿ ಮಾತನಾಡಿ ರೋಟರಿಯಲ್ಲಿ ಸಮಾಜಮುಖಿ ಕೆಲಸ ಮಾಡುವುದಕ್ಕೆ ಒಳ್ಳಯ ಅವಕಾಶಗಳಿದ್ದು, ಉಪ್ಪಿನಂಗಡಿ ರೋಟರಿ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ ಉಪ್ಪಿನಂಗಡಿ ರೋಟರಿ ಸಂಸ್ಥೆಯಲ್ಲಿ ಸ್ಪೂರ್ತಿ ತುಂಬಿದ ಯುವಕರನ್ನು ಒಳಗೊಂಡಂತೆ ಬಹಳಷ್ಟು ವಿಶಿಷ್ಠತೆಯೊಂದಿಗೆ ಕೂಡಿದ ತಂಡ ಇದ್ದು ಮುಂದಿನ ದಿನಗಳಲ್ಲಿ ರೋಟರಿ ಜಿಲ್ಲೆಯನ್ನು ಬಲಪಡಿಸಲು ಹೊಸ ತಂಡ ಪರಸ್ಪರ ಕೈಜೋಡಿಸಬೇಕು ಎಂದರು.
ನಿರ್ಗಮನ ಅಧ್ಯಕ್ಷ ನೀರಜ್ ಕುಮಾರ್ ಮಾತನಾಡಿ ನನ್ನ ಅವಧಿಯಲ್ಲಿ ಸಹಕರಿಸಿದ ಸದಸ್ಯರಿಗೆ, ದಾನಿಗಳಿಗೆ ಅಭಾರಿ ಆಗಿದ್ದೇನೆ ಎಂದರು. ಪದ ಪ್ರಧಾನ ಸ್ವೀಕರಿಸಿದ ಜಗದೀಶ್ ನಾಯಕ್ ಮಾತನಾಡಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಬದ್ಧನಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ., ಝೋನಲ್ ಲೆಫ್ಟಿನೆಂಟ್ ಮಹಮ್ಮದ್ ವಲವೂರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಇಬ್ಬರು ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ಎಂ.ಆರ್. ಶೆಣೈ ಮತ್ತು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವಂದನಾ ಮುದಲಾಜೆಯವರನ್ನು ಸನ್ಮಾನಿಸಲಾಯಿತು.
ಹೊಸ ಸದಸ್ಯರುಗಳ ಸೇರ್ಪಡೆ: ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಪ್ರತಾಪ್ ಪೆರಿಯಡ್ಕ, ಕಾಮಿಲ್ ಶುಕ್ರಿಯಾ, ಪುರಂದರ ಬಾರ್ಲ, ಕು| ಸ್ವರ್ಣ ಪೊಸವಳಿಕೆ, ಗ್ರೀಸ್ಮಾ ಗಿರಿಧರ ನಾಯಕ್, ಆಶಾಲತಾ ಜಗದೀಶ ನಾಯಕ್ ಇವರುಗಳನ್ನು ರೋಟರಿ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು.
ರೋಟರಿ ಸಂಸ್ಥೆಯ ಪದಾಽಕಾರಿಗಳಾದ ರವೀಂದ್ರ ದರ್ಬೆ, ಅಜೀಜ್ ಬಸ್ತಿಕ್ಕಾರ್, ಡಾ. ರಾಜಾರಾಮ್, ಡಾ. ರಮ್ಯಾ ರಾಜಾರಾಮ್, ದಿವಾಕರ ಆಚಾರ್ಯ, ಡಾ. ನಿರಂಜನ ರೈ, ಅಬ್ದುಲ್ ರಹಿಮಾನ್ ಯುನಿಕ್, ಹರೀಶ್ ನಟ್ಟಿಬೈಲ್, ವಿಜಯಕುಮಾರ್ ಕಲ್ಲಳಿಕೆ, ಅರುಣ್ ಕುಮಾರ್, ಶ್ರೀನಿವಾಸ ಭಟ್, ಸ್ವರ್ಣೇಶ್, ಇಸ್ಮಾಯಿಲ್ ಇಕ್ಬಾಲ್, ಶ್ರೀಮತಿ ಅನುರಾಧ ಶೆಟ್ಟಿ, ರವೀಂದ್ರ ಪ್ರಭು, ರಾಜೇಶ್ ದಿಂಡಿಗಲ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ, ಎನ್. ಉಮೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷ ನೀರಜ್ ಕುಮಾರ್ ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ನವೀನ್ ಬ್ರಾಗ್ಸ್ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಗಿರಿಧರ ನಾಯಕ್ ವಂದಿಸಿದರು. ಅಶ್ವಿನ್ ಕಿಣಿ, ನಿಧಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.