ಪುತ್ತೂರು: ಅಖಿಲ ಭಾರತ ಸೈಕ್ಲಿಂಗ್ ಪ್ರವಾಸದಲ್ಲಿರುವ ಜಾರ್ಖಂಡ್ನ ಜೆಮ್ಶೆಡ್ಪುರದ ಅಧಿರಾಜ್ ಬರುವಾ ಅವರಿಗೆ ಮರೀಲ್ನಲ್ಲಿರುವ ಪುತ್ತೂರು ಕ್ಲಬ್ ವತಿಯಿಂದ ಕ್ಲಬ್ ಆವರಣದಲ್ಲಿ ಜ.26ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ನಡೆಯಿತು. ಅಧಿರಾಜ್ರವರ ಸಮಾಜಮುಖಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸುವ ಸಲುವಾಗಿ ಇವರನ್ನು ಸನ್ಮಾನಿಸಲಾಯಿತು. ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಿದರು. ಕ್ಲಬ್ ಕೋಶಾಧಿಕಾರಿ ದಿವಾಕರ ಕೆ.ಪಿ., ಉಪಾಧ್ಯಕ್ಷ ದೀಪಕ್ ಕೆ.ಪಿ., ಕ್ಲಬ್ ಸದಸ್ಯ ಝೇವಿಯರ್ ಡಿ.ಸೋಜ, ಸದಸ್ಯರಾದ ರೂಪೇಶ್ ಶೇಟ್, ರಾಧಾಕೃಷ್ಣ ಬೂಡಿಯಾರ್, ಗಣೇಶ್ ಕಾಮತ್, ರಿತೇಶ್ ಪೈ, ದಾಮೋದರ್ ಶೆಣೈ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
ಸರಿ ಸುಮಾರು ೩೨೦೦೦ ಕಿಲೋ ಮೀಟರ್ಗಳವರೆಗೆ ತನ್ನ ಬೈಸಿಕಲ್ ಅನ್ನು ಪೆಡಲ್ ಮಾಡುತ್ತಾ ರಾಷ್ಟ್ರದ ೨೯ ರಾಜ್ಯಗಳನ್ನು ಒಳಗೊಂಡು ಅಂದಾಜು ೧ ವರ್ಷ ೬ ತಿಂಗಳ ಅವಧಿಯಲ್ಲಿ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಲಿರುವ ಅಧಿರಾಜ್ ಬರುವಾ ರಾಷ್ಟ್ರೀಯ ಏಕೀಕರಣ, ವಿಶ್ವ ಶಾಂತಿ ಮತ್ತು ಬಾಲ್ಯ ವಿವಾಹದ ವಿರುದ್ಧದ ಹೋರಾಟಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ. ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ಪರಿಸರಕ್ಕಾಗಿ ಪ್ರಚಾರ ಮಾಡುತ್ತಿರುವ ಇವರು ತಮ್ಮ ತಂದೆ ಅಲೋಕ್ ರಂಜನ್ ಬರುವಾ ಅವರಿಂದ ಪ್ರೇರಿತರಾಗಿ ಈ ಕಾರ್ಯ ನಡೆಸುತ್ತಿದ್ದಾರೆ. ೧೯೮೭ರಲ್ಲಿ ಟಾಟಾ ಪ್ರಾಯೋಜಿತ ಅಖಿಲ ಭಾರತ ಸೈಕ್ಲಿಂಗ್ ದಂಡಯಾತ್ರೆಯನ್ನು ೨೫ ರಾಜ್ಯಗಳನ್ನು ಒಳಗೊಂಡಂತೆ ಸಾಧಿಸಿರುವ ಇವರಿಗೆ ಈ ಯಾತ್ರೆ ೧ ವರ್ಷ ಮತ್ತು ೪ ತಿಂಗಳುಗಳನ್ನು ತೆಗೆದುಕೊಂಡಿದೆ.