ಕಡಬ: ಕಡಬದ ಪೆಟ್ರೋಲ್ ಬಂಕ್ವೊಂದರಲ್ಲಿ ಇಡಲಾಗಿದ್ದ ಜೇಸಿಬಿಯ ಬಕೇಟನ್ನು ಹಾಡಹಗಲೇ ಕಳವು ನಡೆಸಿ ಬಳಿಕ ಅದನ್ನು ಗುಜರಿಗೆ ಮಾರಾಟ ಮಾಡಿರುವ ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕಳವು ನಡೆಸಿದ ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ. ಕಳವು ನಡೆಸಲು ಬಳಸಲಾಗಿದ್ದ ಆರೋಪಿಯ ರಿಕ್ಷಾ ಕಡಬ ಪೋಲಿಸರ ವಶದಲ್ಲಿದೆ.
ಘಟನೆಯ ವಿವರ:
ಕಡಬದ ಪೆಟ್ರೋಲ್ ಬಂಕ್ ಒಂದರಲ್ಲಿ ಸದಾನಂದ ಎಂಬವರು ಜೇಸಿಬಿಯ ಬಕೇಟ್ನ್ನು ಇಟ್ಟಿದ್ದರು, ಆದರೇ ಜ.೩೦ರಂದು ಜೇಸಿಬಿ ಬಕೇಟ್ ಕಾಣೆಯಾಗಿರುವ ಮಾಹಿತಿಯನ್ನು ಸದಾನಂದ ಅವರ ಜೇಸಿಬಿ ಆಪರೇಟರ್ ನೀಡಿದ್ದು, ಈ ಬಗ್ಗೆ ಸದಾನಂದ ಅವರು ಕಡಬ ಪೋಲಿಸರಿಗೆ ದೂರು ನೀಡಿದ್ದರು. ಬಳಿಕ ಸದಾನಂದರು ಪೆಟ್ರೋಲ್ ಬಂಕ್ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ವೀಕ್ಷಣೆ ಮಾಡಿದ್ದರೂ ಸ್ವಷ್ಟವಾದ ಮಾಹಿತಿ ಸಿಕ್ಕಿರಲಿಲ್ಲ, ಬಳಿಕ ಜೇಸಿಬಿಯ ಮಾಲಕ ಸದಾನಂದರವರು ಕಡಬ ಮತ್ತು ಪಂಜದ ಗುಜರಿ ಅಂಗಡಿಯಲ್ಲಿ ವಿಚಾರಿಸಿದ್ದು ಇ ವೇಳೆ ಪಂಜದ ಗುಜರಿ ಅಂಗಡಿಯಲ್ಲಿ ಸದಾನಂದ ಅವರ ಜೇಸಿಬಿಯ ಬಕೇಟ್ ಪತ್ತೆಯಾಗಿತ್ತು, ಈ ಬಗ್ಗೆ ಸದಾನಂದರವರು ಪೋಲಿಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೋಲಿಸರು ಬಕೇಟ್ ಮಾರಾಟ ಮಾಡಿದವರಿಗೆ ಪೋನ್ ಮಾಡಿದ್ದರೂ ಅವರು ರಿಸಿವ್ ಮಾಡಿರಲಿಲ್ಲ, ಆದರೇ ಅಚಾನಕ್ ಆಗಿ ಅದೇ ವೇಳೆ ಆರೋಪಿಗಳೇ ಬೇರೆ ಗುಜರಿ ವಸ್ತುಗಳನ್ನು ಅಟೋದಲ್ಲಿ ತುಂಬಿಸಿಕೊಂಡು ಬರುತ್ತಿದ್ದರು. ಕೂಡಲೇ ಪೋಲಿಸರು ಅವರನ್ನು ಠಾಣೆಗೆ ತಂದು ವಿಚಾರಣೆ ನಡೆಸಿದ್ದು ಬಳಿಕ ಮಾತುಕತೆ ನಡೆಸಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಈ ಸಹೋದರ ಯುವಕರಿಗೆ ಪುಳಿಕುಕ್ಕು ಎಂಬಲ್ಲಿನ ಅಟೋ ರಿಕ್ಷಾ ಚಾಲಕನೋರ್ವ ಸಾಥ್ ನೀಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಇಂತಹ ಪುಡಿ ಕಳ್ಳರ ಹಾವಲಿಯಿಂದ ಕಡಬ ಜನತೆ ಎಚ್ಚರ ಇರಬೇಕಾದ ಅನಿವಾರ್ಯತೆ ಇದೆ.