ಮಾಣಿಯಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ

0

ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ಸಮರ್ಥ ಲೇಖಕನ ಪಾತ್ರ ಬಹುಮುಖ್ಯ – ನರೇಂದ್ರ ರೈ ದೇರ್ಲ
ವಿಟ್ಲ: ಜಾತ್ಯಾತೀತ ಸಮಾಜ ನಿರ್ಮಿಸುವಲ್ಲಿ ಸಮರ್ಥ ಲೇಖಕನ ಪಾತ್ರ ಬಹುಮುಖ್ಯವಾಗಿದೆ. ನಾವು ಏನು ಎನ್ನುವುದನ್ನು ನಮಗೆ ತಿಳಿದಾಗ ಸಮಾಜದಲ್ಲಿ ಮಾದರಿಯಾಗಬಹುದು. ವಿಶುಕುಮಾರ್ ಕನ್ನಡದ ಶ್ರೇಷ್ಠ ಸಾಹಿತಿ. ಕರಾವಳಿಯಲ್ಲಿ ಪಾಂಡಿತ್ಯಗಳು ಮನುಷ್ಯ ಮನುಷ್ಯನನ್ನು ಜೋಡಿಸುವ ಕಾರ್ಯ ಮಾಡದಿರುವುದು ವಿಷಾದನೀಯ ಎಂದು ಲೇಖಕ, ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಅವರು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿ, ಮಾಣಿ ಘಟಕದ ಆಶ್ರಯದಲ್ಲಿ ಅ.2ರಂದು ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಾಹಿತಿ ಡಾ. ಬಿ. ಜನಾರ್ದನ ಭಟ್ ಅವರಿಗೆ ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಮಾಧವ ಭಟ್ ರವರು ಮಾತನಾಡಿ ಸಾಹಿತ್ಯ ಬರಹಗಳನ್ನು ಓದುತ್ತಿರುವವರು ಅಪರೂಪವಾಗುತ್ತಿರುವ ಸನ್ನಿವೇಶದಲ್ಲಿ ಜನಾರ್ದನ ಭಟ್ ಅವರ ಸಾಹಿತ್ಯ ಸಾಧನೆ ವಿಶೇಷವಾಗಿದೆ. ಕನ್ನಡ ನಾಡಿನ ಮೇರು ಸಾಹಿತಿ ವಿಶುಕುಮಾರ್ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು  ರವರ ಜೀವನ ಮೌಲ್ಯ ಹೆಚ್ಚಿಸಿದೆ ಎಂದರು.
 ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ಆಶಾಲತಾ ಎಸ್ ಸುವರ್ಣ ಅವರು ಸಮೀಕ್ಷ ಶಿರ್ಲಾಲು ಅವರಿಗೆ  ಡಾ. ಪ್ರಭಾಕರ ನೀರುಮಾರ್ಗ ಯುವ ಸಾಹಿತಿ ಪ್ರಶಸ್ತಿ ಪ್ರದಾನ ಮಾಡಿದರು.  ತ್ರಿವೇಣಿ ಸನ್ಮಾನ ಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ‘ಯುವಸ್ಫೂರ್ತಿ ಭರವಸೆಯ ಬೆಳಕು’ ಪುಸ್ತಕ ಬಿಡುಗಡೆಯಾಯಿತು. 
ಕಾರ್ಯಕ್ರಮವನ್ನು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಸುರೇಶ್ ಸೂರ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ವಹಿಸಿದರು. ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಜಯಂತ ಬರಿಮಾರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ನಡೆಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಲತೀಶ್ ಎಂ.ಸಂಕೋಳಿಗೆ, ದ್ವಿತೀಯ ಬಹುಮಾನ ಪಡೆದ ಸುಪ್ರೀತಾ ಚರಣ್ ಪಾಲಪ್ಪೆ,‌ ತೃತೀಯ ಸ್ಥಾನ ಗಳಿಸಿದ ಅರ್ಚನ ಎಂ ಬಂಗೇರ, ತೀರ್ಪುಗಾರರ ಮೆಚ್ಚುಗೆ ಪಡೆದ ಯಶಸ್ವಿನಿ ಕುಳಾಯಿ ಕವನ ವಾಚಿಸಿದರು.
ಸೆಲ್ಫಿ ಉತ್ತರ ಸ್ಪರ್ಧೆಯಲ್ಲಿ ನಯನ ನೆಕ್ಕಿತ್ತಡ್ಕ ಕಡಬ, ಅರ್ಚನ ಎಂ ಬಂಗೇರ ಕುಂಪಲ, ರತಿ ಮಾಣಿ ಬಹುಮಾನ ಪಡೆದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ ಘಟಕ ಪ್ರಥಮ, ಹಾಗೂ ಕೊಲ್ಯ ಘಟಕ ದ್ವಿತೀಯ ಬಹುಮಾನ ಪಡೆಯಿತು. ಮಂಗಳೂರು ಮತ್ತು ಬೆಂಗಳೂರು ಯುವವಾಹಿನಿ ಘಟಕ ವಿಶೇಷ ಬಹುಮಾನ ಪಡೆದು ಕೊಂಡವು.
ಸಮಿತಿ ಸಂಚಾಲಕ ಪ್ರಶಾಂತ್ ಅನಂತಾಡಿ ಸ್ವಾಗತಿಸಿದರು. ಶಂಕರ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುದ್ದು ಮೂಡುಬೆಳ್ಳೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಸಮಿತಿಯ ಕಾರ್ಯದರ್ಶಿ ಜೀವನ್ ಕೊಲ್ಯ ವಂದಿಸಿದರು. ರೇಣುಕಾ ಕಣಿಯೂರು‌ ಹಾಗೂ ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here