ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ವೇಗ

0

24 ಮಂದಿಯ ಜೀರ್ಣೋದ್ದಾರ ಸಮಿತಿ ಪಟ್ಟಿ ಸಿದ್ದ – ಜು.6ಕ್ಕೆ ಪ್ರಥಮ ಸಭೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ವೇಗ ಕೊಡಬೇಕು. ಈ ನಿಟ್ಟಿನಲ್ಲಿ 24 ಮಂದಿಯ ಜೀರ್ಣೋದ್ಧಾರ ಸಮಿತಿಯ ಪಟ್ಟಿ ಸಿದ್ದಗೊಂಡಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಜು.6ರಂದು ಜೀರ್ಣೋದ್ಧಾರ ಸಮಿತಿ ಪ್ರಥಮ ಸಭೆ ನಡೆಸಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ.


ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಜೂ.14ರಂದು ದೇವಳದ ಕಚೇರಿ ಸಭಾಂಗಣದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆಯಿತು. ಅಶೋಕ್ ಕುಮಾರ್ ರೈ ಅವರು ಮಾತನಾಡಿ, ದೇವಳದ ಅಭಿವೃದ್ದಿ ಕಾರ್ಯಗಳಿಗೆ ವೇಗ ಕೊಡಬೇಕು. ಈ ಸಂಬಂಧ ಈಗಾಗಲೇ ಜೀರ್ಣೋದ್ಧಾರ ಕಾರ್ಯಕ್ಕೆ 24 ಮಂದಿಯ ಪಟ್ಟಿ ತಯಾರಿಸಲಾಗಿದೆ. ಆ ಪಟ್ಟಿಯು ಧಾರ್ಮಿಕ ದತ್ತಿ ಇಲಾಖೆ ಜಿಲ್ಲಾಽಕಾರಿಗಳಲ್ಲಿ ಇದೆ. ಅಲ್ಲಿಂದ ಅವರು ಸದಸ್ಯರಿಗೆ ಅಧಿಕೃತ ಪತ್ರ ಕಳುಹಿಸುತ್ತಾರೆ. ಅದಾದ ಬಳಿಕ ತಕ್ಷಣ ಸಭೆಯನ್ನು ಕರೆದು ಜೀರ್ಣೋದ್ದಾರಕ್ಕೆ ವೇಗ ಕೊಡಬೇಕು. ದೇವಳದ ಸುತ್ತಲಿನ ನಾಲ್ಕು ಕಟ್ಟೆಗಳ ನಿರ್ಮಾಣಕ್ಕೆ ತಲಾ ರೂ. 15 ಲಕ್ಷ ಬೇಕು. ಅದಕ್ಕೆ ದಾನಿಗಳು ಮುಂದೆ ಬರಹುದು. ಆದಷ್ಟು ಬೇಗ ಈ ಕಾರ್ಯ ಮಾಡಬೇಕು ಎಂದರು.


5.70 ಕೋಟಿ ರೂ.ವೆಚ್ಚದಲ್ಲಿ ಕೆರೆಯ ಪೂರ್ಣ ಅಭಿವೃದ್ಧಿ: ನಗರಸಭೆಯಿಂದ 3.20 ಕೋಟಿ ರೂ.ಅನುದಾನ ದೇವಳದ ಕೆರೆ ಅಭಿವೃದ್ಧಿಗೆ ಬಂದಿದೆ. ನಗರ ಯೋಜನಾ ಪ್ರಾಧಿಕಾರದಿಂದ 2.50 ಕೋಟಿ ರೂ.ಅನುದಾನ ಇದೆ. ಒಟ್ಟು ರೂ.5.70 ಕೋಟಿಯಲ್ಲಿ ಕೆರೆ ಅಭಿವೃದ್ಧಿಯಾಗಲಿದೆ. ಕೆರೆ ಆಯನಕ್ಕೆ ತೊಂದರೆ ಆಗದಂತೆ ಕಾರಂಜಿ ನಿರ್ಮಾಣ ಆಗಬೇಕು. ಕೆರೆಯ ಸುತ್ತಲು 20 ಎಮ್‌ಎಮ್‌ನ ಗ್ರಾನೈಟ್ ಅಳವಡಿಸಬೇಕು. ಅದು ದೇವರು ಹೋಗುವ ಜಾಗಕ್ಕೆ ಪೂರ್ಣಗೊಳಿಸಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ನೆಲ್ಲಿಕಟ್ಟೆಯಲ್ಲಿ ಸುಸಜ್ಜಿತ ಕಮರ್ಷಿಯಲ್ ಕಾಂಪ್ಲೆಕ್ಸ್, ವಸತಿ ಗೃಹ: ನೆಲ್ಲಿಕಟ್ಟೆಯ ಬಳಿ ಇರುವ ದೇವಸ್ಥಾನದ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ವಸತಿ ಗೃಹ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ಧಪಡಿಸಿ. ಈಗಾಗಲೇ ಬ್ಯಾಂಕ್ ಆಫ್ ಬರೋಡಾ ಸಹಿತ ಹಲವು ಬ್ಯಾಂಕ್‌ಗಳು ಶಾಖೆ ಮಾಡಲು ಮುಂದೆ ಬಂದಿದ್ದಾರೆ. ಕೆಳಗಡೆ ಪೂರ್ಣ ಕಮರ್ಷಿಯಲ್ ಮಾಡಿ ಮೇಲ್ಗಡೆಯಲ್ಲಿ ವಸತಿ ಗೃಹ ನಿರ್ಮಾಣ ಮಾಡಬೇಕು ಎಂದು ಶಾಸಕರು ತಿಳಿಸಿದರು.‌


