ಮಣಿಪುರ ರಾಜ್ಯದಲ್ಲಿ ಕ್ರೈಸ್ತರ ವಿರುದ್ಧ‌ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಿರಿ-ಮಲೆಯಾಳಿ ಕ್ರಿಶ್ಚನ್ ಅಸೋಸಿಯೇಶನ್ ಆಗ್ರಹ

0

ಕಡಬ: ಮಣಿಪುರದಲ್ಲಿ ಕ್ರೈಸ್ತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಹತ್ತಿಕ್ಕುವಂತೆ ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಆಗ್ರಹಿಸಿದೆ.


ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಎ.ಸಿ.ಜಯರಾಜ್ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಲ್ಲಿನ ಸರಕಾರದ ಕುಮ್ಮಕ್ಕಿನಿಂದ ಹಿಂಸಾಚಾರ ನಡೆಯುತ್ತಿದ್ದು ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಮಣಿಪುರದಲ್ಲಿ ಸುಮಾರು ಶೇ 60-65 ಮೈತೇಯಿ ಸಮುದಾಯದವರು ಹಾಗೂ 35 ಕುಕ್ಕಿ, ನಾಗಾ ಹಾಗೂ ಇತರ ಸಮುದಾಯಗಳಿವೆ. ಇವರು ಇಂಪಾಲ ನಗರ ಹಾಗೂ ಸುತ್ತಮುತ್ತಲೂ ವಾಸ್ತವ್ಯ ಇದ್ದಾರೆ. ಮೈತೇಯಿ ಸಮುದಾಯದ ಸುಮಾರು ಶೇ 90 ಜನರು ಹಿಂದುಗಳಾಗಿದ್ದು ಮಣಿಪುರದ ಕಣಿವೆ ಪ್ರದೇಶದಲ್ಲಿ ವಾಸ್ತವ್ಯ ಇದ್ದಾರೆ. ಕಣಿವೆ ಪ್ರದೇಶದಲ್ಲಿ ಯಾವ ಸಮುದಾಯದವರು ಬೇಕಾದರೂ ಭೂಮಿ ಖರೀದಿ ಮಾಡಬಹುದು. ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಕ್ಕಿ ಸಮುದಾಯ ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ಸಂವಿಧಾನದ ಪ್ರಕಾರ ವಿಶೇಷವಾದ ರಕ್ಷಣೆ ಇರುತ್ತದೆ. ಇವರ ಭೂಮಿಯನ್ನು ಮೈತೇಯಿ ಸಮುದಾಯದವರಿಗೆ ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.
ಮಣಿಪುರ ವಿಧಾನ ಸಭೆಯ 60 ವಿಧಾನ ಸಭಾ ಸದಸ್ಯರ ಪೈಕಿ 40 ವಿಧಾನ ಸಭಾ ಸದಸ್ಯರನ್ನು ಮೈತೇಯ ಸಮುದಾಯದವರು, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಾಢ್ಯವಾಗಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕೂಡಾ ಇದೇ ಸಮುದಾಯದವರಾಗಿದ್ದಾರೆ. ಆದರೆ ಕುಕ್ಕಿ ಪಂಗಡದ ಜನರೆಲ್ಲರೂ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಇವರಿಗೆ ಸಂವಿಧಾನದಲ್ಲಿ ವಿಶೇಷವಾದ ರಕ್ಷಣೆ ಇದೆ. ಗುಡ್ಡಗಾಡು ಪ್ರದೇಶಗಳನ್ನು ಬಲಾಢ್ಯವಾದ ಮೈತೇಯಿ ಪಂಗಡದವರು ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದರೆ ಇಲ್ಲಿನ ಬಿಜೆಪಿ ಸರಕಾರವು ಗುಡ್ಡಗಾಡು ಪ್ರದೇಶಗಳಿಂದ ಕುಕ್ಕಿ ಸಮುದಾಯದ ಜನರನ್ನು, ಅವರು ಮಾದಕದ್ರವ್ಯ ಬೆಳೆಗಳನ್ನು ಬೆಳೆಸುತ್ತಾರೆಂದು ಸುಳ್ಳು ಆರೋಪದಡಿ ಬಲತ್ಕಾರವಾಗಿ ಕಾನೂನು ವಿರುದ್ಧವಾಗಿ ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ. ಇದರ ವಿರುದ್ಧ ರ‍್ಯಾಲಿಯನ್ನು ಸಂಘಟಿಸಿದರೆ ಈ ರ‍್ಯಾಲಿಗಳ ಮೇಲೆ ಅಲ್ಲಿನ ಬಿಜೆಪಿ ಸರಕಾರ ಮೈತೇಯಿ ಪಂಗಡದ ಜನರನ್ನು ಛೂ ಬಿಟ್ಟು ಪ್ರತಿಭಟನಾ ನಿರತ ಕುಕ್ಕಿ ಪಂಗಡದ ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಮಣಿಪುರ ಪೊಲೀಸ್ ಹಿಂಸಾಚಾರವನ್ನು ತಡೆಯದೆ ಮೂಕಪ್ರೇಕ್ಷಕರಾಗಿದ್ದಾರೆ. ಸುಮಾರು 247 ಚರ್ಚ್‌ಗಳಿಗೆ ಹಾಗೂ ಮೂರುಸಾವಿರ ಕ್ರೈಸ್ತರ ಮನೆಗಳಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಸಾವಿರಾರು ಕ್ರೈಸ್ತರು ಗಾಯಗೊಂಡಿದ್ದಾರೆ ಸಾವಿರಾರು ಮಂದಿ ಪ್ರಾಣ ಭಯದಿಂದ ಮನೆ ಮಠಗಳನ್ನು ಬಿಟ್ಟು ಅರಣ್ಯದಲ್ಲಿ ಅವಿತಿರುತ್ತಾರೆ. ಕ್ರೈಸ್ತರ ಮೇಲಿನ ಹಿಂಸಾಚಾರನ್ನು ನಿಲ್ಲಿಸುವಂತೆ ಮನವಿ ಮಾಡಲು ಪ್ರಧಾನಿಯವರು ಅವಕಾಶವನ್ನೇ ನೀಡಲಿಲ್ಲ. ಈವರೆಗೆ ಘಟನೆಯ ಬಗ್ಗೆ ಚಕಾರವೆತ್ತಲಿಲ್ಲ. ಗೃಹ ಸಚಿವರಾದ ಅಮಿತ್ ಶಾ ಮಣಿಪುರಕ್ಕೆ ಭೇಟಿ ಕೊಟ್ಟ ನಂತರ ಹಿಂಸಾಚಾರ ಭುಗಿಲೆದ್ದಿದೆ. ಕೇಂದ್ರದಿಂದ ಕಳುಹಿಸಲಾದ 40 ಸಾವಿರ ಸೈನಿಕರು ಹಾಗೂ ಸ್ಥಳೀಯ ಪೋಲೀಸರು ಹಿಂಸಾಚಾರ ತಡೆಯುವಲ್ಲಿ ವಿಫಲರಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಇಲ್ಲಿನ ರಾಜ್ಯ ಹಾಗೂ ಕೇಂದ್ರ ಸರಕಾರ ಕ್ರೈಸ್ತರ ವಿರುದ್ಧ ಹಿಂಸಾಚಾರಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಆರೋಪಿಸಿದ ಜಯರಾಜ್ ತಕ್ಷಣ ಪ್ರಧಾನ ಮಂತ್ರಿಯವರು ಹಿಂಸಾಚಾರ ಮಟ್ಟ ಹಾಕಲು ಸೂಕ್ತ ಕ್ರಮಕೈಗೊಳ್ಳಬೇಕು ತಪ್ಪಿದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಕ್ರೈಸ್ತರು ಮಣಿಪುರ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಪ್ರಮುಖರಾದ ರೋಯ್ ಅಬ್ರಹಾಂ, ಸೈಮನ್ ಸಿ.ಜೆ, ಜೋರ್ಜ್ ಕುಟ್ಟಿ. ಕ್ಸೇವಿಯರ್ ಬೇಬಿ, ವಲ್ಸಮ್ಮ ಕೆ.ಟಿ, ವರ್ಗೀಸ್ ಅಬ್ರಹಾಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here