ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

0

ಯೋಗವು ಶಾರೀರಿಕ ಸ್ವಾಸ್ಥ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ- ಟಿ ಶುಭಾ ಜಿ ಶೆಟ್ಟಿ

ಪುತ್ತೂರು: ಯೋಗವು ಒಂದು ಬೆಳಕು. ಒಂದು ಬಾರಿ ಬೆಳಗಿದರೆ, ಕತ್ತಲಲ್ಲಿ ಇರಲು ಬಿಡುವುದಿಲ್ಲ. ಅದು ಯಾವುದೇ ದೇಶ, ಭಾಷೆ, ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆತಿದೆ. ಯೋಗವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರ ಬದ್ಧವಾಗಿರದೆ, ಉತ್ತಮ ಮಾನಸಿಕ ಸ್ಥಿರತೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದು  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (SPYSS)  ಆಫೀಸರ್ಸ್ ಕ್ಲಬ್ ನ ಯೋಗ ಶಿಕ್ಷಕಿ ಟಿ ಶುಭಾ ಜಿ ಶೆಟ್ಟಿ ಇವರು ಹೇಳಿದರು.

ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  ಯೋಗವು ಶರೀರ ಮತ್ತು ಉಸಿರನ್ನು ಜೋಡಿಸುವ ಕ್ರಿಯೆಯಾಗಿದೆ. ಇಂದಿನ ದಿನಗಳ ಹದ ತಪ್ಪಿದ ಆಹಾರ ಪದ್ಧತಿಯಿಂದಾಗಿ ಶರೀರವು ನಾನಾ ರೋಗಗಳಿಗೆ ತುತ್ತಾಗುವುದು ಸಹಜ. ಇದರಿಂದ ಹೊರಬರಲು ನಮಗಿರುವ ಏಕೈಕ ಅವಕಾಶವೆಂದರೆ ನಿರಂತರ ಯೋಗಾಭ್ಯಾಸ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕರಾದ ಎಂ ಗೋಪಾಲಕೃಷ್ಣ ಭಟ್‌ ವಹಿಸಿಕೊಂಡು, ಯೋಗವು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಬದಲಾದ ಜೀವನ ಶೈಲಿಯಲ್ಲಿ  ನಿರಂತರವಾದ ಯೋಗಾಭ್ಯಾಸ ಮನೋದೈಹಿಕ ಸದೃಢತೆಯನ್ನು ನೀಡಬಲ್ಲದು. ಮಾಲಿನ್ಯ ಹಾಗೂ  ಮಾನವ ನಿರ್ಮಿತ ಸಮಸ್ಯೆಗಳ ನಿರ್ಮೂಲನೆ ಯೋಗದಿಂದ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಉಪಸ್ಥಿತರಿದ್ದರು. ಯೋಗ ದಿನದ ಅಂಗವಾಗಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಕಾಲೇಜಿನ  ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಾದ ರಶ್ಮಿ ಹಾಗೂ ಕಾಲೇಜಿನ ಪ್ರಯೋಗಾಲಯದ ಸಹಾಯಕರಾದ ಶಿವಾನಂದ ಸಹಕರಿಸಿದರು.

 ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ  ವೃಂದದವರು ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಿವ್ಯಾ.ಜಿ  ಸ್ವಾಗತಿಸಿ , ಕಾರ್ಯಕ್ರಮವನ್ನು ನಿರೂಪಿಸಿದರು.  ದೈಹಿಕ ನಿರ್ದೇಶಕರಾದ ಡಾ| ಜ್ಯೋತಿ ವಂದಿಸಿದರು.

LEAVE A REPLY

Please enter your comment!
Please enter your name here