ಸ್ಮಶಾನ ಬಳಿ ವೆಟ್ ವೆಲ್ ನಿರ್ಮಾಣ:
ಮಳೆ ನೀರು, ಕೊಳಚೆ ನೀರು ಶುದ್ದೀಕರಣ ಯೋಜನೆಗೆ ದೇವಳದ ಸ್ಮಶಾನದ ಬಳಿ ವೆಟ್‌ವೆಲ್ ನಿರ್ಮಾಣ ಕುರಿತು ಶಾಸಕರು ಪ್ರಸ್ತಾಪಿಸಿದರು. ಇದಕ್ಕಾಗಿ 16 ಕೋಟಿ ರೂ.ಅನುದಾನ ಬಂದಿದೆ. ಸಮರ್ಪಕ ಒಳಚರಂಡಿಗೆ ಜಾಗ ಕೊಡಬೇಕಾಗಿದೆ. ದೇವಸ್ಥಾನದ ವಠಾರದಿಂದ ತ್ಯಾಜ್ಯ ನೀರನ್ನು ಪಕ್ಕದ ತೋಡಿನ ಬಳಿಯಿಂದ ಪೈಪ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಸ್ಮಶಾನದ ಬಳಿ ವೆಟ್‌ವೆಲ್ ಮಾಡಬೇಕಾಗಿದೆ. ಅಲ್ಲಿಂದ ಜಿಡೆಕಲ್ಲು ಶುದ್ದೀಕರಣ ಘಟಕಕ್ಕೆ ಮಲಿನ ನೀರನ್ನು ಕೊಂಡೊಯ್ಯುವ ಕೆಲಸ ಆಗಲಿದೆ. ಆದ್ದರಿಂದ ವೆಟ್‌ವೆಲ್ ಅಲ್ಲಿ ಮಾಡಬಹುದಾ ಮತ್ತು ಅಲ್ಲಿ ಖಾಸಗಿ ಜಾಗವನ್ನು ಖರೀದಿಸುವ ಕೆಲಸಕ್ಕೆ ಚಿಂತನೆ ಮಾಡಬೇಕು. ಅದಕ್ಕೂ ಮೊದಲು ಪ್ರಶ್ನಾಚಿಂತನೆಯನ್ನೂ ಮಾಡಬೇಕೆಂದು ಶಾಸಕರು ಸದಸ್ಯರಿಗೆ ಸೂಚನೆ ನೀಡಿದರು.


ಗುಡಿಗಳ ಸ್ಥಳಾಂತರಕ್ಕೆ ಪ್ರಶ್ನಾಚಿಂತನೆ: ಅಯ್ಯಪ್ಪ ಗುಡಿ, ನವಗ್ರಹ ಗುಡಿಯನ್ನು ಸ್ಥಳಾಂತರಿಸುವ ಚಿಂತನೆ ಇದೆ. ಅಯ್ಯಪ್ಪ ಗುಡಿ ಇರುವ ಜಾಗಕ್ಕೆ ಬ್ರಹ್ಮರಥ ಮಂದಿರ ಸ್ಥಳಾಂತರ ಮಾಡಬೇಕು. ಆದರೆ ಇದಕ್ಕೆಲ್ಲ ದೇವರ ಪ್ರಶ್ನಾಚಿಂತೆನೆ ಮಾಡುವುದು ಉತ್ತಮ. ದೇವರು ಅನುಮತಿ ಕೊಟ್ಟರೆ ಮುಂದಿನ ಹೆಜ್ಜೆ ಇಡೋಣ ಎಂದು ಶಾಸಕರು ತಿಳಿಸಿದರು.


