ಮತೀಯ ಸಂಘರ್ಷವುಂಟು ಮಾಡುವವರ ವಿರುದ್ಧ ಕ್ರಮವಾಗಲಿ: ಪತ್ರಿಕಾಗೋಷ್ಠಿಯಲ್ಲಿ ಡಾ. ರಾಜಾರಾಮ್ ಕೆ.ಬಿ.

0

ಉಪ್ಪಿನಂಗಡಿ: ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತ ಶ್ರಮಿಸುತ್ತಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ರವರ ಶ್ರೀರಂಗಪಟ್ಟಣದಲ್ಲಿನ ಹೇಳಿಕೆ ಅವರ ಘನತೆಗೆ ಶೋಭೆ ತರುವುದಿಲ್ಲ. ಸಮಾಜದಲ್ಲಿ ಹಿರಿತನವನ್ನು ಹೊಂದಿರುವ ಅವರು, ಸಮಾಜದ ಮನಸ್ಸುಗಳನ್ನು ಅರಳಿಸಬೇಕೇ ವಿನಹ ಕೆರಳಿಸಬಾರದು. ಮನಸೋ ಇಚ್ಚೆ ಮಾತನಾಡಿ ಮತೀಯ ಸಂಘರ್ಷವನ್ನು ಉಂಟು ಮಾಡುವ ಯಾರೇ ಆಗಲಿ ಅವರ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕೆಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ. ಒತ್ತಾಯಿಸಿದರು.


ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ನಮ್ಮ ಧರ್ಮ ,ಸಂಸ್ಕೃತಿ , ಸಂಸ್ಕಾರದ ಆಚರಣೆಗೆ ಮುಕ್ತ ಅವಕಾಶ ಇರುವಂತೆಯೇ, ಅನ್ಯರ ಧಾರ್ಮಿಕ ನಂಬಿಕೆಯನ್ನು ಗೌರವಿಸುವುದು ನಮ್ಮ ಧರ್ಮ. ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ತೀರಾ ಕೀಳು ಮಟ್ಟದ ಭಾಷೆಯಲ್ಲಿ ಅವಮಾನಿಸಿ ಹೇಳಿಕೆ ನೀಡಿರುವುದು ಅವರ ಗೌರವವನ್ನು ಅವರೇ ಇಳಿಸಿದಂತಾಗಿದೆ. ಮಾತ್ರವಲ್ಲದೆ ಸಭ್ಯರೆನಿಸಿಕೊಂಡ ದ.ಕ ಜಿಲ್ಲೆಯ ಜನತೆಗೆ ಅವಮಾನಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತಾಗಲು ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಂದಾಳು ಡಾ. ರಘು ಮಾತಾನಾಡಿ, ಹಲವಾರು ಶಾಲೆಗಳನ್ನು ನಡೆಸುತ್ತಿರುವ, ಧಾರ್ಮಿಕವಾಗಿ ಸಾಮಾಜಿಕವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸ್ವತಹ ಒರ್ವ ವೈದ್ಯರಾಗಿದ್ದೂ ಸಮಾಜದಲ್ಲಿ ಅಶಾಂತಿ ಸೃಷ್ಠ್ಠಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಕಾಂಗ್ರೆಸ್ ಮುಂದಾಳು ಅರ್ತಿಲ ಕೃಷ್ಣ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here