ಪುತ್ತೂರು: ಮೈಸೂರಿನ ಪ್ರತಿಷ್ಠಿತ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ತನುಜ ಕಾಯರ್ಗ ಸಾದರಪಡಿಸಿದ ‘ ಡಿಸೈನ್ ಆ್ಯಂಡ್ ಡೆವಲಪ್ ಸ್ವಾಮ್ ಇಂಟಲಿಜೆನ್ಸ್ ಬೇಸ್ಟ್ ಕ್ಲಸ್ಟರಿಂಗ್ ಅಲ್ಗೊರಿದಂ ಫಾರ್ ಎಫಿಸಿಯಂಟ್ ರೂಟಿಂಗ್ ಇನ್ ಇಂಟರ್ ನೆಟ್ ಆಫ್ ವೆಹಿಕಲ್ಸ್ ’ ಮಹಾ ಪ್ರಬಂಧಕ್ಕೆ ತಮಿಳುನಾಡಿನ ವೆಲ್ಲೂರು ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ ಡಾಕ್ಟರೇಟ್ ಪದವಿ ನೀಡಿದೆ.
ವಿಐಟಿ ಅಸೋಸಿಯೆಟ್ ಪ್ರೊಫೆಸರ್ ಡಾ. ಎಸ್. ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ಈ ಪ್ರಬಂಧ ಸಿದ್ಧಪಡಿಸಿದ್ದಾರೆ. ಆಗಸ್ಟ್ 2 ರಂದು ವಿಐಟಿ ಕ್ಯಾಂಪಸ್ ನಲ್ಲಿ ನಡೆದ 39ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಬಿಎ) ಅಧ್ಯಕ್ಷ ಪ್ರೊಫೆಸರ್ ಅನಿಲ್ ಡಿ. ಸಹಸ್ರ ಬುದ್ದೆ ಇವರ ಸಮ್ಮುಖದಲ್ಲಿ ವಿವಿ ಕುಲಾಧಿಪತಿ ಜಿ. ವಿಶ್ವನಾಥನ್ ಅವರು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರದಾನ ಮಾಡಿದರು.
ವಿಶ್ವವಾಣಿ ಪತ್ರಿಕೆಯ ಕಾರ್ಯಕಾರಿ ಸಂಪಾದಕ ಲೋಕೇಶ್ ಕಾಯರ್ಗ ಸವಣೂರು ಇವರ ಪತ್ನಿಯಾಗಿರುವ ಡಾ. ತನುಜ ಪ್ರಸ್ತುತ ಮೈಸೂರು ನಿವಾಸಿಯಾಗಿದ್ದು, ಕಡಬ ತಾಲೂಕು ಐವತ್ತೊಕ್ಲು ಗ್ರಾಮದ ಕಂಬಳ ಮನೆಯ ದಿ. ದುಷ್ಯಂತ ಮತ್ತು ಗುಲಾಬಿ ದಂಪತಿ ಪುತ್ರಿ. ಮೈಸೂರಿನ ಎಸ್ಜೆಸಿ ತಾಂತ್ರಿಕ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮುಗಿಸಿ, ಬೆಂಗಳೂರಿನ ಡಾ. ಅಂಬೇಡ್ಕರ್ ತಾಂತ್ರಿಕ ವಿವಿಯಲ್ಲಿ ಎಂಟೆಕ್ ಪದವಿ ಪೂರೈಸಿರುವ ಇವರು ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು ‘ ಕೃತಕ ಬುದ್ಧಿಮತ್ತೆ’ ಕುರಿತಂತೆ ಕೃತಿ ರಚಿಸಿದ್ದಾರೆ.