ಉಜಿರೆ: ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅನೇಕರ ಜೀವನಕ್ಕೆ ಬೆಳಕು ನೀಡುತ್ತಿರುವ ಉಜಿರೆಯ ‘ಬದುಕು ಕಟ್ಟೋಣ ಬನ್ನಿ ತಂಡ’ದ ವತಿಯಿಂದ ಉಜಿರೆ ಗ್ರಾಮದ ಪಡುವೆಟ್ಟು ಬೈಲಿನಲ್ಲಿ ದ್ವಿತೀಯ ವರ್ಷದ ನೇಜಿ ನಾಟಿ ಕಾರ್ಯಕ್ರಮ ನಾಳೆ ನ. 13ರಂದು ನಡೆಯಲಿದೆ.
2019ರ ಪ್ರವಾಹದ ವೇಳೆ ಹುಟ್ಟಿಕೊಂಡ ಬದುಕು ಕಟ್ಟೋಣ ಬನ್ನಿ ತಂಡ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ರಮಗಳು ಜನಜನಿತವಾಗಿದ್ದು,ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿಮೆಯು ಸಿಕ್ಕಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ,ಡಾ.ಹೇಮಾವತಿ ವೀ.ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ
ಪಡುವೆಟ್ಟು ಬೈಲಿನ ಸುಮಾರು 5 ಎಕರೆ ಪ್ರದೇಶದ ಗದ್ದೆಯಲ್ಲಿ ನಡೆಯಲಿರುವ ನೇಜಿ ನಾಟಿ ಕಾರ್ಯಕ್ರಮಕ್ಕೆ ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವ ನೀಡಲಿದೆ.
ಬೆಳಿಗ್ಗೆ 8.30ಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ದೇವರ ಗದ್ದೆಯಲ್ಲಿ ಬಾಳೆಹಾಕುವ ವಿಧಿ ವಿಧಾನಗಳನ್ನು ನಡೆಸುವ ಮೂಲಕ ಸುಗ್ಗಿ ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಯುವ ಜನತೆಗೆ ಭತ್ತ ಬೇಸಾಯದ ಮಾಹಿತಿ ಕಾರ್ಯಾಗಾರವನ್ನು ನೀಡುವ ಉದ್ದೇಶವನ್ನು ಹೊಂದಿರುವ ಇದರಲ್ಲಿ ಉಜಿರೆಯ ಎಸ್ ಡಿ ಎಂ ಕಾಲೇಜಿನ ನೂರರಷ್ಟು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಶಿಸಿ ಹೋಗುತ್ತಿರುವ ಭತ್ತದ ಬೇಸಾಯ ವನ್ನು ಹಿಂದಿನ ಪದ್ಧತಿಗಳೊಂದಿಗೆ ಯುವಜನತೆಗೆ ಪರಿಚಯಿಸುವ ಜತೆಗೆ ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಕಾಳಜಿಯ ಕಾರ್ಯಕ್ರಮವಾಗಿದೆ.
ಗೋವಿಗಾಗಿ ಮೇವು
ಈ ಗದ್ದೆಗಳಿಂದ ಬರುವ ಫಸಲನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ನೈವೇದ್ಯಕ್ಕೆ ಬೇಕಾದ ಅಕ್ಕಿಗೆ ನೀಡಲಾಗುತ್ತದೆ. ಇದರಿಂದ ಸಿಗುವ ಬೈಹುಲ್ಲನ್ನು ಕಳೆಂಜದಲ್ಲಿರುವ ನಂದಗೋಕುಲ ಗೋಶಾಲೆಗೆ ಪೂರೈಸಲಾಗುತ್ತದೆ. ಇದು ಅಲ್ಲಿರುವ ಗೋವುಗಳ ಮೇವಿಗೆ ಅನುಕೂಲವಾಗಲಿದೆ.
ಪಾಯಿಂಟ್ಸ್
+ಪ್ರವಾಹ ಪೀಡಿತ ಚಾರ್ಮಾಡಿ ಕೊಳಂಬೆ ಪ್ರದೇಶದ ಕೃಷಿ ಭೂಮಿ ಹಾಗೂ ಜನಜೀವನಕ್ಕೆ ಹೊಸ ಬೆಳಕು ನೀಡಿದ ತಂಡ
+ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿಮೆ
+ಸಾಮಾಜಿಕ ಕಾರ್ಯಗಳಿಗೆ ಅಹರ್ನಿಶಿ ಸಿದ್ಧವಿರುವ ತಂಡ
+ಸರಕಾರಿ ಶಾಲೆಗಳ ಅಭಿವೃದ್ಧಿ,ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ದಾರಿದೀಪವಾಗುತ್ತಿರುವ ತಂಡ
ಕೋಟ್ಸ್
ನಮ್ಮ ಹಿಂದಿನ ಪದ್ಧತಿಗಳನ್ನು ಎತ್ತಿ ಹಿಡಿಯುವ ಉದ್ದೇಶ, ಯುವ ಜನತೆಗೆ ಕೃಷಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಈ ಕಾರ್ಯಕ್ರಮ ಗೋವುಗಳ ಮೇವಿಗು ಸಹಕಾರ ನೀಡುವ ಉದ್ದೇಶದೊಂದಿಗೆ ರೂಪಿಸಲಾಗಿದೆ.”