ಅಂಬಿಕಾ ವಿದ್ಯಾಲಯದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ, ಪ್ರಯೋಗಾಲಯ ಉದ್ಘಾಟನೆ

0

ಗಣಿತದೊಳಗೆ ಅಗಣಿತ ವಿಷಯಗಳಿವೆ : ಪ್ರೊ.ವತ್ಸಲಾ ರಾಜ್ಞಿ

ಪುತ್ತೂರು : ಸಿ.ವಿ.ರಾಮನ್ ದೇಶ ಕಂಡ ಮಹಾನ್ ಗಣಿತಶಾಸ್ತ್ರಜ್ಞ. ಬಹುದೊಡ್ಡ ಸಾಧನೆ ಮಾಡಿದ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನೂ ಕಂಡವರು. ಅವರ ಜೀವನ ಚರಿತ್ರೆ ಎಲ್ಲರಿಗೂ ಒಂದು ಪಾಠ. ಗಣಿತ ವಿಷಯದೊಳಗೆ ಅಗಣಿತ ವಿಚಾರಗಳಿವೆ ಎಂಬುದನ್ನು ತೋರಿಕೊಟ್ಟವರು ಎಂದು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ವತ್ಸಲಾ ರಾಜ್ಞಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ನೂತನವಾಗಿ ರೂಪಿಸಲಾದ ಗಣಿತ ಪ್ರಯೋಗಾಲಯವನ್ನು ಉದ್ಘಾಟಿಸಿ, ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಗಣಿತದಲ್ಲಿ ತೀಕ್ಣಮತಿ ಹೊಂದಿದವರು ಮೇಧಾವಿಯಾಗಲು ಸಾಧ್ಯ. ಗಣಿತದಲ್ಲಿ ಸವಾಲುಗಳು ಎದುರಾದಾಗ ತಕ್ಷಣ ಸೂತ್ರಗಳನ್ನು ಹಾಕಿ ಪರಿಹಾರ ಕಂಡುಕೊಳ್ಳುವವರು ಜೀವನದಲ್ಲೂ ಕೂಡ ಏನೇ ಸಮಸ್ಯೆಗಳು ಬಂದರೂ ಕ್ಷಣ ಮಾತ್ರದಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಗಣಿತ ಒಂದು ಆರಾಧನೆ ಇದ್ದಂತೆ, ಇಲ್ಲಿ ನಿರಂತರ ಚಿಂತನೆ ನಡೆಯುತ್ತಿರುತ್ತದೆ ಎಂದರು.

ರಾಷ್ಟ್ರೀಯ ಗಣಿತ ದಿನದ ಸಲುವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಗಣಿತ ಉಪನ್ಯಾಸಕಿ ಕೃತಿಕಾ ಪ್ರಯೋಗಾಲಯದ ಕುರಿತು ಮಾಹಿತಿ ನೀಡಿದರು. ಒಂಬತ್ತನೇ ತರಗತಿ ವಿದ್ಯಾರ್ಥಿ ಅದ್ವಿಕ್ ಗಣಿತದ ಪ್ರಾಮುಖ್ಯತೆ, ಏಳನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಸಿ.ವಿ ರಾಮನ್ ಕುರಿತು ವಿಚಾರ ಮಂಡಿಸಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಶಾಲೆಯ ಪ್ರಾಂಶುಪಾಲೆ ಮಾಲತಿ ಡಿ. ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಏಳನೇ ತರಗತಿ ವಿದ್ಯಾರ್ಥಿ ನಿಹಾರಿಕಾ ಸ್ವಾಗತಿಸಿ, ಒಂಬತ್ತನೇ ತರಗತಿ ವಿದ್ಯಾರ್ಥಿ ಅಭಿನವ್ ವಂದಿಸಿದರು. ಖುಷಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here