ಸಾಲ ಮರುಪಾವತಿ ಮಾಡದ ಹಿನ್ನೆಲೆ: ಕಟ್ಟಡ ಸೀಝ್ ಮಾಡಲು ಬಂದ ಬ್ಯಾಂಕ್ ಅಧಿಕಾರಿಗಳೊಂದಿಗೆ ಕಟ್ಟಡಕ್ಕೆ ಸಂಬಂಧಿಸಿದವರ ಮಾತಿನ ಚಕಮಕಿ

0

ಪುತ್ತೂರು:ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ದರ್ಬೆ ಫೋರಮ್ ಹೈಟ್ಸ್, ಮೆ|ಸಹದ್ ರೆಂಟಲ್ ಪ್ರೈ ಲಿ ಅವರು ಪಡೆದ ಸಾಲವನ್ನು ನಾಲ್ಕೈದು ವರ್ಷದಿಂದ ಮರುಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಕಾನೂನಾತ್ಮಕವಾಗಿ ಕಟ್ಟಡವನ್ನು ಸೀಝ್ ಮಾಡುವ ನಿಟ್ಟಿನಲ್ಲಿ ಸ್ಥಳಕ್ಕೆ ಆಗಮಿಸಿದ್ದ ಬ್ಯಾಂಕ್ ಅಧಿಕಾರಿ ವರ್ಗದವರು ಹಾಗೂ ಕಟ್ಟಡಕ್ಕೆ ಸಂಬಂಧಿಸಿದವರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜ.3ರಂದು ನಡೆದಿದೆ.

ಮೆ|ಸಹದ್ ರೆಂಟಲ್ ಪ್ರೈ ಲಿ ಇವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪುತ್ತೂರು ಮುಖ್ಯ ಶಾಖೆಯಿಂದ ಪಡೆದ ಸಾಲವನ್ನು ಮರುಪಾವತಿಸಿಲ್ಲ ಎಂದು 2022ರ ಅ.28ರಂದು ಕಟ್ಟಡವನ್ನು ಬಹಿರಂಗವಾಗಿ ಹರಾಜು ಮಾಡಲಾಗಿತ್ತು. ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ‍್ಸ್ ಅವರು ಯಶಸ್ವಿ ಬಿಡ್ಡುದಾರರಾಗಿ ರೂ. 13.5 ಕೋಟಿಗೆ ಸದ್ರಿ ಸ್ಥಿರಾಸ್ಥಿಯನ್ನು ಬಹಿರಂಗ ಏಲಂನಲ್ಲಿ ಖರೀದಿ ಮಾಡಿದ್ದರು. 2022ರ ಡಿ.22ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮತ್ತು ವಸೂಲಾತಿ ಅಧಿಕಾರಿಗಳ ನ್ಯಾಯಾಲಯದಲ್ಲಿ ಮಾರಾಟ ಸ್ಥಿರೀಕರಣ ಆದೇಶ ನೀಡಲಾಗಿತ್ತು. ಡಿ.26ರಂದು ಪುತ್ತೂರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ‍್ಸ್ ಅವರ ಹೆಸರಿಗೆ ಇದರ ನೋಂದಾವಣೆ ಕೂಡಾ ಮಾಡಲಾಗಿತ್ತು. ಆ ಬಳಿಕ ಕಟ್ಟಡವನ್ನು ಸ್ವಾಧೀನತೆ ಪಡೆದು ಬಿಡ್ಡುದಾರರಿಗೆ ಹಸ್ತಾಂತರಿಸುವ ನಿಟ್ಟನಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನೊಂದಿಗೆ ಜ.3ರಂದು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಕಟ್ಟಡಕ್ಕೆ ಸಂಬಂಧಿಸಿದವರು ಮತ್ತು ಬ್ಯಾಂಕಿನವರ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ 7 ದಿನಗಳೊಳಗೆ ಕಟ್ಟಡ ಖಾಲಿ ಮಾಡಿ ಬಹಿರಂಗ ಹರಾಜಿನಲ್ಲಿ ಪಡೆದುಕೊಂಡವರಿಗೆ ಬಿಟ್ಟುಕೊಡುವಂತೆ ಬ್ಯಾಂಕ್ ಅಧಿಕಾರಿಗಳು ಸಂಬಂಧಿಸಿದವರಿಗೆ ಸೂಚಿಸಿದರಲ್ಲದೆ ಕಟ್ಟಡದ ಗೋಡೆಗಳಿಗೆ ನೋಟೀಸ್ ಅಂಟಿಸಿದರು. ಈ ಸಂದರ್ಭ ದ.ಕ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸೇಲ್ಸ್ ಆಫೀಸರ್ ಪ್ರಮೋದ್ ಕುಮಾರ್ ಜೈನ್, ಜೋವಲ್ ಪ್ರಕಾಶ್ ಡಿ’ಸೋಜ, ಹಿರಿಯ ನಿರೀಕ್ಷಕ ವಿಶ್ವನಾಥ ಶೆಟ್ಟಿ, ರಿಕವರಿ ಡೆವೆಲಪರ‍್ಸ್ ಆದರ್ಶ ವಿ ಪುತ್ತೂರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದರು.

ಕಟ್ಟಡವನ್ನು ಬಿಡ್ಡುದಾರರ ವಶಕ್ಕೆ ಕೊಡಲು ನೋಟೀಸ್

ಸಾಲವನ್ನು ಮರುಪಾವತಿಸದ ಹಿನ್ನೆಲೆಯಲ್ಲಿ ಕಟ್ಟಡ ಏಲಂ ಮಾಡಲಾಗಿದೆ. ಇದೀಗ ಏಲಂನಲ್ಲಿ ಖರೀದಿಸಿದವರಿಗೆ ಕಟ್ಟಡವನ್ನು ಬಿಟ್ಟು ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ 7 ದಿನಗಳೊಳಗೆ ಕಟ್ಟಡವನ್ನು ಬಿಟ್ಟು ಕೊಡುವಂತೆ ತಿಳಿಸಿದ್ದೇವೆ. ಈಗಾಗಲೇ ಬಂದ್ ಆಗಿರುವ ಕೋಣೆಗಳಿಗೆ ಬೀಗ ಹಾಕಿದ್ದೇವೆ.

ಗೋಪಾಲಕೃಷ್ಣ ಭಟ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌ಸಿಡಿಸಿಸಿ ಬ್ಯಾಂಕ್

LEAVE A REPLY

Please enter your comment!
Please enter your name here