- ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರಿಂದ ದೂರು-ಪ್ರಕರಣ ದಾಖಲು
ಕಡಬ: ಪಂಚಾಯತ್ ಕುಡಿಯುವ ನೀರಿನ ಪೈಪ್ ಲೈನ್ಗೆ ವ್ಯಕ್ತಿಯೋರ್ವರು ಹಾನಿಗೊಳಿಸಿ, ನೀರು ಸರಬರಾಜಿಗೆ ತೊಂದರೆ ಮಾಡಿರುವುದು ಅಲ್ಲದೆ ಸ್ಥಳಕ್ಕೆ ತೆರಳಿದ ಪಂಚಾಯತ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜೀವ ಬೆದರಿಕೆ ಒಡ್ಡಿರುವ ಘಟನೆ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ನಡೆದಿದ್ದು ಈ ಬಗ್ಗೆ ವ್ಯಕ್ತಿಯ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಣಾಜೆ ಗ್ರಾಮದ ಕುತ್ಯಾಡಿ ಜನಾರ್ದನ ಪೂಜಾರಿ ಎಂಬವರು ನೆಲ್ಲಿಗುಡ್ಡೆ ಎಂಬಲ್ಲಿರುವ ಕುಡಿಯುವ ನೀರಿನ ಪೈಪನ್ನು ಕಿತ್ತೆಸೆದಿದ್ದು ಈ ಬಗ್ಗೆ ಪಂಚಾಯತ್ನಿಂದ ಜನಾರ್ದನರಿಗೆ ನೋಟಿಸು ನೀಡಲಾಗಿತ್ತಾದರೂ ಅದಕ್ಕೆ ಪ್ರತಿಕ್ರಿಯೆ ತೋರದೆ ಇದ್ದು ಇದರಿಂದ ಆ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಈ ಬಗ್ಗೆ ಆ ಭಾಗದ ಕುಡಿಯುವ ನೀರಿನ ಫಲಾನುಭವಿಗಳು ಪಂಚಾಯತ್ಗೆ ದೂರು ನೀಡಿದ್ದು ಈ ಹಿನ್ನಲೆಯಲ್ಲಿ ಜು.೧೬ರಂದು ಸ್ಥಳಕ್ಕೆ ತೆರಳಿದ ಪಂಚಾಯತ್ ಅಧ್ಯಕ್ಷ ಶಿವಪ್ಪ ಗೌಡ, ಅಭಿವೃದ್ದಿ ಅಧಿಕಾರಿ ಪದ್ಮನಾಭ ಗೌಡ ಹಾಗೂ ಸಿಬ್ಬಂದಿಗಳು ಹಾನಿಗೊಳಗಾದ ಪೈಪನ್ನು ಪರಿಶೀಲನೆ ಮಾಡುತ್ತಿದ್ದ ವೇಳೆ ಆರೋಪಿತ ಜನಾರ್ದನ ಪೂಜಾರಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಡ್ಯ ಕೊಣಾಜೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರು ಉಪ್ಪಿನಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೋಲಿಸರು ಆರೋಪಿ ಜನಾರ್ದನರ ವಿರುದ್ದ ಸೆಕ್ಷನ್ 353,504,506,427ರಂತೆ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಕುಡಿಯುವ ನೀರು ಸರಬರಾಜಿಗೆ ತೊಂದರೆ-ಶಿವಪ್ಪ ಗೌಡ
ಈ ಬಗ್ಗೆ ಕಡ್ಯ ಕೊಣಾಜೆ ಗ್ರಾ.ಪಂ.ಅಧ್ಯಕ್ಷ ಶಿವಪ್ಪ ಗೌಡ ಅವರು ಪ್ರತಿಕ್ರಿಯೆ ನೀಡಿ, ಕುಡಿಯುವ ನೀರು ಸರಬರಾಜಿನ ಪೈಪುಗಳಿಗೆ ಹಾನಿ ಮಾಡಿರುವುದರಿಂದ ಅಲ್ಲಿ ನೀರು ಸರಬರಾಜಿಗೆ ತೊಂದರೆ ಆಗಿದೆ, ಅಲ್ಲದೆ ಪಂಚಾಯತ್ ನಿಂದ ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಸೌಹಾರ್ಧಯುತವಾಗಿ ಬಗೆಹರಿಸಲು ಪ್ರಯತ್ನ ಪಟ್ಟಿದ್ದರೂ ಅದಕ್ಕೆ ಸ್ಪಂಧನೆ ನೀಡದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ, ಇದು ಖಂಡನಿಯ, ನಾವು ಗ್ರಾಮದ ಜನತೆಯ ಸೇವೆಗೆ ಇರುವವರು, ಜನರಿಗೆ ತೊಂದರೆಯಾದರೆ ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.