![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ವಿದ್ಯಾರ್ಥಿಗಳಿಗೆ ತಿಲಕವಿಟ್ಟು, ಪುಷ್ಪಾರ್ಚಣೆ ಮಾಡಿ ಬ್ಯಾಂಡ್ ಸದ್ದಿನೊಂದಿಗೆ ಬರಮಾಡಿಕೊಂಡ ಶಿಕ್ಷಕರು
ಕೊಂಬೆಟ್ಟು ಶಾಲೆ ದಾಖಲೆಯ ಫಲಿತಾಂಶ ತಂದು ಕೊಟ್ಟಿದೆ – ಲೋಕೇಶ್ ಎಸ್ ಆರ್
ಪುತ್ತೂರು: ಸರಕಾರಿ ಶಾಲೆಗಳು ಬೆಳೆಯಬೇಕು. ಸರಕಾರಿ ಶಾಲೆಯ ಮಕ್ಕಳಿಗೆ ಎಲ್ಲಾ ಸೌಲಭ್ಯಗಳು ದೊರೆಯಬೇಕು. ಅವರು ಬೆಳೆದು ದೊಡ್ಡವರಾಗಿ ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಬೇಕು ಎಂದು ಸರಕಾರ ಸಾಕಷ್ಟು ಉಚಿತ ಸೌಲಭ್ಯ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಕೊಂಬೆಟ್ಟು ಶಾಲೆ ಈ ಭಾರಿ ದಾಖಲೆಯ ಫಲಿತಾಂಶ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಹೇಳಿದರು.
![](https://puttur.suddinews.com/wp-content/uploads/2024/05/kombettu-1-1.jpg)
ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಮೇ 31ರಂದು ನಡೆದ ತಾಲೂಕು ಮಟ್ಟದ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಸರಕಾರ ಉಚಿತ ಪಠ್ಯ ಪುಸ್ತಕ ವಿತರಣೆ, ಮಧ್ಯಾಹ್ನದ ಬಿಸಿಯೂಟ, ಶೂ ಭಾಗ್ಯ ಸಹಿತ ಹತ್ತು ಹಲವು ಕಾರ್ಯಕ್ರಮ ನೀಡಿದೆ. ಇದರ ಉದ್ದೇಶ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ಪಡೆದು ಮುಂದೆ ಹೋಗಬೇಕು. ಕಳೆದ ವರ್ಷ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಸಹಕರಿಸಿದ ವಿದ್ಯಾರ್ಥಿ ಪೋಷಕ ವರ್ಗ, ಶಿಕ್ಷಕರಿಗೆ, ಸಂಘ ಸಂಸ್ಥೆ, ಜನಪ್ರತಿನಿಧಿಗಳಿಗೆ ಧನ್ಯವಾದಗಳು ಅರ್ಪಿಸಿದ ಅವರು ಕೊಂಬೆಟ್ಟು ಶಾಲೆಯಲ್ಲಿ ಶೇ.92 ರೊಂದಿಗೆ ದಾಖಲೆ ಫಲಿತಾಂಶ ಪಡೆದಿದೆ. ಇದೇ ರೀತಿ ಈ ಶೈಕ್ಷಣಿಕ ವರ್ಷದಲ್ಲೂ ವಿದ್ಯಾರ್ಥಿಗಳು ಮುಂದುವರಿಸಿ. ಶಾಲೆಗೆ ತಪ್ಪಿಸಬೇಡಿ. ಗುಣಮಟ್ಟದ ಶಿಕ್ಷಣ ಪಡೆದು ಉತ್ತಮವಾಗಿ ಉತ್ತೀರ್ಣವಾಗಿ ಎಂದರು.
![](https://puttur.suddinews.com/wp-content/uploads/2024/05/kombettu-2.jpg)
ಭವಿಷ್ಯದ ಮೆಟ್ಟಿಲುಗಳು ಉಜ್ವಲವಾಗಲಿ:
ಶಾಲೆಯ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜ ಅವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು ಶಾಲಾ ಪ್ರಾರಂಭೋತ್ಸವದಿಂದ ಆರಂಭಗೊಂಡಿದೆ. ವಿದ್ಯಾರ್ಥಿಗಳು ಉತ್ತಮ ವಾಗಿ ಕಲಿಯಬೇಕೆಂದರು.
ಸ್ನೇಹಪರ ಸಂಸ್ಥೆಯಲ್ಲಿ ಶಿಸ್ತು ಇರಲಿ:
ಶಾಲಾ ಉಪ ಪ್ರಾಂಶುಪಾಲ ವಸಂತ ಮೂಲ್ಯ ಅವರು ಮಾತನಾಡಿ ಪುತ್ತೂರಿನ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ ತುಂಬಾ ಪಾವಿತ್ರ್ಯತೆ ಹೊಂದಿರುವ ಸಂಸ್ಥೆ. ಈ ಸಂಸ್ಥೆಯಿಂದ ಕಲಿತದವರು ಉತ್ತಮ ರೀತಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಪ್ರಿತಿಯಿಟ್ಟು ಬನ್ನಿ, ಸ್ನೇಹಪರ ಸಂಸ್ಥೆಯಲ್ಲಿ ಶಿಸ್ತನ್ನು ಕಾಪಾಡಿ. ಗುರುಸ್ಥಾನ ಶಿಕ್ಷಕರಿಗೆ ನೀಡಿ ಎಂದರು.
ಅದ್ದೂರಿಯ ಸ್ವಾಗತ:
ಶಾಲಾ ಪ್ರಾರಂಭೋತ್ಸವದಲ್ಲಿ ಶಾಲೆಯ ದ್ವಾರವನ್ನು ಮಾವಿನ ಎಲೆಯ ತಳಿರುತೋರಣದಿಂದ ಅಲಂಕರಿಸಲಾಗಿತ್ತು. ಶಾಲೆಯ ಆವರಣ ದ್ವಾರದಲ್ಲಿ ಬಾಳೆಗಿಡದ ಸ್ವಾಗತ ಗೋಪುರ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ದ್ವಾರದಲ್ಲಿ ಆರತಿ ಬೆಳಗಿಸಿ, ತಿಲಕವಿಟ್ಟು, ಪುಷ್ಪಾರ್ಚಣೆ ಮಾಡಿ ಸ್ವಾಗತಿಸಲಾಯಿತು. ಹಿರಿಯ ವಿದ್ಯಾರ್ಥಿಗಳು ನೂತನ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಿಸಿದರು. ಬಳಿಕ ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ಪುಸ್ತಕ ವಿತರಣೆ ನಡೆಯಿತು. ಈ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಎನ್ಸಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಎನ್ಸಿಸಿ ಅಧಿಕಾರಿ ಗ್ರೇಗೋರಿ ರೊನಿ ಪಾಯಸ್ ಅವರು ಕಾರ್ಯಕ್ರಮ ನಿರ್ವಹಿಸಿದರು. ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಶಾಲಾ ಎಸ್ಡಿಎಂಸಿ ಸದಸ್ಯರು, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಿಕ್ಷಣ ಸಂಯೋಜಕ ನವೀನ್ ವೇಗಸ್, ಶಿಕ್ಷಕ ಕೋಟಿಯಪ್ಪ ಪೂಜಾರಿ ಸಹಿತ ಇತರ ಶಿಕ್ಷಕರು ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಜಗನ್ನಾತ ಅರಿಯಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಮತ ವಂದಿಸಿದರು.