ಪೆರ್ನೆ: ಪೆರ್ನೆ ವಲಯದ ನೂತನ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಸಾಮೂಹಿಕ ಶ್ರೀಧನ್ವಂತರಿ ಪೂಜೆ ಪೆರ್ನೆ ಅಯೋಧ್ಯನಗರ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯದಲ್ಲಿ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಗೌರವಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಉದ್ಘಾಟಿಸಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯೂ ಬಡವ, ಆರ್ಥಿಕ ಸಂಕಷ್ಟ ಉಳ್ಳವರಿಗೆ ಬಹಳ ಸಹಕಾರಿಯಾಗಿದೆ ಮಾತ್ರವಲ್ಲ ಅನೇಕ ಸಮಸ್ಯೆ ಉಳ್ಳ ವ್ಯಕ್ತಿಗಳಿಗೆ ಪರಿಹಾರವಾಗಿ ಈ ಯೋಜನೆಯು ಫಲಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಪೆರ್ನೆ ವಲಯದ ಅಧ್ಯಕ್ಷ ರಮೇಶ್ ತೋಟ ಮಾತನಾಡಿ ಹದಿನೆಂಟು ವರ್ಷಗಳಿಂದ ಈ ಯೋಜನೆಯೂ ಅನೇಕ ಕುಟುಂಬಗಳಿಗೆ ಸಹಕಾರಿಯಾಗಿದ್ದೂ ಮಾತ್ರವಲ್ಲದೆ ಇದರಲ್ಲಿರುವ ಅನೇಕ ನಾನಾ ಯೋಜನೆಗಳು ಬಡವರ, ಕೃಷಿಕರ ಬೆನ್ನೆಲುಬಾಗಿ ನಿಂತಿದೆ. ಪ್ರಗತಿಬಂಧು ಯೋಜನೆ ಕೃಷಿಕರಿಗೆ ಬಹಳಷ್ಟು ಪ್ರಯೋಜನ ನೀಡಿದೆ ಎಂದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ಖಾವಂದರರ ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಜನರಿಗೆ ಬಹಳಷ್ಟು ಉಪಯೋಗವಾಗುತ್ತಿದೆ, ಅನೇಕ ಮಕ್ಕಳು ಈ ಯೋಜನೆಯಿಂದಲೇ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದರು.
ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ದ.ಕ ಜಿಲ್ಲೆಯ ಜಿಲ್ಲಾ ನಿರ್ದೇಶಕ ಪ್ರವೀಣ್ಕುಮಾರ್, ವೈದ್ಯಕೀಯ ಅಧೀಕ್ಷಕ ಕಕ್ಕಿಂಜೆ ಅನನ್ಯಲಕ್ಷ್ಮೀ ಸಂದೀಪ್, ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೊ, ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಸಂಚಾಲಕ ಹರೀಶ್ ಭಂಡಾರಿ ಶುಭಹಾರೈಸಿದರು. ಜನಜಾಗೃತಿ ವಲಯ ಅಧ್ಯಕ್ಷ ಪೆರ್ನೆಯ ರೋಹಿತಾಕ್ಷ ಬಾಣಬೆಟ್ಟು, ಪೆರ್ನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕುಮಾರ್ ಪದಬರಿ, ವಿಟ್ಲ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ಚೆನ್ನಪ್ಪಗೌಡ, ಜನಜಾಗೃತಿ ವೇದಿಕೆ ಸದಸ್ಯ ಬಂಟ್ವಾಳ ಪುಷ್ಪರಾಜ್ ಹೆಗ್ಡೆ ಸತ್ತಿಕ್ಕಲ್ಲು ಉಪಸ್ಥಿತರಿದ್ದರು.
ಸನ್ಮಾನ : ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಕಡೇಶಿವಾಲಯ ಪಟ್ಲ ನಿವಾಸಿ ಅಣ್ಣು ಪೂಜಾರಿ ಪಟ್ಲ, ಮದ್ಯವರ್ಜನಾ ಶಿಬಿರಕ್ಕೆ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆದಿಲ ಗ್ರಾಮ ನಿವಾಸಿ ನಳಿನ್ ಹಾಗೂ ಕಡೇಶಿವಾಲಯ ನಿವಾಸಿ ಕುಸಲಪ್ಪ ರವರನ್ನು ಸನ್ಮಾನಿಸಲಾಯಿತು.
ಪೆರ್ನೆಯ ಮೇಲ್ವಿಚಾರಕಿ ಜಯಶ್ರಿ ಸ್ವಾಗತಿಸಿ, ಪೆರ್ನೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟದ ಅಧ್ಯಕ್ಷ ರಮೇಶ್ ತೋಟ ವಂದಿಸಿ, ತುಳು ಸಾಹಿತ್ಯ ಅಕಾಡಮಿಯ ವಿದ್ಯಾ ನಿರೂಪಿಸಿದರು.