ಎಲಿಯದ ಎಲ್ಯ ಊರುಡು ಬ್ರಹ್ಮಕಲಶೋತ್ಸವದ ಮಲ್ಲ ಗೌಜಿ..! ನಿರಂತರ ಅನ್ನದಾನ, ಅಚ್ಚುಕಟ್ಟಾದ ವ್ಯವಸ್ಥೆ, ಸಾಂಸ್ಕೃತಿಕ ವೈಭವ

0

@ ಸಿಶೇ ಕಜೆಮಾರ್

ಪುತ್ತೂರು: ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಂದರವಾದ ಶ್ರೀ ವಿಷ್ಣುಮೂರ್ತಿ ದೇವರ ಶಿಲಾಮಯ ದೇವಸ್ಥಾನದಲ್ಲಿ ನಿಲೇಶ್ವರ ಉಚ್ಚಿಲತ್ತಾಯ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಠಬಂಧ, ಬ್ರಹ್ಮಕಲಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯುತ್ತಿದೆ. ಫೆ.೦೧ ರಂದು ದೇವಸ್ಥಾನದಲ್ಲಿ ಶಾಸಕರ ಹಾಗೂ ದಾನಿಗಳ ನೆರವಿನಿಂದ ಆಗಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಯಿತು. ಹಸಿರುವಾಣಿ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತುರವರ ನೇತೃತ್ವದಲ್ಲಿ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ತಿಂಗಳಾಡಿ ದೇವತಾ ಭಜನಾ ಮಂದಿರದಿಂದ ಸುಮಾರು ೧ ಕಿ.ಮೀ ದೂರದ ಎಲಿಯ ದೇವಸ್ಥಾನದವರೇಗೆ ನೂರಾರು ಭಕ್ತರು ಕಾಲ್ನಡಿಗೆಯ ಮೂಲಕ ಮೆರವಣಿಗೆ ಮಾಡಿ ಹಸಿರುವಾಣಿ ಸಮರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು.

 

ಎಲ್ಲೆಲ್ಲೂ ಕೇಸರಿಮಯ
ತಿಂಗಳಾಡಿ ಮತ್ತು ಕೂಡುರಸ್ತೆ ಕಡೆಯಿಂದ ಎಲಿಯ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೇಸರಿಮಯವಾಗಿದೆ. ಭಿನ್ನ ದಿಕ್ಕುಗಳಲ್ಲಿ ನಾಲ್ಕು ಪ್ರಧಾನ ದ್ವಾರಗಳು ಕಂಗೊಳಿಸುತ್ತಿವೆ. ದೇವಾಲಯ ಸಮೀಪ ೧ ಕಿ.ಮೀ. ದೂರಕ್ಕೆ ಇಡೀ ರಸ್ತೆಗೆ ಕೇಸರಿ ಬಂಟಿಂಗ್‌ಗಳಿಂದ ಚಪ್ಪರ ನಿರ್ಮಿಸಲಾಗಿದೆ. ದೇವಾಲಯದ ರಸ್ತೆಯುದ್ದಕ್ಕೂ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು ಎಲಿಯದಲ್ಲಿ ಜಾತ್ರೋತ್ಸವದ ಸಂಭ್ರಮ ಎದ್ದುಕಾಣುತ್ತಿದೆ. ನಗರ ಅಲಂಕಾರ ಸಮಿತಿಯ ಗೌರವ ಸಂಚಾಲಕ ಚಂದ್ರಹಾಸ ನಾಯ್ಕ ನೆಕ್ಕಿಲು, ಸಂಚಾಲಕ ಶರತ್ ನಾಯ್ಕ ನೆಕ್ಕಿಲು, ಸುಂದರ ಬಲ್ಯಾಯ ನೆಕ್ಕಿಲು ಹಾಗೂ ಸಮಿತಿಯ ಸರ್ವ ಸದಸ್ಯರ ಶ್ರಮ ಇಲ್ಲಿ ಕಾಣುತ್ತಿದೆ.

