ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿ- ಕೇಂದ್ರ ಸರಕಾರಕ್ಕೆ ಕರ್ನಾಟಕ ಹೈಕೋರ್ಟ್ ಸಲಹೆ

0

ಬೆಂಗಳೂರು:ಮತದಾನಕ್ಕೆ ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಲೂ ವಯೋಮಿತಿ ನಿಗದಿ ಮಾಡಲು ಸಾಧ್ಯವೇ ಎಂದು ಚಿಂತನೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಸಲಹೆ ನೀಡಿದೆ.


ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್(ಟ್ವಿಟರ್)ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ವಿಜಯ ಕುಮಾರ್ ಎ. ಪಾಟೀಲ್ ಅವರಿಂದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈಗ ಶಾಲೆಗೆ ಹೋಗುವ ಮಕ್ಕಳೂ ಅದಕ್ಕೆ ದಾಸರಾಗಿದ್ದಾರೆ.ಕನಿಷ್ಠ ಪಕ್ಷ ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು. 17 ಅಥವಾ 18ರ ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು? ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ?ಎಂದು ಪೀಠ ಪ್ರಶ್ನಿಸಿತು.


ಇದೇ ವೇಳೆ ಪೀಠವು ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು.ಕೆಲವು ಆನ್‌ಲೈನ್ ಗೇಮ್ ಆಡಲು ಕಾನೂನಿನ ಪ್ರಕಾರ ಈಗ ಆಧಾರ್ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೇಂದ್ರ ಸರಕಾರದ ಪರ ವಕೀಲ ಎಂ.ಎನ್. ಕುಮಾರ್ ನ್ಯಾಯಪೀಠದ ಗಮನ ಸೆಳೆದಾಗ,ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ ಎಂದು ಪ್ರಶ್ನಿಸಿದ ನ್ಯಾಯಪೀಠ, ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ನಿಮ್ಮ ಕಕ್ಷಿದಾರರು (ಎಕ್ಸ್ ಕಾರ್ಪ್) ಇದಕ್ಕೆ ಒಪ್ಪದಿರಬಹುದು ಎಂದಿತು.


ಗೌಪ್ಯತೆ ಕಾಪಾಡುವುದರ ಜೊತೆಗೆ ಪೋಸ್ಟ್ ಅಥವಾ ಖಾತೆ ನಿರ್ಬಂಧಿಸಬೇಕು ಎಂದು ಕೇಂದ್ರ ಸರಕಾರ ಆದೇಶಿಸಿದರೆ ಬಳಕೆದಾರರು ಮಧ್ಯಸ್ಥಿಕೆ ಸಂಸ್ಥೆ ಎಕ್ಸ್ ಕಾರ್ಪ್‌ಗೆ ದಾವೆಯ ಬೆದರಿಕೆ ಹಾಕುವುದರಿಂದ ತಪ್ಪಿಸಲು ಸಹ ನಿಯಮಗಳಲ್ಲಿ ಸೂಕ್ತ ಮಾರ್ಪಾಟು ಮಾಡಬೇಕು ಎಂದೂ ನ್ಯಾಯಾಲಯ ಇಂಗಿತ ವ್ಯಕ್ತಪಡಿಸಿತು.
ಆಕ್ಷೇಪಾರ್ಹವಾದ ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 69ಎ (1) ಮತ್ತು (2) ಉಲ್ಲಂಸುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಇದನ್ನು ಉಲ್ಲಂಸುವುದು ಕಂಡುಬಂದರೆ ಎಕ್ಸ್ ಕಾರ್ಪ್ ನಿರ್ಬಂಧ ಆದೇಶಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.ಎಕ್ಸ್ ಕಾರ್ಪ್ ಪ್ರತಿನಿಧಿಸಿದ್ದ ವಕೀಲರು, ಈ ಹಿಂದೆ ಪ್ರಶ್ನಿಸಿದ್ದ ಎಲ್ಲ ನಿರ್ಬಂಧ ಆದೇಶಗಳನ್ನು ಪಾಲಿಸಲಾಗಿದೆ.ಸಕಾರಣವಿಲ್ಲದೇ ೧ ಸಾವಿರ ಟ್ವಿಟ್‌ಗಳನ್ನು ತೆಗೆಯುವಂತೆ ಹೇಳಲಾಗಿದೆ ಎಂದರು.ಕೇಂದ್ರ ಸರಕಾರವು ತಾನು ನಿರ್ಬಂಧ ಆದೇಶ ಮಾಡುವಾಗ ಅದಕ್ಕೆ ಸಮರ್ಥನೆ ನೀಡಬೇಕು. ಇಲ್ಲವಾದಲ್ಲಿ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವನ್ನು ಅದರ ಬಳಕೆದಾರರು ನ್ಯಾಯಾಲಯಕ್ಕೆ ಎಳೆಯಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.

LEAVE A REPLY

Please enter your comment!
Please enter your name here