ಪುತ್ತೂರು: ಬೆನ್ನುಹುರಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಉಮ್ಮರ್ ಎಂಬವರ ಪುತ್ರಿ ವಿದ್ಯಾರ್ಥಿನಿ ಮಹ್ರೂಫಾರವರಿಗೆ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 1.50 ಲಕ್ಷ ಮಂಜೂರಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಬೆನ್ನುಹುರಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಮಹ್ರುಫಾ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಆಸ್ಪತ್ರೆಯಲ್ಲಿ 4.50 ಲಕ್ಷ ರೂ. ಬಿಲ್ ಆಗಿರುತ್ತದೆ. ಈ ನಿಟ್ಟಿನಲ್ಲಿ ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಚಿಕಿತ್ಸೆಗೆ ದಾನಿಗಳ ಮೂಲಕವೂ ಹಣ ಸಂಗ್ರಹ ಮಾಡಲಾಗಿತ್ತು. ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ನೆರವನ್ನು ಘೋಷಿಸಿದ್ದಾರೆ.
ಗಟ್ಟಮನೆ ನಿವಾಸಿ ಉಮ್ಮರ್ ಎಂಬವರ ಪುತ್ರಿ ಬೆನ್ನುಹುರಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಈಕೆಯ ಚಿಕಿತ್ಸೆಗೆ ದಾನಿಗಳು ಕೂಡಾ ನೆರವು ನೀಡಿದ್ದರು. ಈಕೆಗೆ ಈಗಲೂ ಚಿಕಿತ್ಸೆ ಮುಂದುವರೆದಿದ್ದು ವಿದ್ಯಾರ್ಥಿನಿ ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ. ಸರಕಾರದಿಂದ 1.50 ಲಕ್ಷ ನೆರವು ಘೋಷಿಸಲಾಗಿದೆ. ಬಡ ಕುಟುಂಬಕ್ಕೆ ಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಅಶೋಕ್ ರೈ, ಶಾಸಕರು ಪುತ್ತೂರು