ಪುತ್ತೂರು: ಬಂಟ್ವಾಳ ತಾಲೂಕಿನ ಕೊಳ್ತಮಜಲು ಎಂಬಲ್ಲಿ ನಡೆದ ಅಬ್ದುಲ್ ರಹೀಮ್ರವರ ಕೊಲೆ ಪ್ರಕರಣದ ನಂತರ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಹಾಗೂ ಪಕ್ಷದ ಕಾರ್ಯಕರ್ತರ ನಡುವೆ ಉಂಟಾಗಿರುವ ಗೊಂದಲಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ವರದಿ ನೀಡಲು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಸಹಿತ 8 ಮಂದಿಯನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಪಕ್ಷದ ನಿರ್ದೇಶನದಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಸಮಿತಿಯನ್ನು ರಚಿಸಿ, ವರದಿ ನೀಡಲು ಆದೇಶಿಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್. ಕರೀಂ, ಮಾಜಿ ಪುರಸಭಾ ಸದಸ್ಯ ಹೆಚ್. ಮಹಮ್ಮದ್ ಆಲಿ, ಬಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಸನಬ್ಬ ಬಾಳ, ಬೆಳ್ತಂಗಡಿ ನಿವೃತ್ತ ಯೋಧ ರಫೀಕ್, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸುಳ್ಯ ನಗರ ಯೋಜನಾ ಪ್ರಾಽಕಾರ(ಸುಡಾ)ದ ಅಧ್ಯಕ್ಷ ಕೆ.ಎಂ.ಮುಸ್ತ-, ವಿಭಾಗೀಯ ಅಲ್ಪ ಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಸಲೀಮ್ ಉಳ್ಳಾಲ ಅವರನ್ಮು ಒಳಗೊಂಡ ಸಮಿತಿ ರಚನೆಗೊಂಡಿದೆ.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳು ಜಿಲ್ಲೆಯ ಶಾಂತಿಯನ್ನು ಕದಡುತ್ತಿವೆ. ದ.ಕ. ಶಾಂತಿಪ್ರಿಯ ಜಿಲ್ಲೆಯಾಗಿದ್ದು, ಎಲ್ಲಾ ವರ್ಗದ ಜನರಿಗೆ ಕಾನೂನಿನಡಿ ಶಾಂತಿ ಸುವ್ಯವಸ್ಥೆ ಜಾರಿಗೊಳಿಸುವ ಜವಾಬ್ದಾರಿ ಸರ್ಕಾರ ಮತ್ತು ನಮ್ಮ ಪಕ್ಷದ ಮೇಲಿದೆ. ಇದನ್ನು ಸಮರ್ಪಕವಾಗಿ ನಿಭಾಯಿಸಬೇಕಾದ್ದು ನಮ್ಮ ಜವಾಬ್ದಾರಿ. ಮುಂದಿನ ಏಳು ದಿನಗಳ ಒಳಗಾಗಿ ತಮ್ಮ ವರದಿಯನ್ನು ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆದೇಶಿಸಿದ್ದಾರೆ.