ಪುತ್ತೂರು: ಎ.ಟಿ.ಎಂ.ನಲ್ಲಿ ಸಿಕ್ಕಿದ ಹಣವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಯುವ ನ್ಯಾಯವಾದಿ ಸಂತೋಷ್ ಮಾನವೀಯತೆ ಮೆರೆದಿದ್ದಾರೆ.
ಖ್ಯಾತ ವಕೀಲ ಮಹೇಶ್ ಕಜೆಯವರ ಜೂನಿಯರ್ ವಕೀಲರಾಗಿರುವ ಸಂತೋಷ್ ಅವರು ಆ.20ರಂದು ರಾತ್ರಿ ಹಣ ಪಡೆಯಲೆಂದು ಅರುಣಾ ಚಿತ್ರಮಂದಿರದ ಬಳಿ ಕೆನರಾ ಬ್ಯಾಂಕ್ ಎ.ಟಿ.ಎಂ.ಗೆ ತೆರಳಿದ್ದರು. ಆದರೆ, ಅವರು ಹಣ ಪಡೆಯಲು ಕಾರ್ಡ್ ಹಾಕುವ ಮೊದಲೇ ಎ.ಟಿ.ಎಂ.ನಲ್ಲಿ ಐದು ಸಾವಿರ ರೂ ನಗದು ಇತ್ತು. ಯಾರೋ ಹಣ ಡ್ರಾ ಮಾಡಿ ಅದನ್ನು ಪಡೆಯದೆ ಅಲ್ಲಿಯೇ ಬಿಟ್ಟು ಹೋಗಿರುವುದನ್ನು ತಿಳಿದ ನ್ಯಾಯವಾದಿ, ಪುತ್ತೂರು ಪಡೀಲ್ ನಿವಾಸಿ ಸಂತೋಷ್ ಕೆ.ಆರ್. ಅವರು ಕೂಡಲೇ ನಗರ ಪೊಲೀಸ್ ಠಾಣೆಗೆ ತೆರಳಿ ಹಸ್ತಾಂತರಿಸಿದ್ದಾರೆ. ಎ.ಎಸ್.ಐ. ಚಕ್ರಪಾಣಿಯವರು ನಗದು ಸ್ವೀಕರಿಸಿದ್ದು ವಾರಿಸುದಾರರು ಬಂದು ನಗದು ಸ್ವೀಕರಿಸಬಹುದು ಎಂದು ತಿಳಿಸಿದ್ದಾರೆ.