ನಾಳೆ (ಅ.16)ಯಿಂದ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾಭಾರತಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

0

ಪುತ್ತೂರು: ರಾಷ್ಟ್ರಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟನೆಯಾಗಿರುವ ವಿದ್ಯಾಭಾರತಿಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಂಚಮುಖಿ ಶಿಕ್ಷಣದ ಆಶಯಗಳನ್ನು ಇಟ್ಟುಕೊಂಡು ಹಲವು ಕಾರ್ಯಗಳನ್ನು ಮಾಡಿಕೊಂಡಿದ್ದು ಅದರಲ್ಲಿ ಒಂದಾದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ವಿದ್ಯಾಭ್ಯಾರತಿ ಸಂಯೋಜಿತ ಶಾಲೆಗಳ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟವು ಅ.16ರಿಂದ 19ರ ತನಕ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ಯಾಂಪಸ್‌ನಲ್ಲಿ ಜರುಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಯಂ.ಕೃಷ್ಣ ಭಟ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕ ಇದರ ಅಧ್ಯಕ್ಷ ಪರಮೇಶ್ವರ ಹೆಗ್ಗಡೆಯವರು ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳನ್ನು ಪುತ್ತೂರಿಗೆ ಆತ್ಮೀಯವಾಗಿ ಸ್ವಾಗತಿಸುವ ಸಲುವಾಗಿ ದರ್ಬೆ ವೃತ್ತದಿಂದ ಶಾಲಾ ಮೈದಾನದ ತನಕ ಜಾಥಾ ಹಮ್ಮಿಕೊಳ್ಳಲಾಗಿದೆ. ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ಅ.17 ಮತ್ತು 18ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜೋಡಿಸಲಾಗಿದೆ ಎಂದವರು ಹೇಳಿದರು.


720 ಸ್ಪರ್ಧಾಳುಗಳು, 3 ವಿಭಾಗಳಲ್ಲಿ ಪಂದ್ಯಾಟ:
ದೇಶದ ಎಲ್ಲಾ ರಾಜ್ಯಗಳಲ್ಲೂ ವಿದ್ಯಾಭಾರತಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ 562 ಶಾಲೆಗಳಿದ್ದು ದ.ಕ. ಜಿಲ್ಲೆಯಲ್ಲಿ 142 ಶಾಲೆಗಳಿವೆ. ದೇಶದಲ್ಲಿ ಒಟ್ಟು 32 ಲಕ್ಷ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. 15 ಲಕ್ಷ ಅಧ್ಯಾಪಕರು, 1 ಲಕ್ಷ ಆಡಳಿತ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿವೆ. ಅದರಲ್ಲಿ ಪುತ್ತೂರಿನಲ್ಲಿ ನಡೆಯುವ ವಾಲಿಬಾಲ್‌ನಲ್ಲಿ ಬಾಲ, ಕಿಶೋರ, ತರುಣ ಎಂಬ ಮೂರು ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ. 6ರಿಂದ 8ನೇ ತರಗತಿ, 9ರಿಂದ 10ನೇ ತರಗತಿ ಮತ್ತು ಪಿಯುಸಿ ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ. ಸುಮಾರು 720 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ 274 ವಿದ್ಯಾರ್ಥಿನಿಯರಿದ್ದಾರೆ. ಒಟ್ಟು ಆರು ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು, 2 ಕ್ರೀಡಾಂಗಣಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ವಿದ್ಯಾಭಾರತಿ ಸಂಯೋಜಿತ ಶಾಲೆಗಳಲ್ಲಿ ಕಲಿತವರು ಅನೇಕರು ಉನ್ನತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಡಾ. ಕೆ. ಎಂ. ಕೃಷ್ಣ ಭಟ್ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿದ್ಯಾಭಾರತಿಯ ದಕ್ಷಿಣ ಮಧ್ಯಕ್ಷೇತ್ರೀಯ ನೈತಿಕ, ಅಧ್ಯಾತ್ಮಿಕ, ಶಿಕ್ಷಣ ಪ್ರಮುಖ್ ಮಂಕುಡೆ ವೆಂಕಟ್ರಮಣ ರಾವ್, ವಿದ್ಯಾಭಾರತಿ ದಕ್ಷಿಣ ಕನ್ನಡ ಖೇಲ್ ಕೂದ್ ಪ್ರಮುಖ್ ಕರುಣಾಕರ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ಮುಖ್ಯಗುರು ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು.

ಅಂತಿಮ ಹಂತದ ಸಿದ್ದತೆ: ರಾಷ್ಟ್ರಮಟ್ಟದ ಕ್ರೀಡಾಕೂಟದ ಅಂತಿಮ ಹಂತದ ಸಿದ್ದತೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here