ಪುತ್ತೂರು: ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಿ, ಅದನ್ನು ಬಹಿಷ್ಕರಿಸುವ ಮತ್ತು ಉತ್ತಮ ಸೇವೆಗೆ ಪುರಸ್ಕಾರ ನೀಡುವ ಮೂಲಕ ಲಂಚ, ಭ್ರಷ್ಟಾಚಾರದ ಪಿಡುಗುನಿಂದ ತಾಲೂಕನ್ನು ಮುಕ್ತಗೊಳಿಸುವ ಉದ್ದೇಶದಿಂದ ಸುದ್ದಿಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಜನಾಂದೋಲನಕ್ಕೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಜ. ೨೯ರಂದು ಸಭೆಯ ಕೊನೆಯ ಅವಧಿಯಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆಯೊಂದಿಗೆ ಸುದ್ದಿಯ ಜನಾಂದೋಲನಕ್ಕೆ ಸಂಬಂಧಿಸಿ ಎಪಿಎಂಸಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿ ಎಪಿಎಂಸಿಯಿಂದ ಏನಾದರೂ ಭ್ರಷ್ಟಾಚಾರ ಇದ್ದರೆ ಹೇಳಿ ಎಂದರು. ಅಧ್ಯಕ್ಷರು ಮಾತನಾಡಿ ನಾವು ಎಪಿಎಂಸಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ. ಮುಂದೆಯೂ ಕೂಡಾ ಪುತ್ತೂರು ಎಪಿಎಂಸಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಲು ನಾವು ಕಟಿಬದ್ದರಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ನಿರ್ದೇಶಕರಾದ ಅಬ್ದುಲ್ ಶಕೂರ್ ಹಾಜಿ, ಬೂಡಿಯಾರ್ ರಾಧಾಕೃಷ್ಣ ರೈ, ಪುಲಸ್ತ್ಯಾ ರೈ, ತ್ರಿವೇಣಿ ಪೆರ್ವೋಡಿ, ತೀರ್ಥಾನಂದ ದುಗ್ಗಲ, ಕೊರಗಪ್ಪ, ಕುಶಾಲಪ್ಪ ಗೌಡ, ಮೇದಪ್ಪ ಗೌಡ, ಕೃಷ್ಣಕುಮಾರ್ ರೈ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಸ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು.