ಫೆ.10ರಿಂದ ಮೂರು ದಿನಗಳ ಕಾಲ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ 5ನೇ ’ಕೃಷಿ ಯಂತ್ರ ಮೇಳ -2023’, ’ಕನಸಿನ ಮನೆ’ ಬೃಹತ್ ಪ್ರದರ್ಶನ

0

ಪುತ್ತೂರು: ಈ ವರ್ಷ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಪ್ರತಿಷ್ಟಿತ ಸಹಕಾರಿ ಸಂಸ್ಥೆ, ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಇದರ ಸಂಯುಕ್ತ ಆಶ್ರಯದಲ್ಲಿ 5ನೇ ಕೃಷಿ ಯಂತ್ರ ಮೇಳ 2023 ಹಾಗೂ ಕನಸಿನ ಮನೆ’ ಎನ್ನುವ ಬೃಹತ್ ಪ್ರದರ್ಶನ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆ. 10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ  ಹೇಳಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಈಗಾಗಲೇ ನಾಲ್ಕು ಯಂತ್ರಮೇಳಗಳು ನಡೆದಿದ್ದು, 2019ರಲ್ಲಿ ನಡೆದ ಮೇಳಕ್ಕೆ ಸುಮಾರು 3 ಲಕ್ಷ ಜನ ಭೇಟಿ ನೀಡಿದ್ದರು. ಹಾಗಾಗಿ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ಯಂತ್ರಮೇಳವು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಕೃಷಿಕರಿಗೆ ತಲಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಲ್ಲಿ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇರುತ್ತದೆ. ದೇಶ ವಿದೇಶಗಳ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಗತಿಪರ ಕೃಷಿಕರು ತಮ್ಮ ಅನುಭವದ ಆಧಾರದಲ್ಲಿ ತಾವೇ ತಯಾರಿಸಿದ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಕೃಷಿಕರ ಇಂದಿನ ಆವಶ್ಯಕತೆಗಳಿಗೆ ಸ್ಪಂದಿಸುವ ವಿಶೇಷ ಪ್ರಯತ್ನ ಇದಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ನೀಡುವ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ. ಮೂರು ದಿನಗಳಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳ್ನಾಡು ರಾಜ್ಯಗಳ ಸುಮಾರು 4 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗಾಗಿ ಉತ್ಪಾದಕರು, ಮಾರಾಟಗಾರರು, ಪ್ರದರ್ಶಕರಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಮೇಳದಲ್ಲಿ ಭಾಗವಹಿಸಿ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.

ಕನಸಿನ ಮನೆ ವಿಶೇಷ:

ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುವ ಉದ್ದೇಶದೊಂದಿಗೆ ಕನಸಿನ ಮನೆ ಎನ್ನುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ಮಾಣ, ಕಟ್ಟಡ ನಿರ್ಮಾಣದಲ್ಲಿನ ಹೊಸ ಹೊಸ ವಿನ್ಯಾಸಗಳ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು, ಹೊರಾಂಗಣ ಮತ್ತು ಒಳಾಂಗಣ ಶೃಂಗಾರ ಸಾಧನಗಳ ಪ್ರದರ್ಶನ, ಬಳಸಬಹುದಾದ ಮತ್ತು ಬಳಸಬೇಕಾದ ಪರಿಕರಗಳ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗುತ್ತದೆ ಎಂದು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಹೇಳಿದರು.

ಹೊಸ ಹೊಸ ಸಂಶೋಧಕರನ್ನು ಗುರುತಿಸಿ ಗೌರವ:

ಯುವ ಜನತೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು ಅನ್ವೇಷಿಸಿದ ಕೃಷಿ ಯಂತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಕೃಷಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸತನವನ್ನು ಹುಡುಕಿ ಅದಕ್ಕೆ ಪೂರಕವಾದ ಯಂತ್ರವನ್ನು ಅನ್ವೇಷಿಸಿ ಅದನ್ನು ಬಳಸಿ ಯಶಸ್ವಿಯಾದ ರೈತರ ಯಂತ್ರಗಳನ್ನು ಪ್ರದರ್ಶಿಸುವುದಕ್ಕೆ ಉಚಿತವಾದ ವೇದಿಕೆಯನ್ನು ಇಲ್ಲಿ ನೀಡಲಾಗುತ್ತಿದೆ. ಅಲ್ಲದೆ ಉತ್ತಮ ಸಂಶೋಧನಾಕಾರರನ್ನು ಗುರುತಿಸಿ ಗೌರವಿಸಲಾಗುತ್ತದೆ ಎಂದು ಪ್ರಭಾಕರ್ ಭಟ್ ಹೇಳಿದರು.

ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಟಿ:

ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ, ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆಯಲಿದೆ. ಇದರ ಜೊತೆಗೆ ಯಂತ್ರಮೇಳಗಳ ಕುರಿತು ಆಯಾಯಾ ಸ್ಟಾಲ್‌ಗಳಲ್ಲೇ ಮಾಹಿತಿ ನೀಡಲಾಗುತ್ತದೆ ಎಂದು ಡಾ.ಪ್ರಭಾಕರ್ ಭಟ್ ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ, ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ರಾಘವೇಂದ್ರ ಭಟ್ ಕೆದಿಲ, ಎಂ.ಡಿ. ಕೃಷ್ಣಕುಮಾರ್, ಕೃಷಿ ಯಂತ್ರ ಮೇಳ ಕಾರ್ಯಕ್ರಮದ ಆಯೋಜಕ ರವಿಕೃಷ್ಣ ಕಲ್ಲಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಅಗ್ರಿಕಲ್ಚರ್ ಮಾಲ್, ಕೋಕನಟ್ ಪ್ರೋಡಕ್ಟ್ ಕಟ್ಟಡಕ್ಕೆ ಶಂಕುಸ್ಥಾಪನೆ:

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಪುತ್ತೂರು ಎಂ.ಟಿ ರೋಡ್‌ನಲ್ಲಿರುವ ಕ್ಯಾಂಪ್ಕೋದಲ್ಲಿ ಅಗ್ರಿಕಲ್ಚರ್ ಮಾಲ್ ಮತ್ತು ಕ್ಯಾಂಪ್ಕೋ ಪ್ಯಾಕ್ಟರಿ ಪರಿಸರದಲ್ಲಿ ಕೋಕನಟ್ ಪ್ರೋಡಕ್ಟ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗುವುದು. ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ ಕೂಡ್ಗಿ ಅವರು ತಿಳಿಸಿದರು

292ಮಳಿಗೆಗಳು:

ಅಟೋಮೊಬೈಲ್ ವಿಭಾಗದಲ್ಲಿ 10, ಕನಸಿನ ಮನೆ ವಿಭಾಗದಲ್ಲಿ 73, ನರ್ಸರಿಯ 4 ವ್ಯಾಪಾರಕ್ಕೆ ಸಂಬಂಧಿಸಿ 26, ಆಹಾರ ಮಳಿಗೆಗಳು 19 ಹಾಗೂ ಸಾವಯವ ಕೃಷಿ ಮಳಿಗೆಗಳು 20 ಹೀಗೆ ಒಟ್ಟು 292 ಮಳಿಗೆಗಳು ಈ ಮೇಳದಲ್ಲಿದೆ. ಕೃಷಿಯಂತ್ರ ಮೇಳದ ಹೆಚ್ಚಿನ ಮಾಹಿತಿಗೆ ಮತ್ತು ಸ್ಟಾಲ್‌ಗಳ ನೋಂದಾವಣೆಗಾಗಿ 9483203087 | ಹಾಗೂ 9743250582 ನ್ನು ಸಂಪರ್ಕಿಸಬಹುದು. ಅದೇ ರೀತಿ ಕನಸಿನ ಮನೆ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ಮತ್ತು ಸ್ಟಾಲ್‌ಗಳ ನೋಂದಾವಣೆಗಾಗಿ  9448328280 ಹಾಗೂ 7760300456 ನ್ನು ಸಂಪರ್ಕಿಸಬಹುದು. ಅಲ್ಲದೆ ವೆಬ್‌ಸೈಟ್ WWW.vcetputtur.ac.in ಹಾಗೂ ಇ-ಮೈಲ್ ವಿಳಾಸ [email protected] ನಲ್ಲಿಯೂ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದು ಕೃಷಿ ಯಂತ್ರ ಮೇಳದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here