ಎಪಿಎಂಸಿ ಯಾರ್ಡ್ ತರಕಾರಿ ವರ್ತಕರಿಂದ ಲಂಚಕ್ಕೆ ಬೇಡಿಕೆ ಆರೋಪ-ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರರಿಗೆ ಕಡ್ಡಾಯ ರಜೆ

0

ಪುತ್ತೂರು:ಎಪಿಎಂಸಿ ಯಾರ್ಡ್ನ ತರಕಾರಿ ವರ್ತಕರಿಗೆ ಪರವಾನಿಗೆ ನೀಡಲು ಹಾಗು ಯಾರ್ಡ್ ಒಳಗೆ ವಾಹನ ಪ್ರವೇಶಕ್ಕೆ ಲಂಚದ ಬೇಡಿಕೆ ಇಟ್ಟಿರುವ ಆರೋಪದಡಿ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಅವರನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ರಾಮಚಂದ್ರ ಅವರು ಯಾರ್ಡ್ನ ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ತರಕಾರಿ ವಾಹನಗಳ ಒಳ ಪ್ರವೇಶಕ್ಕೆ ಅಡ್ಡಿಪಡಿಸುವುದರಿಂದ ವಾಹನ ಮಾಲಿಕರು ಮತ್ತು ಚಾಲಕರು ಪುತ್ತೂರು ಸಮಿತಿಗೆ ಬರಲು ನಿರಾಕರಿಸುತ್ತಿದ್ದರು. ಇದರಿಂದಾಗಿ ತರಕಾರಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾಗಿತ್ತು.ಈ ಕುರಿತು ವ್ಯಾಪಾರಸ್ಥರು ರಾಮಚಂದ್ರ ಅವರನ್ನು ವಿಚಾರಿಸಿದಾಗ ತರಕಾರಿ ವರ್ತಕರಿಗೆ ಪರವಾನಿಗೆ ನೀಡಲು ಮತ್ತು ವಾಹನಗಳ ಒಳ ಪ್ರವೇಶಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಯಾರ್ಡ್ನ 12 ಜನ ತರಕಾರಿ ವರ್ತಕರು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.ಈ ದೂರನ್ನು ಪರಿಶೀಲಿಸಿದ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ, ಜಿ.ಎಂ. ಗಂಗಾಧರ ಸ್ವಾಮಿಯವರು ರಾಮಚಂದ್ರ ಅವರ ಮೇಲಿನ ದುರ್ವತನೆ ಆರೋಪ ಮತ್ತು ಅವರ ಕಾರ್ಯವೈಖರಿಯನ್ನು ಗಮನಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಜ.16ರಿಂದ ಮುಂದಿನ 2 ತಿಂಗಳ ತನಕ ಅಥವಾ ಮುಂದಿನ ಆದೇಶದ ತನಕ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶ ಮಾಡಿದ್ದಾರೆ ಎಂದು ವರದಿಯಾಗಿದೆ.ಈ ಕುರಿತು ರಾಮಚಂದ್ರ ಅವರ ಪ್ರತಿಕ್ರಿಯೆಗಾಗಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಸಂಪರ್ಕ ಸಾಧ್ಯವಾಗಿಲ್ಲ.

LEAVE A REPLY

Please enter your comment!
Please enter your name here