ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ʼಟೆಕ್ ಉತ್ಸವʼ

0

ಪುತ್ತೂರು : (ಮೇ.31) ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಆ ಅವಕಾಶಗಳನ್ನು ಬಳಸಿಕೊಳ್ಳಲು ನಮ್ಮಲ್ಲಿ ಕೌಶಲ್ಯವಿರಬೇಕು. ಆದ್ದರಿಂದ ವಿಭಾಗವು ಆಯೋಜಿಸುವ ಇಂತಹ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಾವು ಪರಿಣತಿ ಹೊಂದುತ್ತೇವೆ. ನಾವು ಜೀವನದಲ್ಲಿ ಉತ್ತಮ ನಡವಳಿಕೆಯನ್ನು ಹೊಂದಿರಬೇಕು ಅದು ನಮ್ಮ ವೃತ್ತಿ ಜೀವನಕ್ಕೆ ಸಹಕಾರಿಯಾಗುತ್ತದೆ. ಅದರೊಂದಿಗೆ ಹಿರಿಯರ ಮಾರ್ಗದರ್ಶನವು ನಮ್ಮೊಂದಿಗೆ ಇದ್ದರೆ ಯಶಸ್ಸನ್ನು ಪಡೆಯಬಹುದು.ಅಬ್ದುಲ್ ಕಲಾಂ ರವರ ಅಭಿಪ್ರಾಯದಂತೆ “ಸಣ್ಣ ಗುರಿಯನ್ನು ಹೊಂದುವುದು ಅಪರಾಧವಾಗಿದೆ ಆದ್ದರಿಂದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ” ಎಂಬ ಮಾತಿನಂತೆ ನಾವು ಹಿರಿದಾದ ಗುರಿಯನ್ನು ಹೊಂದಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನ ಎಂ.ಸಿ.ಎ ವಿಭಾಗದ ಸಹಾಯಕ ಉಪನ್ಯಾಸಕಿ ಮತ್ತು ನಿರ್ದೇಶಕಿ ಡಾ. ವಂದನಾ ಬಿ. ಎಸ್ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಗಣಕ ವಿಜ್ಞಾನ, ಐಟಿ ಕ್ಲಬ್ ಮತ್ತು ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಆಯೋಜಿಸಿದ ಟೆಕ್ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ಇಂದು ಮಕ್ಕಳಿಗೆ ಅಗತ್ಯವಿರುವುದು ಕೌಶಲ್ಯಗಳು. ಅದರೊಂದಿಗೆ ತಾಂತ್ರಿಕ ಕ್ಷೇತ್ರಕ್ಕೆ ಆಂಗ್ಲ ಭಾಷೆಯಲ್ಲಿ ಪರಿಣತಿಯನ್ನು ಹೊಂದಿರುವುದು ಮುಖ್ಯವಾಗಿದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಎಲ್ಲರೂ ಭಾಗವಹಿಸಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಇದು ನಮ್ಮ ಮುಂದಿನ ಜೀವನಕ್ಕೆ ಉಪಕಾರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.

ಸಮಾರೋಪ ಸಮಾರಂಭ
ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಹಲವಾರು ಸಮಸ್ಯೆಗಳು ಗೊಂದಲಗಳು ನಮ್ಮಲ್ಲಿ ಉಂಟಾಗುತ್ತದೆ. ಅದನ್ನೆಲ್ಲವನ್ನು ಹೋಗಲಾಡಿಸಲು ನಮ್ಮಲ್ಲಿ ಆತ್ಮವಿಶ್ವಾಸ ಆತ್ಮಸ್ಥೈರ್ಯವಿರಬೇಕು. ಅದು ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಮತ್ತು ಇಲ್ಲಿ ನೆರೆದಿರುವ ವಿದ್ಯಾರ್ಥಿಗಳ ಮುಖದಲ್ಲಿ ಧನಾತ್ಮಕ ನಗು, ಆತ್ಮವಿಶ್ವಾಸವನ್ನು ನಾನು ನೋಡುತ್ತೇನೆ. ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಸ್ವೀಕರಿಸಬೇಕು. ನಾವು ನಡೆಯುವ ದಾರಿಯಲ್ಲಿ ಎಡವಬಾರದು. ಎಲ್ಲವನ್ನು ಧೈರ್ಯದಿಂದ ಸ್ವೀಕರಿಸಬೇಕು ಎಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ಅಡ್ಮಿಶನ್ ಅಂಡ್ ಪ್ಲೇಸ್ಮೆಂಟ್ ಮುಖ್ಯಸ್ಥೆ ವಂದನಾ ಶಂಕರ್ ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರೊ. ಶ್ರೀಪತಿ ಕಲ್ಲುರಾಯ ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನಾಡಿ, ಈ ಕಾರ್ಯಕ್ರಮವು ವಿದ್ಯಾರ್ಥಿ ಜೀವನದ ಗೆಲುವಿಗೆ ಹೊಸದೊಂದು ಮೆಟ್ಟಿಲಾಗಿದೆ. ಪಠ್ಯ ಚಟುವಟಿಕೆಗಳಲ್ಲಿ ಕೆಲವರು ಆಸಕ್ತಿಯುಳ್ಳವರಾಗಿದ್ದಾರೆ, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣ ಪದ್ಧತಿಗೂ ತುಂಬಾ ವ್ಯತ್ಯಾಸಗಳಿವೆ. ಶಿಕ್ಷಣ ಪದ್ಧತಿಯು ದಿನೇ ದಿನೇ ವಿವಿಧ ಮಟ್ಟದಲ್ಲಿ ಮುಂದುವರೆಯುತ್ತಿದೆ. ಆದ್ದರಿಂದ ಅದಕ್ಕೆಲ್ಲ ವಿದ್ಯಾರ್ಥಿಗಳು ತಯಾರಿ ಹೊಂದಬೇಕು. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಾಗ ನಮಗೆ ಹೆಚ್ಚಿನ ಜ್ಞಾನ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಟೆಕ್ ಉತ್ಸವದ ಚಾಂಪಿಯನ್ ಶಿಪ್ ಗಳಾಗಿ ದ್ವಿತೀಯ ಬಿಸಿಎ ಎ ಸೆಕ್ಷನ್ ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು ಮತ್ತು ರನ್ನರ್ಸ್ ಗಳಾಗಿ ದ್ವಿತೀಯ ಬಿಸಿಎ ಬಿ ಸೆಕ್ಷನ್ ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು.
ವೇದಿಕೆಯಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ.ಎಸ್ , ಆಡಳಿತ ಮಂಡಳಿಯ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯ್ಕ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐ.ಟಿ ಕ್ಲಬ್ ನ ಸಂಯೋಜಕ ಸೂರ್ಯನಾರಾಯಣ ಪಿ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐ.ಟಿ ಕ್ಲಬ್ ನ ಸಂಯೋಜಕಿ ಹಾಗೂ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಹೇಮ ಸುಭಾಷಿಣಿ ಸ್ವಾಗತಿಸಿ, ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿಗಳಾದ ಸ್ಪೂರ್ತಿ ವಂದಿಸಿ, ಅಮೃತ ಹೆಚ್.ಎಸ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here