ವಾಸುಕಿ ನಾಗ ಸನ್ನಿಧಿ ಮೂಲ ನಾಗಸನ್ನಿಧಿಗೆ ಸ್ಥಳಾಂತರ: ಮೂಲ ನಾಗ ಸನ್ನಿಧಿ ದೇವಳದ ಗದ್ದೆಯಲ್ಲಿದೆ. ಆಡಳಿತ ಕಚೇರಿಯ ಎದುರಿರುವ ವಾಸುಕಿ ನಾಗ ಸನ್ನಿಧಿಯನ್ನೂ ಕೂಡಾ ಮೂಲ ನಾಗ ಸನ್ನಿಧಿಗೆ ಸ್ಥಳಾಂತರಿಸಬಹುದು ಎಂದು ಶಾಸಕರು ತಿಳಿಸಿದರು.


ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ, ಅರ್ಚಕರೂ ಆದ ವೇ ಮೂ ವಸಂತ ಕೆದಿಲಾಯ, ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ನಳಿನಿ ಪಿ ಶೆಟ್ಟಿ, ವಿನಯ ಸುವರ್ಣ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ನಗರಯೋಜನಾ ಪ್ರಾಽಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯ ನಿಹಾಲ್ ಪಿ ಶೆಟ್ಟಿ, ಕಚೇರಿ ವ್ಯವಸ್ಥಾಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಊಟದ ಹಾಲ್‌ನ ಮೇಲ್ಛಾವಣಿ ಸಿಮೆಂಟ್ ಬಿದ್ದು ಹಾನಿ
ದೇವಳದ ಊಟದ ಹಾಲ್‌ನ ಮೇಲ್ಛಾವಣಿ ಕೆಲಸ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಅವಧಿಯಲ್ಲಿ ಆಗಿದೆ. ಈಗ ಹಾಲ್‌ನ ಮೇಲ್ಛಾವಣಿಯ ಸಿಮೆಂಟ್ ತುಂಡು ಬಿದ್ದು ಹಾನಿಯಾಗಿದೆ. ಈ ಕುರಿತು ಹಿಂದಿನ ಅವಽಯ ಅಧ್ಯಕ್ಷ ಕೇಶವ ಪ್ರಸಾದ್ ಅವರನ್ನು ಪ್ರಶ್ನಿಸಿದಾಗ ಕೆಲಸ ಮಾಡಿದವರ ವಿರುದ್ಧ ದೂರು ಕೊಡಿ. ಅವರು ನನಗೆ 9 ಲಕ್ಷ ರೂ.ಕೊಡಲು ಬಾಕಿ ಇದೆ ಎಂದಿದ್ದಾರೆ. ಹಾಗೆಂದು ಕೆಲಸ ಮಾಡಿದ ರಾಮಚಂದ್ರ ಘಾಟೆಯವರನ್ನು ಕೇಳಿದರೆ ಅವರು ನನಗೆ ಮುಳಿಯದವರು 16 ಕೊಡಲು ಬಾಕಿ ಇದೆ ಎಂದು ಹೇಳುತ್ತಾರೆ. ಹೀಗೆ ಮಾಡಿದ ಕೆಲಸಕ್ಕೆ ಜನ ಇಲ್ಲದಂತೆ ಆಗಿತ್ತು. ಈಗ ಮತ್ತೆ ಕೆಲಸ ಮಾಡಿದವರೇ ದುರಸ್ಥಿ ಮಾಡುತ್ತಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಶಾಸಕರಿಗೆ ತಿಳಿಸಿದರು.

ಕಮೀಷನರ್ ಕಚೇರಿಯಿಂದ ಮಾಸ್ಟರ್ ಪ್ಲ್ಯಾನ್ ತರಿಸಿ ಸರಕಾರಕ್ಕೆ ಕಳುಹಿಸಿ

ದೇವಸ್ಥಾನದ ಅಭಿವೃದ್ದಿಗೆ ಸಿದ್ದಪಡಿಸಿದ ಮಾಸ್ಟರ್ ಪ್ಲ್ಯಾನ್ ಕಮೀಷನರ್ ಕಚೇರಿಯಲ್ಲಿದೆ. ಅದನ್ನು ತಕ್ಷಣ ತರಿಸಿ ಸರಕಾರಕ್ಕೆ ಕಳುಹಿಸಿಕೊಡಬೇಕು. ಮೊಟ್ಟ ಮೊದಲು ಜೀರ್ಣೋದ್ಧಾರ ಕೆಲಸವನ್ನೂ ಆರಂಭಿಸಬೇಕು. ಮಾಸ್ಟರ್ ಪ್ಲ್ಯಾನ್‌ನಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇದ್ದರೆ ಸರಿಮಾಡಿಕೊಳ್ಳಬಹುದು.
ಅಶೋಕ್ ಕುಮಾರ್ ರೈ
ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here