ವಿಟ್ಲ: ಬಂಟ್ವಾಳ ಸಿವಿಲ್ ನ್ಯಾಯಾಲಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ಡಿಸಿಗೆ ನೋಟೀಸ್ ಜಾರಿ ಮಾಡಿದೆ.
ವಿಟ್ಲ ಅಪ್ಪರಿಪಾದೆಯಲ್ಲಿ ಹೊನ್ನಮ್ಮ ಎಂಬವರು 1994ರಲ್ಲಿ ಸರ್ಕಾರದ ವಿರುದ್ಧ ವ್ಯಾಜ್ಯ ದಾಖಲಿಸಿ, ಕಸಬಾ ಗ್ರಾಮದ ಸರ್ವೆ ನಂಬರ್ 603/15221 ರಲ್ಲಿ 4.12 ಎಕ್ರೆ ಜಮೀನನ್ನು ಬಲವಂತದಿಂದ ಒಕ್ಕಲೆಬ್ಬಿಸದಂತೆಯೂ, ಈ ಜಮೀನಿನ ಬಗ್ಗೆ ಯಾವುದೇ ದಾಖಲೆಗಳನ್ನು ಮಾಡದಂತೆ ಶಾಶ್ವತ ಪ್ರತಿಬಂಧಕಾಜ್ಞೆ ಆದೇಶ ಪಡೆದುಕೊಂಡಿದ್ದರು. ಈ ಆದೇಶವನ್ನು ಉಲ್ಲಂಘಿಸಿ 2024 ಆಗಸ್ಟ್ 16ರಂದು 1.88 ಎಕ್ರೆ ಜಮೀನನ್ನು ಸರ್ಕಾರದ ಅಧಿಸೂಚನೆಯಂತೆ ಎಫ್.ಎಸ್.ಟಿ.ಪಿ ಪ್ಲಾಂಟ್ ನಿರ್ಮಿಸಲು ಕಾಯ್ದಿರಿಸಿ ವಿಟ್ಲ ಪಟ್ಟಣ ಪಂಚಾಯತ್ಗೆ ಹಸ್ತಾಂತರವಾಗಿತ್ತು. ಈ ರೀತಿ ದಾಖಲೆ ಮಾಡಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದು ಮೃತ ಹೊನ್ನಮ್ಮ ಅವರ ವಾರಸುದಾರರಾದ ವೆಂಕಪ್ಪ ನಾಯ್ಕ ಅವರು ವಕೀಲ ಸುದರ್ಶನ ಕುಮಾರ್ ಮುಳಿಯ ಮೂಲಕ ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದೆ.