ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆಯಲ್ಲಿ ಮರವೊಂದು ಮುರಿದು ಹೆದ್ದಾರಿಗೆ ಬಿದ್ದ ಘಟನೆ ಜ.30ರಂದು ಬೆಳಿಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿಯಿಂದ ಗುಂಡ್ಯ ತನಕ ಹೆದ್ದಾರಿಯುದ್ದಕ್ಕೂ ಮರಗಳು ಅಪಾಯಕಾರಿಯಾಗಿದ್ದು ಬೀಳುವ ಹಂತದಲ್ಲಿವೆ. ಈ ಹಿಂದೆ ಜ.2ರಂದು ಅಡ್ಡಹೊಳೆ-ಗುಂಡ್ಯ ಸಮೀಪ ಕಾರಿನ ಮೇಲೆ ಹಾಲುಮಡ್ಡಿ ಮರಬಿದ್ದ ಪರಿಣಾಮ ಅದರ ಚಾಲಕ ಮೃತಪಟ್ಟಿದ್ದರು.
ಇದಾದ 15 ದಿನದ ಬಳಿಕ ಜ.17ರಂದು ಅದೇ ಪರಿಸರದಲ್ಲಿ ಬೈಕ್ ಮೇಲೆಯೇ ಹಾಲುಮಡ್ಡಿ ಮರ ಬಿದ್ದ ಪರಿಣಾಮ ಬೈಕ್ ಪಲ್ಟಿಯಾಗಿ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದರು. ಇದೀಗ ಜ.30ರಂದು ಬೆಳಿಗ್ಗೆ ಅಡ್ಡಹೊಳೆ-ಗುಂಡ್ಯ ಮಧ್ಯೆ ಮರವೊಂದು ಮುರಿದು ರಸ್ತೆಗೆ ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಈ ಪರಿಸರದಲ್ಲಿ ಹೆದ್ದಾರಿಯುದಕ್ಕೂ ಅಲ್ಲಲ್ಲಿ ಮರಗಳು ಒಣಗಿ ನಿಂತಿದ್ದು ಬೀಳುವ ಸ್ಥಿತಿಯಲ್ಲಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.