ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಪ್ರಶ್ನಾಚಿಂತನೆ-ಉದ್ಭವ ಲಿಂಗವೇ ಶ್ರೀ ದೇವರ ಮೂಲ ಬಿಂಬ

0

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಯ ಒಡಲಿನಲ್ಲಿ ಇರುವ ಉದ್ಭವ ಲಿಂಗವೇ ಕ್ಷೇತ್ರದಲ್ಲಿನ ಶ್ರೀ ದೇವರ ಮೂಲ ಬಿಂಬವಾಗಿದ್ದು, ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಸರಕಾರದ ಸಹಕಾರವನ್ನು ಪಡೆಯಬೇಕು ಎಂದು ಶುಕ್ರವಾರ ದೇವಾಲಯದಲ್ಲಿ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ಅಭಿವ್ಯಕ್ತವಾಯಿತು.


ಬಂಟ್ವಾಳ ತಾಲೂಕಿನ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ನಿರ್ಮಿಸಿದ ಪರಿಣಾಮ ಉಪ್ಪಿನಂಗಡಿಯವರೆಗೆ ವಿಸ್ತರಿಸಲ್ಪಟ್ಟ ಹಿನ್ನೇರಿನಿಂದಾಗಿ ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿದ್ದ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ಮಖೆ ಜಾತ್ರೆಯ ಸಮಯದಲ್ಲಿ ಪೂಜೆ ಸಲ್ಲಿಸುವುದು ಅಸಾಧ್ಯವಾಗಿದೆ. ಈ ಬಗೆಯ ಸಾಧಕ ಬಾಧಕಗಳನ್ನು ಕಂಡು ಕೊಳ್ಳುವ ಸಲುವಾಗಿ ಉಡುಪಿಯ ಖ್ಯಾತ ಜ್ಯೋತಿಷ್ಯಶಾಸ್ತ್ರ ಪಂಡಿತರಾದ ಗೋಪಾಲಕೃಷ್ಣ ಜೋಯಿಸರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.
ಪ್ರಶ್ನಾ ಚಿಂತನೆಯ ವೇಳೆ ಪುರಾಣ ಪ್ರಸಿದ್ದ ಉಪ್ಪಿನಂಗಡಿ ಕ್ಷೇತ್ರದಲ್ಲಿ ನದಿ ಗರ್ಭದಲ್ಲಿನ ಉದ್ಭವ ಲಿಂಗವೇ ಶ್ರೀ ದೇವರ ಮೂಲ ಬಿಂಬವಾಗಿದ್ದು, ಸರ್ವ ಕಾಲದಲ್ಲಿಯೂ ಪೂಜೆ ಸಲ್ಲಿಸುವ ಸಲುವಾಗಿ ನದಿ ದಡದಲ್ಲಿ ಸಹಸ್ರಲಿಂಗೇಶ್ವರನಿಗೆ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ಕಾರಣಕ್ಕೆ ಉದ್ಭವಲಿಂಗದ ಪೂಜೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಿಳಿಸಲಾಯಿತು. ಈ ಸಂಬಂಧ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕೆಂದೂ ಸೂಚಿಸಲ್ಪಟ್ಟಿತ್ತು.


ಶ್ರೀ ದೇವಳದ ದ್ವಜಾವರೋಹರಣದ ದಿನ ಶ್ರೀ ದೇವರ ಪೇಟೆ ಸವಾರಿಯ ಬಳಿಕ ಅವಭೃತ ಸ್ನಾನಗೈಯುವ ಸ್ಥಳದಲ್ಲೇ ಭಕ್ತಾದಿಗಳು ನಡೆಸುವ ಪಿಂಡ ಪ್ರಧಾನಾದಿ ಕಾರ್ಯ, ಅಸ್ಥಿ ವಿಸರ್ಜನೆ ನಡೆಯುತ್ತಿದ್ದು, ಇದು ಶ್ರೀ ದೇವರ ಅವಭೃತ ಸ್ನಾನಕ್ಕೆ ತೊಡಕು ಉಂಟು ಮಾಡುವುದೇ ಎಂಬ ಪ್ರಶ್ನೆಗೆ, ದಹನ ಕ್ರಿಯೆಯಿಂದ ಲಭಿಸುವ ಅಸ್ಥಿಗೆ ನಿಷೇಧಾತ್ಮಕ ಭಾವನೆ ಸಲ್ಲದು. ಅದು ಅಶುದ್ಧತೆಯ ವಸ್ತುವಲ್ಲ. ಅದರಿಂದ ಯಾವುದೇ ರೀತಿಯಲ್ಲಿ ದೇವತಾ ಕಾರ್ಯಕ್ಕೆ ತೊಡಕುಂಟಾಗದು ಎಂದು ತಿಳಿಸಲ್ಪಟ್ಟಿತ್ತು.


ಪ್ರಶ್ನಾ ಚಿಂತನೆಯ ವೇಳೆ ಶ್ರೀ ಕ್ಷೇತ್ರದ ಪವಿತ್ರಪಾಣಿ ವಿಷ್ಣುಮೂರ್ತಿ ಕುದ್ದಣ್ಣಾಯ, ತಂತ್ರಿಗಳಾದ ಕಾರ್ತಿಕ್ ತಂತ್ರಿ, ಪುತ್ತೂರು ತಹಶೀಲ್ದಾರ್, ದೇವಾಲಯದ ಆಡಳಿತಾಧಿಕಾರಿ ಪುರಂದರ ಹೆಗ್ಡೆ, ಪ್ರಧಾನ ಅರ್ಚಕ ಕೆ. ಹರೀಶ್ ಉಪಾಧ್ಯಾಯ, ಶಂಕರ ನಾರಾಯಣ ಭಟ್ , ಪ್ರಮುಖರಾದ ಕೆ. ರಾಧಾಕೃಷ್ಣ ನಾಕ್, ಕೃಷ್ಣ ರಾವ್ ಆರ್ತಿಲ, ಸೋಮನಾಥ, ಕರುಣಾಕರ ಸುವರ್ಣ, ಗೋವಿಂದ ಭಟ್ , ಡಾ. ಗೋವಿಂದಪ್ರಸಾದ್ ಕಜೆ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಲಕ್ಷ್ಮಿ ಪ್ರಭು, ದೇವದಾಸ್ ರೈ, ಸುಧಾಕರ ಶೆಟ್ಟಿ, ಹರಿರಾಮಚಂದ್ರ, ಜಯಂತ ಪೊರೋಳಿ, ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಜಗದೀಶ್ ಶೆಟ್ಟಿ, ಯತೀಶ್ ಶೆಟ್ಟಿ, ಶರತ್, ಕೈಲಾರ್ ರಾಜಗೋಪಾಲ ಭಟ್, ಕಿಶೋರ್ ಜೋಗಿ, ಶಾಂತರಾಮ ಭಟ್, ನಾಗೇಶ್ ಪ್ರಭು, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here