ಗುರು ಹಿರಿಯರಿಗೆ ಋಣಿಗಳಾಗಿರಬೇಕು : ಡಿವೈಎಸ್ಪಿ ಅರುಣ್ ಎನ್. ಗೌಡ
ಪುತ್ತೂರು: ವಿದ್ಯಾರ್ಥಿಗಳು ಗುರು ಹಿರಿಯರಿಗೆ ಋಣಿಗಳಾಗಿ ಜೀವನವನ್ನು ಸಾಗಿಸಬೇಕು. ವಿದ್ಯಾರ್ಥಿ ಜೀವನವನ್ನು ಅತ್ಯುತ್ತಮವಾಗಿ ಬಳಸಿಕೊಂಡು ಮುನ್ನಡೆಯಬೇಕು. ಸಂಸ್ಕೃತಿ, ಸಂಸ್ಕಾರ ಮಾತ್ರವಲ್ಲದೆ ಪರಸ್ಪರ ಸಹಕಾರದ ತತ್ತ್ವಗಳಡಿ ಉತ್ಕೃಷ್ಟ ಶಿಕ್ಷಣವನ್ನು ತಮ್ಮದಾಗಿಸಿಕೊಂಡು ದೇಶಸೇವೆಯೆಡೆಗೆ ಗಮನ ಹರಿಸಬೇಕು ಎಂದು ಪುತ್ತೂರಿನ ಡಿವೈಎಸ್ಪಿ ಅರುಣ್ ಎನ್. ಗೌಡ ಹೇಳಿದರು.
ಜೂ.೩೦ರಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಮತ್ತೋರ್ವ ಅತಿಥಿ ಪುತ್ತೂರಿನ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಜ್ಞಾನಕ್ಕೆ ಸರಿ ಸಮಾನ ಇನ್ನೊಂದಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಸುಂದರ ಜೀವನವನ್ನು ಹಾಳು ಮಾಡುವ ಅಸ್ತ್ರವಾಗಿ ಮೊಬೈಲ್ ಕೆಲಸ ಮಾಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಮೊಬೈಲ್ನಿಂದ ದೂರವಿದ್ದು ಅಧ್ಯಯನ ನಡೆಸಬೇಕು. ಕಾನೂನು ಎಲ್ಲದಕ್ಕಿಂತ ದೊಡ್ಡದು. ಅದನ್ನು ಯಾರೂ ಉಲ್ಲಂಘಿಸುವಂತಿಲ್ಲ. ಆದ್ದರಿಂದ ಹಕ್ಕು, ಅಧಿಕಾರ, ಕಾನೂನು, ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಲೇಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಖಾಕಿ ಎಂದರೆ ಹೆಮ್ಮೆ, ಮೈ ರೋಮಾಂಚನವಾಗುತ್ತದೆ. ದೇಶವನ್ನು ಕಾಯುವವರು ಸೈನಿಕರಾದರೆ ಸಮಾಜವನ್ನು ಕಾಯುವವರು ಆರಕ್ಷಕರು. ಸಮಾಜ ಮುಖಿಯಾಗಿ ರಕ್ಷಣೆ ಕೊಡುವ ಪೊಲೀಸರಿಗೆ ಎಲ್ಲರೂ ಸದಾ ಕೃತಜ್ಞರಾಗಿರಬೇಕು. ನಾಳಿನ ಸಮಾಜ ಕಟ್ಟುವ ಕೆಲಸ ವಿದ್ಯಾರ್ಥಿಗಳದ್ದು ಎಂದು ನುಡಿದರು.
ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಪ್ರಮಾಣವಚನ ಬೋಧಿಸಿದರು. ಅತಿಥಿಗಳು ನಿಕಟಪೂರ್ವ ವಿದ್ಯಾರ್ಥಿ ನಾಯಕ ಪವನ್ ಭಾರದ್ವಾಜ ಅವರ ಬಳಿಯಿಂದ ಶಾಲಾ ಧ್ವಜವನ್ನು ನೂತನ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ಶಿವರಾಮ ಆಳ್ವಾ, ವಿದ್ಯಾರ್ಥಿ ನಾಯಕರಾದ ಜಶ್ಮಿ, ಶ್ರೀಕೃಪಾ ನಟ್ಟೋಜ, ಸನ್ನಿಧಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರೀದೇವಿ, ಅನನ್ಯ, ಸಮನ್ವಿಕ, ಸೃಷ್ಟಿ, ಶಮಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಮುಕ್ತಾ ಸ್ವಾಗತಿಸಿ, ಸಾನ್ವಿ ವಂದಿಸಿದರು. ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.