ಪುತ್ತೂರು: ಕಳೆದ 6 ವರ್ಷಗಳಿಂದ ಪುತ್ತೂರಿನ ನವತೇಜ ಟ್ರಸ್ಟ್ ಪುತ್ತೂರಿನಲ್ಲಿ ಆಯೋಜಿಸುತ್ತಿದ್ದ ಹಲಸು ಮೇಳ ಈ ಬಾರಿ ಜೂ.6ರಿಂದ 8ರವರೆಗೆ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಕ್ಯಾಂಪ್ಕೋ ನಿರ್ದೇಶಕ ಕೆದಿಲ ರಾಘವೇಂದ್ರ ಭಟ್ ಮತ್ತು ಪ್ರಗತಿಪರ ಕೃಷಿಕ ಮಣಿಲ ಮಹಾದೇವ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್ ಮೇಳದ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹಲಸು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ದಿಕ್ಸೂಚಿ ಮಾತುಗಳನ್ನಾಡಲಿದ್ದು, ಶ್ಯಾಮ್ ಜ್ಯುವೆಲ್ಸ್ ಗ್ರೂಪ್ ಸಿಎಂಡಿ ಕೇಶವಪ್ರಸಾದ್ ಮುಳಿಯ, ನಗರ ಸಭೆ ಆಯುಕ್ತ ಮಧು ಎಸ್. ಮನೋಹರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿ ಹಲಸಿನ ಘಮಲು ತುಸು ವಿಶೇಷವಾಗಿರಲಿದ್ದು, ಇದರ ಮನಮೋಹಕ ಸುಗಂಧ ಪುತ್ತೂರು ಸೇರಿದಂತೆ ಆಸುಪಾಸಿನ ಪ್ರದೇಶದ ಜನರನ್ನು ತನ್ನತ್ತ ಸೆಳೆಯಲಿದೆ.

ಬೇಸಿಗೆ ಕೊನೆಯಾಗುತ್ತಿರುವಂತೆ ಮುಂಗಾರು ಮಳೆಯ ಸಿಂಚನದೊಂದಿಗೆ ಹಲಸಿನ ಹಣ್ಣಿನ ಋತು ಆರಂಭವಾಗಲಿದೆ. ಹಲಸಿನ ಹಣ್ಣಿನ ರುಚಿ, ವೈಶಿಷ್ಟ್ಯತೆ ಮತ್ತು ಹಲಸಿನ ಹಣ್ಣಿನಿಂದ ತಯಾರಾಗುವ ವಿಭಿನ್ನ ಖಾದ್ಯಗಳನ್ನು ಸವಿಯುವ ಬಯಕೆ ಎಲ್ಲರಿಗಿದ್ದರೂ ಅದು ಸುಲಭವಾಗಿ ದೊರೆಯುವುದು ಕಷ್ಟ. ಆದರೆ ಈ ಬಾರಿ ಹಲಸಿನ ಮೇಳದಲ್ಲಿ ಹಲಸು ಸೇರಿದಂತೆ ಪ್ರಾದೇಶಿಕವಾಗಿ ಬೆಳೆಯುವ ಎಲ್ಲ ಹಣ್ಣುಗಳನ್ನು ಸವಿಯುವ ಅವಕಾಶ ಈ ಮೇಳ ಕಲ್ಪಿಸಲಿದೆ. ಇದಕ್ಕೆ ಪೂರಕವಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ, ಮರಿಕೆ ಉಮಾಶಂಕರಿ ಎ ಪಿ ಸಂಯೋಜನೆಯಲ್ಲಿ ನಡೆಯುವ ಹಲಸು ಹಣ್ಣುಗಳ ಕವಿಗೋಷ್ಠಿ, ಅಪರೂಪದ ಎಲ್ಲ ಹಣ್ಣಿನ ತಳಿಗಳ, ಹಣ್ಣುಗಳ, ಬೀಜಗಳ, ತೋಟಗಾರಿಕೆ ಗಿಡಗಳ ಮಳಿಗೆ ಮತ್ತು ಆಹಾರ ಮಳಿಗೆಗಳು, ಮನೋರಂಜನಾ ಸ್ಪರ್ಧೆಗಳು ಮೇಳಕ್ಕೆ ಇನ್ನಷ್ಟು ಮೆರುಗು ನೀಡಲಿದೆ.

ಜೂನ್ 7ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಅಧ್ಯಕ್ಷತೆ ಮತ್ತು ಶಿವಸುಬ್ರಹ್ಮಣ್ಯ ಪೆಲತ್ತಡ್ಕ ಇವರ ನಿರ್ವಹಣೆ ಮತ್ತು ಸಮನ್ವಯತೆಯಲ್ಲಿ ಹಾರ್ದಿಕ್ ಹರ್ಬಲ್ಸ್ ಪ್ರೈ.ಲಿ ಇದರ ಕಾರ್ಯನಿರ್ವಾಧಿಕಾರಿ ಮುರಳಿಧರ ಕೆ, ಶ್ರೀರಾಮ್ ಆಯಿಲ್ ಮಿಲ್ ನ ಸಂತೋಷ ಬೋನಂತಾಯ, ಸೇಡಿಯಾಪು ವಿಶ್ವಾಸ್ ಹೋಮ್ ಪ್ರಾಡಕ್ಟ್ ನ ವಿನಯ ಸೇಡಿಯಾಪು, ಪ್ರಗತಿಪರ ಕೃಷಿಕ ಶಿವಪ್ರಸಾದ್ ಪಟ್ಟೆ, ಹಣ್ಣುಗಳ ಪ್ರಗತಿಪರ ಕೃಷಿಕ ಚೇತನ್ ಶೆಟ್ಟಿ ಪಾಲ್ತಾಡು, ಹಣ್ಣುಗಳೊಂದಿಗೆ ವಿಷಯ ಮಂಡಿಸಲಿದ್ದಾರೆ.
ಮೇಳದಲ್ಲಿ ವಿವಿಧ ರೀತಿಯ ಹಣ್ಣುಗಳ ಜೊತೆಗೆ ಕೆಂಪು, ಹಳದಿ, ಬಿಳಿ ಹಲಸಿನ ಹಣ್ಣುಗಳು, ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕಲೇಟ್, ಹಪ್ಪಳ, ಹಲ್ವಾ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಚೇಲೂರಿನ ಕೆಂಪು ಹಲಸು, ನಾಗರಹೊಳೆಯ ಬಿಳಿ ಮತ್ತು ಕೊಡಗಿನ ರುದ್ರಾಕ್ಷಿ ಹಣ್ಣುಗಳು ಮೇಳದಲ್ಲಿ ಸವಿಯಲು ಸಿಗಲಿದೆ ಎನ್ನಲಾಗಿದೆ. ಇದರೊಂದಿಗೆ ಜೂ.7ರಂದು ಸಂಜೆ ಹಲಸಿನ ಮೌಲ್ಯ, ಅರಿವು ಹರಿವಿನ ಕಾಲ್ಪನಿಕ ಕಥಾನಕ ʼ ಪನಸೋಪಾಖ್ಯಾನʼ ಎಂಬ ವಿನೂತನ ತಾಳ ಮದ್ದಳೆ ಕಾರ್ಯಕ್ರಮವೂ ಜರಗಲಿದೆ. ಇದರ ಕಥಾಸಂಗ್ರಾಹಕ ಅಡ್ಕ ಗೋಪಾಲಕೃಷ್ಣ ಭಟ್, ಕವಿ ಶೇಡಿಗುಮ್ಮೆ ವಾಸುದೇವ ಭಟ್ ಕುಂಬಳೆ, ಪುತ್ತೂರು ಯಕ್ಷರಂಗದ ಅಧ್ಯಕ್ಷ ಕಾಡೂರು ಸೀತಾರಾಮ ಶಾಸ್ತ್ರೀ ಉಪಸ್ಥಿತಿಯಲ್ಲಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿ ಜಿ ಭಟ್ ಈ ನೂತನ ಪ್ರಸಂಗವನ್ನು ಬಿಡುಗಡೆಗೊಳಿಸಲಿದ್ದಾರೆ.

