ಅಂಬಿಕಾ ವಿದ್ಯಾಲಯದಲ್ಲಿ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

0

ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರತಿಭೆ ಕಾರ್ಯನಿರ್ವಹಿಸುತ್ತದೆ : ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ಉತ್ಕೃಷ್ಟ ಕಲಾವಿದರು ರೂಪುಗೊಳ್ಳಬೇಕಾದರೆ ವೇದಿಕೆಗಳು ನಿರಂತರವಾಗಿ ಲಭ್ಯವಾಗಬೇಕು. ಎಳೆಯ ವಯಸ್ಸಿನಿಂದಲೇ ಸರಿಯಾದ ಅವಕಾಶಗಳು ದೊರಕುತ್ತಾ ಸಾಗಿದಲ್ಲಿ ಪ್ರತಿಭೆ ಬೆಳಗುತ್ತಾ ಸಾಗುವುದಕ್ಕೆ ಸಾಧ್ಯ. ಶಿಕ್ಷಣ ಸಂಸ್ಥೆಗಳು ಕರ್ತವ್ಯಪ್ರಜ್ಞೆಯಿಂದ ವೇದಿಕೆಗಳನ್ನು ಕಲ್ಪಿಸಿಕೊಡುವ ಕಾರ್ಯಗಳನ್ನು ಮಾಡಬೇಕಿದೆ. ಹಾಗಾದಾಗ ಮಕ್ಕಳಲ್ಲಿ ಹುದುಗಿರಬಹುದಾದ ಅವೆಷ್ಟೋ ಸಾಂಸ್ಕೃತಿಕ ಸಂಗತಿಗಳು ಅನಾವರಣಗೊಳ್ಳಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ದಶಮಾನೋತ್ಸವ ಆಚರಣೆ – ದಶಾಂಬಿಕಾ ಪ್ರಯುಕ್ತ ಮೂರು ದಿನಗಳ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಜೀವನವನ್ನು ನೀಡುವುದು ಹೌದಾದರೂ ವ್ಯಕ್ತಿಯೊಳಗಿನ ಪ್ರತಿಭೆ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಮ್ಮ ಮಕ್ಕಳನ್ನು ಸರ್ವತೋಮುಖವಾಗಿ ತಯಾರು ಮಾಡುವಲ್ಲಿ ದೊರಕುವ ವೇದಿಕೆಗಳ ಸದ್ಬಳಕೆ ಅತ್ಯಂತ ಮುಖ್ಯ. ಲಲಿತ ಕಲೆಗಳ ಮೂಲಕ ದೇವಿಯನ್ನು ಸಂತೃಪ್ತಿಪಡಿಸುವ ಕಾರ್ಯ ನಡೆಯುವುದು ಶ್ಲಾಘನಾರ್ಹ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ದಸರಾದ ರೂವಾರಿ ವಾಟೆಡ್ಕ ಕೃಷ್ಣ ಭಟ್ ಮಾತನಾಡಿ ನವರಾತ್ರಿಯ ಸಂಭ್ರಮದಲ್ಲಿ ಅತ್ಯುತ್ತಮ ಅವಕಾಶ ಎಳೆಯ ಮಕ್ಕಳಿಗೆ ಒದಗಿಬಂದಿದೆ. ಅದನ್ನು ಸದ್ವಿನಿಯೋಗ ಮಾಡಿಕೊಂಡು ಮುನ್ನಡೆಯಬೇಕು ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ತರಗತಿ ವಿದ್ಯಾರ್ಥಿ ಶ್ರೀಕೃಷ್ಣ ಎಸ್.ನಟ್ಟೋಜ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಲಲಿತಾಂಬಿಕಾ ದೇವಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here