ತಾ.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಂತ ಸೇವಾಲಾಲ್, ಸವಿತಾ ಮಹರ್ಷಿ ಜಯಂತಿ

0

ಪುತ್ತೂರು;ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮ ಫೆ.16ರಂದು ತಾಲೂಕಯ ಆಡಳಿತ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸವಿತಾ ಸಮಾಜದ ಮುಖಂಡ ರವೀಂದ್ರ ಬಂಡಾರಿ ಪಾಣಾಜೆ ಮಾತನಾಡಿ, ಸವಿತಾ ಸಮಾಜ ಮನುಷ್ಯನ ಹುಟ್ಟಿನಿಂದ ಸಾಯುವ ತನಕವೂ ಆವಶ್ಯಕವಾಗಿದೆ. ಆದರೆ ಈ ಸಮಾಜದಲ್ಲಿ ಆರ್ಥಿಕತೆ ಮತ್ತು ಶಿಕ್ಷಣದ ಕೊರತೆ ಕಾಡುತ್ತಿದೆ. ಹೀಗಾಗಿ ನಮ್ಮ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸುವ ಕೆಲಸವಾಗ ಬೇಕಾಗಿದೆ. ಜೊತೆಗೆ ವ್ಯಸನಗಳಿಂದ ಈ ಸಮಾಜ ಮುಕ್ತವಾಗಬೇಕು. ಪುತ್ತೂರಿನಲ್ಲಿ ಸವಿತಾ ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಾಣವಾಗಬೇಕು. ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಹೇಳಿದ ಅವರು ಜನತೆಗೆ 5 ಗ್ಯಾರಂಟಿಗಳನ್ನು ಸರ್ಕಾರ ನೀಡಿದ ಹಾಗೇ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಬೇಕು ಎಂದು ಅವರು ಆಗ್ರಹಿಸಿದರು.


ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪುರಂದರ ಮಾತನಾಡಿ, ಸಮಾಜದಲ್ಲಿ ಜಾತಿ ಪದ್ಧತಿಯಂತಹ ದುಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದ ದಾರ್ಶನಿಕರು ಮಾನವ ಜನ್ಮಕ್ಕೆ ಅಭೂತಪೂರ್ವ ಚಿಂತನೆಗಳನ್ನು ನೀಡುವ ಮೂಲಕ ಈ ಸಮಾಜದಲ್ಲಿ ಒಂದಾಗಿ ಬದುಕಬೇಕು ಎನ್ನುವ ಪಾಠ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಾವು ನಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.


ಬಂಜಾರ ಸಮಾಜದ ಮುಖಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ರೂಪ್ಲಾ ನಾಯಕ್ ಅವರು ಮಾತನಾಡಿ, ಬಂಜಾರ ಸಮಾಜದಲ್ಲಿ ಶೇ.10 ರಷ್ಟು ಮಂದಿ ಮಾತ್ರ ಅಭಿವೃದ್ಧಿಯಾಗಿದ್ದಾರೆ, ಉಳಿದಂತೆ ಶೇ.90 ಮಂದಿ ಈಗಲೂ ಕಷ್ಟದಾಯಕ ಪರಿಸ್ಥಿತಿಯಲ್ಲೇ ಇದ್ದು ಈ ಸಮಾಜಕ್ಕೆ ಪೂರಕವಾದ ವ್ಯವಸ್ಥೆಗಳು ಬೇಕಾಗಿದೆ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಈ ನಾಡಿನಲ್ಲಿ ಹಲವು ಸಂತ, ದಾರ್ಶನಿಕರು ಸಮಾಜಗಳ ನಡುವೆ ಇದ್ದ ಕಂದಕಗಳನ್ನು ಮುಚ್ಚಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಜನತೆಗೆ ಉತ್ತಮವಾದ ‘ಜೀವನದಾರಿ’ ತೋರಿಸಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಜೀವನಕ್ಕೆ ಯಶಸ್ಸು ಸಿಗುತ್ತದೆ. ಹಿಂದುಳಿದ ಜನತೆ ಈ ಬಗ್ಗೆ ಯೋಚನೆ ಮಾಡಬೇಕು ಎಂದರು.


ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ದಯಾನಂದ್ ಸ್ವಾಗತಿಸಿದರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here