ಪುತ್ತೂರು: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನೂತನ ಡಿಜಿಟಲ್ ಪಾಠಪುಸ್ತಕಗಳನ್ನು ಪರಿಚಯಿಸಿದ್ದು, ಇವು ಮದ್ರಸಾ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಹೆಚ್ಚು ಆಕರ್ಷಕ ಮತ್ತು ಸುಲಭಗೊಳಿಸುವುದರೊಂದಿಗೆ ಮದ್ರಸಾ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹೇಳಿದರು. ಅವರು ಕುಂಬ್ರ ರೇಂಜ್ ಮದರಸ ಮ್ಯಾನೇಜ್ಮೆಂಟ್ ವತಿಯಿಂದ ಕೂಡುರಸ್ತೆ ಮದರಸದಲ್ಲಿ ಪರಿಸರದ ಇಪ್ಪತ್ತೆರಡು ಮದರಸ ಆಡಳಿತ ಸಮಿತಿ ಪದಾಧಿಕಾರಿಗಳಿಗೆ ಆಯೋಜಿಸಲಾದ ಅಬ್ ವಾಬ್ ಕಾರ್ಯಗಾರದಲ್ಲಿ ವಿಷಯ ಮಂಡಿಸಿ ಮಾತನಾಡುತ್ತಿದ್ದರು.
ಹೊಸ ಪಾಠಪುಸ್ತಕಗಳು ಕೇವಲ ಸಾಂಪ್ರದಾಯಿಕ ಮುದ್ರಿತ ರೂಪದಲ್ಲಿ ಮಾತ್ರವಲ್ಲದೆ ದೃಶ್ಯ ಮತ್ತು ಶ್ರವ್ಯ ಅಂಶಗಳನ್ನು ಒಳಗೊಂಡಿವೆ. ಆಡಿಯೋ, ವಿಡಿಯೋ ಕ್ಲಿಪ್ಗಳು, ಅನಿಮೇಷನ್ಗಳು ಮತ್ತು ಸಂವಾದಾತ್ಮಕ (interactive) ಕಲಿಕಾ ವಿಧಾನಗಳು ಪಠ್ಯಗಳಲ್ಲಿ ಅಳವಡಿಸಲಾಗಿವೆ. ಇದರಿಂದ ಮಕ್ಕಳು ವಿಷಯಗಳನ್ನು ಹೆಚ್ಚು ಆಳವಾಗಿ ಮತ್ತು ಆಸಕ್ತಿಯಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಾಥಮಿಕ ಹಂತದಿಂದಲೇ ಈ ಡಿಜಿಟಲ್ ಪಠ್ಯಗಳು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಮದ್ರಸ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಮಸ್ತ ನಿರಂತರವಾಗಿ ಶ್ರಮಿಸುತ್ತಿದ್ದು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಜ್ಞಾನದ ಜೊತೆಗೆ ಆಧುನಿಕ ಜಗತ್ತಿಗೆ ಬೇಕಾದ ಕೌಶಲ್ಯಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸುಂದರವಾದ ವಿನ್ಯಾಸ, ಸರಳವಾದ ಭಾಷೆ ಮತ್ತು ಸ್ಪಷ್ಟವಾದ ವಿವರಣೆಗಳು ಈ ಹೊಸ ಡಿಜಿಟಲ್ ಪುಸ್ತಕಗಳ ಪ್ರಮುಖ ಲಕ್ಷಣಗಳಾಗಿವೆ.
ಮದ್ರಸಾ ಶಿಕ್ಷಣ ಕ್ಷೇತ್ರದಲ್ಲಿ ಇದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಇಸ್ಲಾಮಿಕ್ ಅಧ್ಯಯನವನ್ನು ಹೆಚ್ಚು ಪ್ರವೇಶಿಸಬಹುದಾದ ಮತ್ತು ಆಕರ್ಷಕವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ವಿಡಿಯೋ ಕ್ಲಿಪ್ ಸಹಿತ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಾಳಾಯ ವಹಿಸಿದ್ದರು. ಕೂಡುರಸ್ತೆ ಜುಮಾ ಮಸೀದಿ ಖತೀಬರಾದ ಬದ್ರುದ್ದೀನ್ ರಹ್ಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪವಾಝ್ ಪಾಲ್ತಾಡ್, ಕೋಶಾಧಿಕಾರಿ ನವಾಝ್ ಪರ್ಪುಂಜ, ಉಮರ್ ಬಾಳಯ, ಇಸ್ಮಾಯಿಲ್ ಅಜ್ಜಿಕಲ್, ಸಹಿತ ವಿವಿಧ ಮದರಸಗಳ ಪದಾಧಿಕಾರಿಗಳು ಗಣ್ಯ ವ್ಯಕ್ತಿಗಳಾಗಿ ಭಾಗವಹಿಸಿದರು. ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಹಸನ್ ಬಾಕವಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಫೈಝಿ ಸ್ವಾಗತಿಸಿ, ಬಾಸಿತ್ ಹುದವಿ ವಂದಿಸಿದರು.