ಹೊಸಮಜಲು: ಬೈಕ್‌ಗಳ ನಡುವೆ ಡಿಕ್ಕಿ-ಸವಾರನಿಗೆ ಗಂಭೀರ ಗಾಯ

0

ನೆಲ್ಯಾಡಿ: ಫೆ.6ರಂದು ರಾತ್ರಿ 7.30ರ ವೇಳೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಹೊಸಮಜಲು-ಬಲ್ಯ ಕ್ರಾಸ್‌ನಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಒಂದು ಬೈಕ್‌ನ ಸವಾರ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ದಿನೇಶ್ ಶೆಟ್ಟಿಯವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಬೈಕ್‌ನ ಸವಾರ ಕುರಿಯಕೋಸ್ ಎಂಬವರು ಸಣ್ಣಪುಟ್ಟ ಗಾಯಗೊಂಡಿರುವುದಾಗಿ ವರದಿಯಾಗಿದೆ.


ನೆಲ್ಯಾಡಿಯಲ್ಲಿ ಟೈಲರ್ ಆಗಿರುವ ದೋಂತಿಲ ನಿವಾಸಿ ದಿನೇಶ್ ಶೆಟ್ಟಿ ಅವರು ಫೆ.6ರಂದು ರಾತ್ರಿ 7.30ರ ವೇಳೆಗೆ ಕೆಲಸ ಮುಗಿಸಿ ತನ್ನ ಬೈಕ್(ಕೆಎ 21 ಹೆಚ್ 6935)ನಲ್ಲಿ ನೆಲ್ಯಾಡಿಯಿಂದ ಮನೆಗೆಂದು ಹೊಸಮಜಲು ಕಡೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 75ರ ಎಡಭಾಗದ ಪಥದಲ್ಲಿ ಹೋಗುತ್ತಿದ್ದವರು ಹೊಸಮಜಲುನಲ್ಲಿ ಬಲಭಾಗದಲ್ಲಿರುವ ಬಲ್ಯ ಕ್ರಾಸ್ ರಸ್ತೆಗೆ ಹೋಗಲು ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದ ವೇಳೆ ಕುರಿಯಕೋಸ್ ಅವರು ನೆಲ್ಯಾಡಿಯಿಂದ ಪೆರಿಯಶಾಂತಿ ಕಡೆಗೆ ಬೈಕ್(ಕೆಎ 21 ಎಸ್4370)ನಲ್ಲಿ ಚತುಷ್ಪಥ ಹೆದ್ದಾರಿಯ ಬಲಭಾಗದ ಪಥದಲ್ಲಿ ಬಂದು ಡಿಕ್ಕಿಯಾಗಿದ್ದಾರೆ. ಘಟನೆಯಲ್ಲಿ ದಿನೇಶ ಶೆಟ್ಟಿಯವರು ಗಂಭೀರ ಗಾಯಗೊಂಡಿದ್ದು ಅವರಿಗೆ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯಾಗಿರುವ ಬೈಕ್ ಸವಾರ ಕುರಿಯಾಕೋಸ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕುರಿಯಾಕೋಸ್ ಅವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಈ ಅಪಘಾತ ನಡೆದಿದೆ ಎಂದು ದೋಂತಿಲ ನಿವಾಸಿ ಮಹಾಬಲ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here