ಉಪ್ಪಿನಂಗಡಿ: ತಮ್ಮ ಮಗುವಿನ ಕಲಿಕೆಯ ಸಾಮರ್ಥ್ಯವನ್ನು ಬೆಂಬಲಿಸಲು ಪಾಲಕರಾಗಿ ತಾವೇನು ಮಾಡಬಹುದು ಎನ್ನುವುದರ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಸದುದ್ದೇಶದಿಂದ ಫೆಬ್ರವರಿ 25 ರಂದು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯವು ತಮ್ಮ ವಿದ್ಯಾರ್ಥಿಗಳ ಪೋಷಕರಿಗೆ ಪೊಸಿಟಿವ್ ಪೇರೆಂಟಿಂಗ್ ಕಾರ್ಯಕ್ರಮವನ್ನು ಇಂದ್ರಪ್ರಭ ಆಡಿಟೋರಿಯಂನಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಉಬರಡ್ಕ ಇವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಆತ್ಮಸ್ಥೈರ್ಯ,ಸಕರಾತ್ಮಕ ಚಿಂತನೆ , ನಿರ್ದಿಷ್ಟ ಗುರಿ ಇತ್ಯಾದಿ ವಾಸ್ತವಾಂಶಗಳನ್ನು ಮನದಟ್ಟು ಮಾಡಬೇಕು.ಅವರೊಡನೆ ಸ್ನೇಹಿತರಂತೆ ಬೆರೆತು ಅವರ ಆಲೋಚನೆ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಎಂದು ತಿಳಿಸಿದರು.ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ಅಳವಡಿಸಿಕೊಳ್ಳಲಿರುವ ಸ್ಟೆಮ್ ಎಜುಕೇಶನ್ ಸಿಷ್ಟಮ್ನ ಕುರಿತು ಮಂಗಳೂರಿನ ಸ್ಪಾರ್ಕ್ ಇನ್ನೋವೇಶನ್ಸ್ ಕಂಪೆನಿಯ ಸ್ಥಾಪಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ ಕೃಷ್ಣ ಪ್ರಭು ಹಾಗು ರಂಗ ಶಿಕ್ಷಣದ ಕುರಿತು ಸಂಸ್ಥೆಯ ಚಿತ್ರಕಲಾ ಶಿಕ್ಷಕ ಪ್ರವೀಣ್ ವರ್ಣಕುಟೀರ ಮಾಹಿತಿಯನ್ನು ನೀಡಿದರು. ನಂತರ ಮಾತನಾಡಿದ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಕೆದಿಲ ಸಂಸ್ಥೆಯ ಶ್ರೇಯೊಭಿವೃದ್ಧಿಗಾಗಿ ಪೋಷಕರ ಸಹಕಾರವನ್ನು ಕೋರಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಹಶಿಕ್ಷಕಿಯರಾದ ರೇಣುಕಾ, ಯಶಾಕುಮಾರಿ ವಂದಿಸಿದರು. ಭವ್ಯ ಪಿ.ಎಸ್ ಹಾಗೂ ಶೀಲಾ ಹರೀಶ್ ನಿರೂಪಿಸಿದರು.