‘ವಿಜಯ ಸಾಮ್ರಾಟ್’ನಿಂದ ಮತ್ತೊಂದು ಮಾನವೀಯ ಕಾರ್ಯ : ಬಡ ಮಹಿಳೆಗೆ ಭದ್ರ ಸೂರಿನ ಮನೆ ಹಸ್ತಾಂತರ

0

ಪುತ್ತೂರು: ಕಳೆದ 5 ವರ್ಷಗಳಿಂದೀಚೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಜೊತೆಗೆ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ, ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ಸಂಘಟನೆಯು ಇದೀಗ ಮತ್ತೊಂದು ಕಾರ್ಯದ ಮೂಲಕ ಮಾದರಿಯಾಗಿದೆ. ಹಲವು ವರ್ಷಗಳಿಂದ ಬೀಳುವ ಹಂತದಲ್ಲಿದ್ದ ಹೆಂಚಿನ ಛಾವಣಿ ಮನೆಯಲ್ಲಿ ವಾಸವಾಗಿದ್ದ ಬಡ ಮಹಿಳೆಗೆ ಭದ್ರ ಸೂರು ಹೊಂದಿರುವ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದೆ. ಪುತ್ತೂರಿನ ಕಲ್ಲೇಗ ರಕ್ತೇಶ್ವರಿ ಗುಡಿ ಸಮೀಪದಲ್ಲಿ ನಿರ್ಮಾಣಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮವು ಮೇ 30ರಂದು ಸರಳವಾಗಿ ನೆರವೇರಿದೆ.


ನೆಹರು ನಗರದ ರಕೇಶ್ವರಿ ಗುಡಿಯ ಬಳಿಯಲ್ಲಿ ವಾಸವಾಗಿರುವ ಸುಮಾರು 65 ವರ್ಷ ವಯೋಮಾನದ ಭವಾನಿ ಎಂಬವರ ಮನೆಯ ಛಾವಣಿ ಸಂಪೂರ್ಣ ಶಿಥಿಲಗೊಂಡಿತ್ತು. ಇಂದೋ ನಾಳೆಯೋ ಎನ್ನುವಂತೆ ಬೀಳುವ ಹಂತದಲ್ಲಿದ್ದು, ಅದನ್ನು ದುರಸ್ತಿ ಮಾಡಿ ವಾಸ ಯೋಗ್ಯ ಮಾಡಿಕೊಡಬೇಕೆಂದು ವಿಜಯ ಸಾಮ್ರಾಟ್ ಸಂಘಟನೆಯ ಪದಾಧಿಕಾರಿಗಳ ಬಳಿ ಬಡ ಮಹಿಳೆ ಭವಾನಿಯವರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಅವರು ಈ ಮನೆಯನ್ನು ಸಂಪೂರ್ಣ ದುರಸ್ತಿ ಮಾಡಿ ನೂತನ ಗೃಹದ ಮಾದರಿಯಲ್ಲಿ ನಿರ್ಮಾಣ ಮಾಡಿಕೊಡುವ ಯೋಜನೆಯನ್ನು ರೂಪಿಸಿದ್ದು, ಮಾರ್ಚ್ 22ರಂದು ದುರಸ್ತಿ ಕಾರ್ಯ ಪ್ರಾರಂಭಿಸಲಾಗಿತ್ತು. ಇದೀಗ ಸುಸಜ್ಜಿತ ಸೂರು ಹೊಂದಿರುವ ಮನೆಯು ಸಜ್ಜಾಗಿದೆ. ಮೇ 30ರಂದು ಬೆಳಗ್ಗೆ ಗಣಪತಿ ಹವನದ ಮೂಲಕ ನೂತನ ಮನೆಯ ಗೃಹಪ್ರವೇಶ ನೆರವೇರಿಸಿ, ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಬಹಳಷ್ಟು ವರ್ಷಗಳಿಂದ ನಾವು ಬೀಳುವ ಹಂತದಲ್ಲಿದ್ದ ಹಂಚಿನ ಛಾವಣಿ ಮನೆಯಲ್ಲೇ ವಾಸವಾಗಿದ್ದೆವು. ನಮ್ಮ ಕಷ್ಟವನ್ನು ವಿಜಯ ಸಾಮ್ರಾಟ್ ಸಂಘಟನೆಯವರ ಬಳಿ ಹೇಳಿಕೊಂಡಾಗ ಅವರು ಸ್ಪಂದಿಸಿದ್ದಾರೆ. ಅವರಿಗೆ ನಾವು ಎಂದಿಗೂ ಚಿರಋಣಿಗಳಾಗಿದ್ದೇವೆ ಎಂದು ಮನೆಯನ್ನು ಪಡೆದುಕೊಂಡ ಕುಟುಂಬ ಸದಸ್ಯರು ಕೃತಜ್ಞತೆಗಳನ್ನು ಅರ್ಪಿಸಿದರು.


ಈ ಸಂದರ್ಭದಲ್ಲಿ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಗೌರವ ಸಲಹೆಗಾರ ಪುತ್ತೂರು ಉಮೇಶ್ ನಾಯಕ್, ಮನೆಯ ದುರಸ್ತಿ ಕೆಲಸ ನಿರ್ವಹಿಸಿದ ಈಶಾನ್ಯ ಬಿಲ್ಡರ್ಸ್ ಸಂಸ್ಥೆಯ ಶಂಕರ ಭಟ್, ವಿಜಯ ಸಾಮ್ರಾಟ್ ಸಂಘಟನೆಯ ಸದಸ್ಯರುಗಳಾದ ಶರತ್ ಆಳ್ವ ಕೂರೇಲು, ರಾಜೇಶ್ ಗೌಡ, ರತನ್ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ದಿನೇಶ್ ವಾಸುಕಿ, ಪ್ರದೀಪ್ ರೈ ಕರ್ನೂರು, ನಿತೇಶ್ ನೆಲಪಾಲ್, ಶರತ್ ಕುಮಾರ್ ಮಾಡಾವು, ಆನಂದ ಗೌಡ, ಸುರೇಶ್ ಪಿದಪಟ್ಲ, ಸುದರ್ಶನ್ ರೈ ನೀರ್ಪಾಡಿ, ಪವನ್ ಶೆಟ್ಟಿ, ಧನುಷ್ ಹೊಸಮನೆ, ಸೃಜನ್ ರೈ, ಪ್ರದೀಪ್ ರೈ ಮಾಡಾವು, ಜಗದೀಶ್ ಜೆ.ಎನ್., ಪ್ರತೀಶ್ ಶೆಟ್ಟಿ, ಜಿತೇಶ್ ಶೆಟ್ಟಿ, ವಿನಯ್ ಕುಮಾರ್, ಅಶೋಕ್ ಅಡೂರ್, ಸವಿನ್ ಗೌಡ, ನವೀನ್ ಪಡ್ನೂರು, ಸಚಿನ್ ಶೆಟ್ಟಿ, ಗೌತಮ್ ಗೌಡ, ಚರಣ್ ಕುಲಾಲ್, ಸಾಯಿರಾಮ್ ಬಾಳಿಲ, ಮೋಹನ್ ಗೌಡ, ವಸಂತ ಗೌಡ, ಪ್ರಶಾಂತ್ ಕುಮಾರ್, ಯಶ್ ರೈ, ಅಭಿಷೇಕ್ ಎನ್, ಕೌಶಿಕ್ ಗೌಡ, ಹರ್ಷ ರಾಜ್ ಮೊದಲಾದವರು ಉಪಸ್ಥಿತರಿದ್ದರು.

ಸುಮಾರು 3.5 ಲಕ್ಷ ರೂ. ವೆಚ್ಚದಲ್ಲಿ ಸುಂದರವಾಗಿ ಮನೆಯು ಮೂಡಿಬಂದಿದೆ. ಮನೆಯ ಛಾವಣಿಗೆ ಕಾಂಕ್ರೀಟ್ ಸ್ಲಾಬ್ ಹಾಕಿದ್ದು, ನೆಲಕ್ಕೆ ವೆಟ್ರಿಫೈಡ್ ಟೈಲ್ಸ್ ಅಳವಡಿಸಲಾಗಿದೆ. ಎಲೆಕ್ರ್ರ್ಟಿಕಲ್ ಕೆಲಸ ನಿರ್ವಹಿಸುವ ಜೊತೆಗೆ ಫ್ಯಾನ್ ಹಾಗೂ ಟ್ಯೂಬ್‌ಲೈಟ್ ಅಳವಡಿಕೆ ಮಾಡಲಾಗಿದೆ. ಪೈಂಟಿಂಗ್ ಅಗಿ ಮನೆಯು ಸಂಪೂರ್ಣ ಸುಸಜ್ಜಿತವಾಗಿ, ಸುಂದರವಾಗಿ ಮೂಡಿಬಂದಿದೆ. ವಿಜಯ ಸಾಮ್ರಾಟ್ ಸಂಸ್ಥೆಯ ಮೂಲಕ ಮನೆ ದುರಸ್ತಿಯ ಕೆಲಸ ಆರಂಭಗೊಂಡಾಗ ಮನೆಯೊಡತಿ ಭವಾನಿ ಅವರು ತಾವು ಕಷ್ಟಪಟ್ಟು ಕೆಲಸ ಮಾಡಿ ಕೂಡಿಟ್ಟಿದ್ದ ಸುಮಾರು 1 ಲಕ್ಷ ರೂ.ಗಳನ್ನು ವಿಜಯ ಸಾಮ್ರಾಟ್ ಸಂಘಟನೆಗೆ ನೀಡಲು ಮುಂದಾಗಿದ್ದರು. ಆದರೆ ಆ ಮೊತ್ತವನ್ನು ಪಡೆಯದೇ, ಭವಾನಿ ಅವರ ಮೊಮ್ಮಗಳು, 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ ಎಂದು ವಾಪಸ್ ನೀಡುವ ಮೂಲಕ ವಿಜಯ ಸಾಮ್ರಾಟ್ ಸಂಘಟನೆ ಮಾನವೀಯತೆಯನ್ನೂ ಮೆರೆದಿದೆ.

LEAVE A REPLY

Please enter your comment!
Please enter your name here