





ಬಡಗನ್ನೂರು: ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ, ಪ್ರತಿಭಾ ಪ್ರೌಢ ಶಾಲೆ ಪಟ್ಟೆ, ಹಾಗೂ ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ಆಶ್ರಯದಲ್ಲಿ 5 ರಿಂದ 10ನೇ ತರಗತಿ ಮಕ್ಕಳಿಗೆ ‘ಆಕಾಶಕ್ಕೆ ಏಣಿ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಏ.10ರಂದು ಪಟ್ಟೆ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಪ್ರತಿಷ್ಠಾನದ ಉಪಾಧ್ಯಕ್ಷ ಅಮೃತ ಕೃಷ್ಣ ಎನ್ ವಹಿಸಿ ಮಾತಾಡಿ, ಮೂರು ದಿನದ ಶಿಬಿರದಲ್ಲಿ ನಡೆದ ವಿಚಾರಗಳನ್ನು ನಿಮ್ಮ ರಜಾ ದಿವಸದಲ್ಲಿ ಅಳವಡಿಸಿಕೊಂಡು ನಿಮ್ಮ ಮುಂದಿನ ಜೀವನಕ್ಕೆ ಉಪಯೋಗವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಕೇಶವಪ್ರಸಾದ್ ಮಕ್ಕಳಿಗೆ ಶುಭಹಾರೈಸಿದರು.
ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಏರೋಬಿಕ್ಸ್, ಚಿತ್ರಕಲೆ, ಕ್ರಾಫ್ಟ್, ವೇದಗಣಿತ, ಮನರಂಜನಾ ಆಟಗಳು, ಸಂಗೀತ ಹಾಗೂ ನೃತ್ಯ ಇತ್ಯಾದಿ ವಿಷಯಗಳಿಗೆ ನುರಿತ ತಜ್ಞರಿಂದ ತರಬೇತಿ ನೀಡಲಾಯಿತು.
ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ, ಕು.ಮೋನಿಷಾ, ಸದಾಶಿವ ಭಟ್ ಶಿವಗಿರಿ, ಜಗನ್ನಾಥ್ ಅರಿಯಡ್ಕ, ಪ್ರವೀಣ್ ವರ್ಣಕುಟೀರ, ಸತ್ಯಮೂರ್ತಿ ಹೆಬ್ಬಾರ್ ಭಾಗವಹಿಸಿದರು.
ಪ್ರಮಾಣ ಪತ್ರ ಸ್ವೀಕರಿಸಿದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ತುಂಬಾ ಸಂತೋಷದಿಂದ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ ಹಾಗೂ ಶ್ರೀ ಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಹಿ. ಪ್ರಾ. ಶಾಲಾ ಶಿಕ್ಷಕ ರಾಮಚಂದ್ರಪ್ಪ ಸ್ವಾಗತಿಸಿ, ಪ್ರೌಢ ಶಾಲಾ ಗಣಿತ ಶಿಕ್ಷಕಿ ಪ್ರೀತಿ ಕುಮಾರಿ ಸ್ವಾಗತಿಸಿ, ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಿಘ್ನೆಶ್ ಹಿರಣ್ಯ ವಂದಿಸಿದರು. ಪ್ರೌಢಶಾಲಾ ಶಿಕ್ಷಕರಾದ ವಿಶ್ವನಾಥ ಬೊಳ್ಳಡಿ ಕಾರ್ಯಕ್ರಮ ನಿರೂಪಿಸಿದರು. ಉಭಯ ಶಿಕ್ಷಣ ಸಂಸ್ಥೆಯ ಶಿಕ್ಷಕ ವೖಂದದವರು ಸಹಕರಿಸಿದರು.












