ಚಂದನವನಕ್ಕೆ ಪುತ್ತೂರ ಚೆಲುವೆ

0

`ನಂಬರ್ ಪ್ಲೇಟ್’ ಚಿತ್ರದ ನಾಯಕಿಯಾಗಿ ಕೀರ್ತಿ ಗೌಡ

ಹತ್ತೂರಲ್ಲೂ ಪ್ರಸಿದ್ಧಿ ಪಡೆದಿರುವ ಪುತ್ತೂರಿನ ಅನೇಕ ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ನಮ್ಮೂರಿನ ಅದೆಷ್ಟೋ ಪ್ರತಿಭೆಗಳು ಕಿರುತೆರೆ, ಹಿರಿತೆರೆಗಳಲ್ಲಿ ಮಿಂಚುತ್ತಿದ್ದರೂ ಕೆಲವೊಮ್ಮೆ ಅದು ಯಾರಿಗೂ ಗೊತ್ತಾಗುವುದೇ ಇಲ್ಲ. ಅದರಲ್ಲೂ ಪುತ್ತೂರಿನ ಅನೇಕ ಕಲಾವಿದರು ಕಲಾ ಸೇವೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇದೀಗ ಚಂದನವನದಲ್ಲಿ ಸದ್ದು ಮಾಡಲು ಪುತ್ತೂರಿನ ಚೆಲುವೆಯೊಬ್ಬಳು ಸಿದ್ದಗೊಂಡಿದ್ದಾರೆ.


ಪುತ್ತೂರಿನ ಬೆಡಗಿ, ಕೀರ್ತಿ ಗೌಡ ಅವರು ಚಂದನವನಕ್ಕೆ ತನ್ನ ಮೊದಲ ಹೆಜ್ಜೆಯನ್ನಿಟ್ಟಿದ್ದು `ನಂಬರ್ ಪ್ಲೇಟ್’ ಎಂಬ ಕನ್ನಡ ಚಿತ್ರಕ್ಕೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ.
ಗಂಗರಾಜ್ ಪಿ.ಆರ್ ನಿರ್ದೇಶನದ ನಂಬರ್ ಪ್ಲೇಟ್ ಚಿತ್ರದ ಮುಹೂರ್ತ ಇದೇ ಸೆ.11ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಇನ್ನು ಈ ಚಿತ್ರಕ್ಕೆ ರವಿ ರಾಮದುರ್ಗ ಅವರ ಛಾಯಾಗ್ರಾಹಣ, ಹೇಮಂತ್ ಕುಮಾರ್ ಅವರ ಸಂಗೀತ, ಶ್ರೀಧರ್ ತುಮಕೂರು ಅವರ ಸಾಹಿತ್ಯ, ಗೌರೀಶ್ ಅವರ ನೃತ್ಯ ಸಂಯೋಜನೆ, ಫಯಾಜ್ ಖಾನ್ ಹಾಗೂ ಚಿನ್ನಯ್ಯ ಅವರ ಸಾಹಸ ನಿರ್ದೇಶನವಿದೆ.ಈ ಚಿತ್ರದಲ್ಲಿ ನಾಯಕ ನಟಿಯಾಗಿ ಕೀರ್ತಿ ಗೌಡ ಕಾಣಿಸಿಕೊಂಡರೆ ಇವರಿಗೆ ಜೋಡಿಯಾಗಿ ವೇಷಧಾರಿ, ಗ್ರೂಫಿ, ಶತೃಘ್ನ ಚಿತ್ರದ ನಾಯಕ ನಟ ಆರ್ಯನ್ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.


ಬಾಲ್ಯದಿಂದಲೇ ನಟಿಯಾಗುವ ಕನಸನ್ನು ಕಂಡಿದ್ದ ಕೀರ್ತಿ ಇವರು ಪುತ್ತೂರಿನ ಡ್ರೀಮ್ ಕ್ಯಾಚರ್ಸ್ ಆಕ್ಟಿಂಗ್ ಕ್ಲಾಸ್‌ನಲ್ಲಿ ತನ್ನ ಆಕ್ಟಿಂಗ್ ತರಬೇತಿಯನ್ನು ಪಡೆದು ಹಲವಾರು ಆಲ್ಬಮ್ ಸಾಂಗ್ಸ್, ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಕೀರ್ತಿ ಗೌಡ ಅವರು ಸವಣೂರು ದಿ.ನಾರಾಯಣ ಗೌಡ ಹಾಗೂ ಪುಷ್ಪಾವತಿ ದಂಪತಿ ಪುತ್ರಿ.

ಇದೀಗ ನಂಬರ್ ಪ್ಲೇಟ್ ಚಿತ್ರಕ್ಕೆ ನಾಯಕ ನಟಿಯಾಗಿರುವುದು ತುಂಬಾ ಖುಷಿಯಾಗಿದೆ ಹಾಗೂ ತನ್ನ ಕನಸು ಈಡೇರಿತು ಎಂಬ ಮಾತನ್ನು ಕೀರ್ತಿ ಗೌಡ ಹೇಳಿಕೊಂಡಿದ್ದಾರೆ. ಈ ಚಿತ್ರದ ಚಿತ್ರಿಕರಣ ಸೆ.12ರಿಂದ ಪುತ್ತೂರು, ಸುಳ್ಯ, ಬೆಂಗಳೂರು ಹಾಗೂ ಹಲವಾರು ಪ್ರದೇಶಗಳಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here