‘ಇಸ್ರೇಲ್ ಸೈನ್ಯದ ಸ್ವರಕ್ಷಣಾ ವ್ಯವಸ್ಥೆಯ ಬಲದಲ್ಲಿ ಸುರಕ್ಷಿತವಾಗಿದ್ದೇವೆ’ – ಅರುಣ್
ಉಪ್ಪಿನಂಗಡಿ: ಇರಾನಿನ ಅಣು ಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಉಂಟಾಗಿರುವ ಪ್ರತಿದಾಳಿಯ ನೆಲೆಗಟ್ಟಿನಲ್ಲಿ ಇಸ್ರೇಲ್ ದೇಶದಾದ್ಯಂತ ಹೈ ಅಲರ್ಟ್ ಸ್ಥಿತಿ ಇದೆ. ವೈರಿ ರಾಷ್ಟ್ರದ ಆಕ್ರಮಣಗಳು ನಡೆಯುತ್ತಿದ್ದಂತೆಯೇ ಸೈರನ್ ಗಳು ಮೊಳಗಿದಾಗ ಸೆಲ್ಟರ್ ನೊಳಗೆ ಆಶ್ರಯ ಪಡೆಯುತ್ತಿದ್ದೇವೆ ಎಂದು ಪ್ರಸಕ್ತ ಇಸ್ರೇಲ್ ನಲ್ಲಿರುವ ಉಪ್ಪಿನಂಗಡಿ ನಿವಾಸಿ ಅರುಣ್ ಗೋಡ್ವಿನ್ ಮಿನೇಜಸ್ ತಿಳಿಸಿದ್ದಾರೆ.
ಇಸ್ರೇಲ್ ಅಭೇಧ್ಯವಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ವೈರಿ ರಾಷ್ಟ್ರದ ಕ್ಷಿಪಣಿಗಳನ್ನು ಆಕಾಶದಲ್ಲೇ ಬೆನ್ನಟ್ಟಿ ದ್ವಂಸಗೊಳಿಸಲಾಗುತ್ತಿದೆ. ಆದಾಗ್ಯೂ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದಾಗ ಕೆಲವೊಂದು ಮಿಸೈಲ್ ಗಳು ಅಪ್ಪಳಿಸುತ್ತಿದೆ. ಕಳೆದ ರಾತ್ರಿ ಟೆಲ್ ಅವೀವ್ ನಲ್ಲಿರುವ ನಮ್ಮ ಮನೆಯ ಸಮೀಪದಲ್ಲೇ ಮಿಸೈಲೊಂದು ಅಪ್ಪಳಿಸಿತ್ತು. ದೊಡ್ಡದಾದ ಶಬ್ದ ಕೇಳಿಸಿ ಭಯದಿಂದ ಸೆಲ್ಟರ್ ನಿಂದ ಹೊರಗೆ ಬಂದಿದ್ದೇವೆ. ದಾಳಿ ಪ್ರತಿದಾಳಿಗಳು ರಾತ್ರಿ ವೇಳೆಯಲ್ಲೇ ನಡೆಯುತ್ತಿರುವುದರಿಂದ ಸಹಜವಾಗಿ ಭಯದ ವಾತಾವರಣ ಉಂಟಾಗಿದೆ.
ಕಳೆದ ರಾತ್ರಿ ಮೂರು ಬಾರಿ ಸೈರನ್ ಮೊಳಗಿದ್ದು, ಮನೆ ಸಮೀಪದ ಶೆಲ್ಟರ್ನಲ್ಲಿ ರಕ್ಷಣೆ ಪಡೆದಿರುತ್ತೇವೆ. ಅಂಗಡಿ, ಮುಂಗಟ್ಟುಗಳು ಮುಚ್ಚಿವೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಹೊರಗಡೆ ಸುತ್ತಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇರಾನ್ನಿಂದ ಪ್ರತಿದಾಳಿಯ ನಿರೀಕ್ಷೆಯಿಂದ ಹೆಚ್ಚಿನ ಅಲರ್ಟ್ ಇದೆ. ಯಾವುದೇ ಸಮಯದಲ್ಲಿ ಏನಾದರೂ ಸಂಭವಿಸಬಹುದೆಂಬ ಭೀತಿ ಮಾತ್ರ ಎಲ್ಲರಲ್ಲೂ ಇದೆ. ಸದ್ಯಕ್ಕೆ ಇಸ್ರೇಲ್ ಸೈನ್ಯದ ಸ್ವರಕ್ಷಣಾ ವ್ಯವಸ್ಥೆಯ ಬಲದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ವಿವರಿಸಿದ್ದಾರೆ.