ರಥ ಮಂದಿರದಿಂದ ಬ್ರಹ್ಮರಥ ಹೊರ ತರುವ ಮುಹೂರ್ತದಿಂದ ಪುತ್ತೂರು ಜಾತ್ರೆಗೆ ಮುನ್ಸೂಚನೆ
ಪ್ರತಿ ವರ್ಷದಂತೆ ಬಿಲ್ವಪತ್ರೆ ಭೂಸ್ಪರ್ಶ ಮಾಡಿ ರಥ ಕಟ್ಟುವ ಸ್ಥಳ ಸೂಚನೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.16ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ. ಪ್ರತಿ ವರ್ಷದಂತೆ ರಥ ಕಟ್ಟುವ ಸ್ಥಳವನ್ನು ಬಿಲ್ವಪತ್ರೆ ಭೂಸ್ಪರ್ಶ ಮಾಡುವ ಮೂಲಕ ಸೂಚಿಸುವಂತೆ ಈ ಬಾರಿಯೂ ಬಿಲ್ವಪತ್ರೆ ಭೂಸ್ಪರ್ಶ ಮಾಡಿದೆ.

ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ. ರವೀಂದ್ರನಾಥ ರೈ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ನೌಕರ ಉಮೇಶ್ ಬಲ್ನಾಡು ಅವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.

ದೇವಳದ ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ದೇವಳದ ನೌಕರರು ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಿರ್ವಹಿಸಲಾಯಿತು. ದೇವಾಲಯದ ಕೆಲಸಗಾರರು ಸೇರಿ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಬಿ.ಕೆ. ವೀಣಾ, ದೇವಾಲಯದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ, ನಿತ್ಯ ಕರಸೇವಕ ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಬಿಲ್ವಪತ್ರೆ ಭೂಸ್ಪರ್ಶದಿಂದ ರಥ ಕಟ್ಟುವ ಸ್ಥಳ ಸೂಚನೆ:
ಪ್ರತಿ ವರ್ಷ ಬ್ರಹ್ಮರಥವನ್ನು ರಥ ಬೀದಿಗೆ ತಂದು ರಥಕಟ್ಟುವ ಸ್ಥಳವನ್ನು ರಥಕ್ಕೆ ಅರ್ಪಣೆ ಮಾಡಿದ ಬಿಲ್ವಪತ್ರೆ ಭೂಮಿ ಸ್ಪರ್ಶದ ಮೂಲಕ ಸೂಚಿಸುತ್ತದೆ. ದೇವಳದ ಬಳಿಯ ನಾಗ ಸನ್ನಿಧಿಯ ಮುಗುಳಿಗೆ ಬ್ರಹ್ಮರಥವನ್ನು ನಿಲ್ಲಿಸಲಾಗುತ್ತದೆ. ಬ್ರಹ್ಮರಥ ರಥ ಬೀದಿ ಪ್ರವೇಶಿಸಿ ನಾಗ ಸನ್ನಿಧಿಯ ಮುಗುಳಿಗೆ ಸರಿಯಾಗಿ ಬರುತ್ತಿದ್ದಂತೆ ಬಿಲ್ವಪತ್ರೆ ಮತ್ತು ಗಂಧ ಪ್ರಸಾದ ಭೂಮಿಯನ್ನು ಸ್ಪರ್ಶ ಮಾಡುವ ಮೂಲಕ ರಥ ನಿಲ್ಲಿಸುವ ಸೂಚನೆ ನೀಡುವುದು ವಿಶೇಷ.

LEAVE A REPLY

Please enter your comment!
Please enter your name here