ಅಚ್ಚುಕಟ್ಟಾದ ಉಗ್ರಾಣ
ಹೊರೆಕಾಣಿಕೆ ಮೂಲಕ ಹರಿದು ಬಂದ ಅಕ್ಕಿ, ತರಕಾರಿ, ಸಕ್ಕರೆ, ಬೇಳೆಕಾಳು, ಬೆಲ್ಲ, ತೆಂಗಿನಕಾಯಿ, ಸಿಯಾಳ ಮತ್ತಿತರ ಸುವಸ್ತುಗಳನ್ನು ಉಗ್ರಾಣದಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಉಗ್ರಾಣದ ಮಧ್ಯದಲ್ಲಿ ಶ್ರೀವಿಷ್ಣುಮೂರ್ತಿ ದೇವರ ಭಾವಚಿತ್ರ ಅಲಂಕರಿಸಲಾಗಿದೆ. ಬೆಳಗುತ್ತಿರುವ ಹಣತೆಯ ಎದುರು ಯೋಗೀಶ್ ಕಡಂದೇಲು ಅವರು ತರಕಾರಿಗಳನ್ನೇ ಜೋಡಿಸಿ ಗಣಪತಿಯ ಬಿಂಬ ವಿನ್ಯಾಸಗೊಳಿಸಿದ್ದು ಭಕ್ತರನ್ನು ಆಕರ್ಷಿಸುತ್ತಿದೆ. ಉಗ್ರಾಣ ಸಮಿತಿಯ ಗೌರವ ಸಂಚಾಲಕ ಗಂಗಾಧರ ರೈ ಸೊರಕೆ, ಆನಂದ ರೈ ಮಠ, ಪದ್ಮಯ್ಯ ನಾಯ್ಕ ನೆಕ್ಕಿಲು ಹಾಗೂ ಸರ್ವ ಸದಸ್ಯರ ಶ್ರಮ ಇಲ್ಲಿ ಅನಾವರಣಗೊಂಡಿದೆ.

ನಿರಂತರ ಶುಚಿರುಚಿಯಾದ ಅನ್ನದಾನ
ಕ್ಷೇತ್ರದಲ್ಲಿ ಫೆ.೦೧ ರಿಂದ ಮಧ್ಯಾಹ್ನದಿಂದಲೇ ನಿರಂತರ ಅನ್ನದಾನ ಆರಂಭಗೊಂಡಿದೆ. ಪ್ರತೀ ಹೊತ್ತಿಗೂ ವಿಶೇಷ ಸಿಹಿ ಭಕ್ಷ್ಯ ನೀಡಲಾಗುತ್ತಿದೆ. ಊಟ ಮಾಡಲು ವಿಶಾಲವಾದ ಅನ್ನಛತ್ರದ ವ್ಯವಸ್ಥೆ ಇದ್ದು, ಪ್ರತಿ ದಿನ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ. ನಾನಾ ಸಂಘ ಸಂಸ್ಥೆಗಳು ಮತ್ತು ಊರವರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು, ಸ್ವಚ್ಛತೆ ಮತ್ತು ಅಚ್ಚುಕಟ್ಟುತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಟ್ಟಲು,ಗ್ಲಾಸ್‌ಗಳನ್ನು ಬಿಸಿ ನೀರಿನಲ್ಲಿ ತೊಳೆದೇ ಬಳಸುತ್ತಿದ್ದು ಶುಚಿ ಮತ್ತು ರುಚಿಗೆ ಹೆಚ್ಚಿನ ಗಮನ ನೀಡಲಾಗಿದೆ. ಆಹಾರ ಸಮಿತಿಯ ಗೌರವ ಸಲಹೆಗಾರ ಜಯರಾಮ ರೈ ಮಿತ್ರಂಪಾಡಿ, ಸಂಚಾಲಕ ಜಯರಾಮ ರೈ ಬಾಳಯ, ವೆಂಕಪ್ಪ ನಾಯ್ಕ ಎಲಿಯ, ಕೇಶವ ಭಟ್ ಮಾಡಾವುಕಟ್ಟೆ ಹಾಗೂ ಸಮಿತಿಯ ಸರ್ವ ಸದಸ್ಯರ ಮುತುವರ್ಜಿ ಇಲ್ಲಿ ಕಾಣಬಹುದಾಗಿದೆ.

ಸ್ವಯಂಸೇವಕರ ತಂಡ
ಚಹಾ, ತಿಂಡಿಯಿಂದ ಹಿಡಿದು ಅನ್ನಸಂತರ್ಪಣೆ , ಪಾನೀಯ ವ್ಯವಸ್ಥೆ ಹಾಗೂ ವೈಧಿಕ ಕಾರ್ಯಕ್ರಮಗಳಿಗೆ ಬೇಕಾದ ಸುವಸ್ತುಗಳನ್ನು ಸಾಗಿಸುವುದು, ಸ್ವಚ್ಛತೆ, ಶುಚಿತ್ವ ಇತ್ಯಾದಿ ಎಲ್ಲಾ ಕೆಲಸಗಳಿಗೂ ಸ್ವಯಂಸೇವಕರ ತಂಡವೇ ಇಲ್ಲಿದೆ. ಮುಖ್ಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆದಂಬಾಡಿ ಒಕ್ಕೂಟದ ಸದಸ್ಯರುಗಳು ಸ್ವಯಂಸೇವಕರಾಗಿ ಸೇವೆ ಮಾಡುತ್ತಿದ್ದಾರೆ. ಇದಲ್ಲದೆ ಗ್ರಾಮದ ಭಕ್ತಾಧಿಗಳು ಕೂಡ ಸ್ವಯಂಸೇವಕರಾಗಿ ರಾತ್ರಿ ಹಗಲು ದುಡಿಯುತ್ತಿದ್ದಾರೆ. ಸ್ವಯಂ ಸೇವಕ ಸಮಿತಿಯ ಸಂಚಾಲಕ ರಾಮಚಂದ್ರ ಸೊರಕೆ, ಪದ್ಮನಾಭ ಪೂಜಾರಿ ಮರಿಯ ಹಾಗೂ ಸರ್ವ ಸದಸ್ಯರುಗಳು ಸೇವೆ ನೀಡುತ್ತಿದ್ದಾರೆ. ಮಹಿಳಾ ಸಮಿತಿಯ ಗೌರವ ಸಂಚಾಲಕಿ ಉಮಾವತಿ ನಾರ್ಣಪ್ಪ ಪೂಜಾರಿ ಎಲಿಯ, ಲಲಿತಾ ಶಿವಪ್ಪ ಗೌಡ ಮಜಲುಗದ್ದೆ, ಸುಲೋಚನ ಬಾಲಚಂದ್ರ ರೈ ತಿಂಗಳಾಡಿ, ಜಯಲಕ್ಷ್ಮೀ ವಸಂತ ನಾಯ್ಕ ಎಲಿಯ ಹಾಗೂ ಸಮಿತಿಯ ಎಲ್ಲಾ ಸದಸ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆ
ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಸ್ಥಾನದಿಂದ ಅಣತಿ ದೂರದಲ್ಲೇ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್‌ಗೆ ಜಾಗ ಮಾಡಲಾಗಿದೆ. ಇದಲ್ಲದೆ ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಪಾರ್ಕಿಂಗ್ ನಿರ್ವಹಣಾ ಸಮಿತಿಯ ಗೌರವ ಸಂಚಾಲಕ ಸದಾನಂದ ಸುವರ್ಣ ಸೊರಕೆ, ಜಗನ್ನಾಥ ಗೌಡ ಬಾಳಯ, ಹರೀಶ್ ಗೌಡ ಸೊರಕೆ, ಗುರುಪ್ರಸಾದ್ ನಾಯ್ಕ ಸೊರಕೆ ಮತ್ತು ಸಮಿತಿ ಸದಸ್ಯರುಗಳು ವ್ಯವಸ್ಥೆ ಮಾಡುತ್ತಿದ್ದಾರೆ.

ಅಚ್ಚುಕಟ್ಟಾದ ವ್ಯವಸ್ಥೆಗಳು
ಎಲಿಯ ಬ್ರಹ್ಮಕಲಶೋತ್ಸವದಲ್ಲಿ ಅನ್ನಸಂತರ್ಪಣೆಯಿಂದ ಹಿಡಿದು ವೈದ್ಯಕೀಯ ವ್ಯವಸ್ಥೆಯ ತನಕ ಎಲ್ಲವೂ ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಗಳನ್ನು ವೀಕ್ಷಿಸಲು ವಿಶಾಲವಾದ ಸಭಾ ವೇದಿಕೆ, ಸಭಾಂಗಣ ನಿರ್ಮಾಣ ಮಾಡಲಾಗಿದೆ. ಎಲಿಯದಂತಹ ಪುಟ್ಟ ಊರಿನಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಶುದ್ಧವಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಎಲ್ಲವನ್ನು ಮಾಡಲಾಗಿದೆ. ಎಲಿಯ ಬ್ರಹ್ಮಕಲಶೋತ್ಸವವನ್ನು ಇತಿಹಾಸದಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡುವಂತೆ ಮಾಡುವಲ್ಲಿ ಇಲ್ಲಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ ಹಾಗೂ ಸರ್ವ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಜಾರಾವ್ ಮುಡಂಬಡಿತ್ತಾಯ ಹಾಗೂ ಸರ್ವ ಸದಸ್ಯರುಗಳು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ನಾಗೇಶ್ ರಾವ್ ಮತ್ತು ಸರ್ವ ಸದಸ್ಯರುಗಳು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಹಗಲಿರುಳು ದುಡಿಯುತ್ತಿರುವ ಕರಸೇವಕರು, ಭಕ್ತಾಧಿಗಳು, ಗ್ರಾಮಸ್ಥರು ಪಣತೊಟ್ಟಿದ್ದಾರೆ. ಎಲಿಯ ಪನ್ಪಿನ ಎಲ್ಯ ಊರುಡು ಮಲ್ಲ ಗೌಜಿದ ಉಚ್ಚಯ ನಡಪುನ ಮೂಲಕ ಈ ಊರುದ ಪುದರ್ ನಾಡೊರ್ಮೆ ಪಸರುನವು ಶ್ರೀ ವಿಷ್ಣುಮೂರ್ತಿ ದೇವರ್‌ನ ಕಾರಣಿಕೊನೆ ಸರಿ.

LEAVE A REPLY

Please enter your comment!
Please enter your name here