ನವತೇಜ ಟ್ರಸ್ಟ್ ನೇತೃತ್ವದ 7ನೇ ಆವೃತ್ತಿಯ ಈ ಹಲಸು ಮೇಳದ ಕೊನೆಯ ದಿನವಾದ ಜೂ.8ರಂದು ಬೆಳಿಗ್ಗೆ 11 ಗಂಟೆಗೆ ಪುತ್ತೂರು ಸಮೃದ್ದಿ ಗಿಡಗೆಳೆತನ ಸಂಘದ ಅಧ್ಯಕ್ಷ ಶಂಕರ್ ಸಾರಡ್ಕ, ಅಧ್ಯಕ್ಷತೆ ಮತ್ತು ನವನೀತ್ ನರ್ಸರಿಯ ವೇಣುಗೋಪಾಲ್ ಶಿಬರ, ನಿರ್ವಹಣೆ ಮತ್ತು ಸಮನ್ವಯತೆಯಲ್ಲಿ ಕುರುವೇರಿ ಕ್ಯಾಶ್ಯೂಸ್ ಬಾಯಾರು ಇದರ ವಿಶ್ವಕೇಶವ ಮತ್ತು ನವ್ಯಶ್ರೀ ಕುರುವೇರಿ, ಅನುತ್ತಮ ಚಾಕಲೇಟ್ ನ ಬಾಲಸುಬ್ರಹ್ಮಣ್ಯ ಪಿ ಎಸ್, ಉಪ್ಪಿನಂಗಡಿಯ ಪ್ರಗತಿಪರ ಜೇನು ಕೃಷಿಕ ಶ್ಯಾಮ ಭಟ್ ವಾದ್ಯಕೋಡಿ, ಬದಿಯಡ್ಕದ ಮೊಜಂಟಿ ಜೇನು ಕೃಷಿಕ ರಾಮಚಂದ್ರ ಪುದ್ಯೋಡು ತಮ್ಮ ಕೃಷಿ ಕ್ಷೇತ್ರದ ವಿಚಾರ ಮಂಡನೆ ಮಾಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 7ರ ವರೆಗೆ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಹಲಸು ಹಣ್ಣು ಮೇಳ(ಸಮ್ಮರ್ ಫ್ರೂಟ್ ಫೆಸ್ಟ್ – 2025) ಇದರ ಸಮಾರೋಪ ಸಮಾರಂಭ ಜೂ.8ರಂದು ಸಂಜೆ ನಡೆಯಲಿದೆ. ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಭಾ ನೇತೃತ್ವ ವಹಿಸಲಿದ್ದು, ಉಪ್ಪಿನಂಗಡಿ ಬಳ್ಳಿ ಆಯುರ್ಗ್ರಾಮದ ಮುಖ್ಯ ವೈದ್ಯ ಡಾ. ಸುಪ್ರಿತ್ ಲೋಬೋ, ಹಲಸು ಮೇಳದ ಸಮಾಪನಾ ಭಾಷಣ ಮಾಡಲಿದ್ದಾರೆ. ದ್ವಾರಕಾ ಕಾರ್ಪರೇಷನ್ ಪ್ರೈ.ಲಿ. ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್, ನವತೇಜ ಟ್ರಸ್ಟ್ ಕಾರ್ಯದರ್ಶಿ ಸುಹಾಸ್ ಮರಿಕೆ ಉಪಸ್ಥಿತಿಯಲ್ಲಿ ಶುಭನುಡಿಗಳನ್ನಾಡಲಿದ್ದು, ಸುದಾನ ಶಿಕ್ಷಣ ಸಂಸ್ಥೆಗಳ ರೆ. ಫಾ. ವಿಜಯ್ ಹಾರ್ವಿನ್, ರೋಟರಿ ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಜೆಸಿಐ ವಲಯ 15ರ ಜೆ ಕಾಮ್ಸ್ ಚೇರ್ಮನ್ ಜೆ ಸಿ ಧೀರಜ್ ಬಿ ಉದ್ಯಾವರ ಇದಕ್ಕೆ ಸಾಕ್ಷಿಯಾಗಲಿದ್ದಾರೆ.
3 ದಿನಗಳ ಹಲಸು, ಮಾವು ಸೇರಿದಂತೆ ಇನ್ನಿತರ ಹಣ್ಣುಗಳ ಈ ವಾರ್ಷಿಕ ಹಬ್ಬದಲ್ಲಿ ನಾಡಿನ ಜನತೆ ಭಾಗವಹಿಸಿ ವಿವಿಧ ಹಣ್ಣು ಸೇರಿದಂತೆ ಹಲವು ಬಗೆಯ ಹಲಸಿನ ಸ್ವಾದವನ್ನು ಆಸ್ವಾದಿಸುವ ಮೂಲಕ ಹಲಸು ಮೇಳ-2025ನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.