ಕಡಬ: ಅರಣ್ಯ ಪ್ರದೇಶ ವ್ಯಾಪ್ತಿಯ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದೀಗ ಕಡಬದ ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಕುಂತೂರು ಗ್ರಾಮದಲ್ಲಿ ಚಿರತೆಯೊಂದು ಕೆಲ ದಿಗಳ ಹಿಂದೆ ಪ್ರತ್ಯಕ್ಷಗೊಂಡು ಜನರನ್ನು ಆತಂಕಗೊಳಿಸಿದೆ.
ಕಳೆದ ಗುರುವಾರ ರಬ್ಬರ್ ಟಾಪಿಂಗ್ ಕೆಲಸಕ್ಕೆ ತೆರಳಿದ್ದ ಬಾವಚ್ಚನ್ ಎಂಬವರಿಗೆ ಪದವು ಸಮೀಪದ ಬೀರಂತಡ್ಕ ಎಂಬಲ್ಲಿ ಸುಮಾರು ನಸುಕಿನ ಜಾವ ೩ ರ ಸುಮಾರಿಗೆ ಚಿರತೆ ರಸ್ತೆ ದಾಟುತ್ತಿರುವುದನ್ನು ಗಮನಿಸಿದ್ದಾರೆ. ಕೆಳೆದ ಕೆಲ ವಾರಗಳ ಹಿಂದೆ ಈ ಪರಿಸರದಲ್ಲಿ ಚಿರತೆ ಓಡಾಟವಿದೆ ಎಂಬ ಸುದ್ದಿ ಗ್ರಾಮದಲ್ಲಿ ಹಬ್ಬಿತ್ತು. ಇದೀಗ ಕಾರ್ಮಿಕರೊಬ್ಬರಿಗೆ ಚಿರತೆ ಕಾಣ ಸಿಕ್ಕಿರುವುದು ಈ ಗುಮಾನಿಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.
ಈ ರಸ್ತೆಯಲ್ಲಿ ಪದವು ಭಾಗಕ್ಕೆ ಬರುವ ಶಾಲಾ ಮಕ್ಕಳು ನಿತ್ಯ ಸಂಚರಿಸುತ್ತಿದ್ದು ಚಿರತೆ ಓಡಾಟದ ಸುದ್ದಿ ಕೇಳಿ ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಗೆ ಈಗಾಗಲೇ ಸ್ಥಳೀಯರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದ್ದು ಅಧಿಕಾರಿಗಳು ಸ್ಥಳ ಭೇಟಿ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಸದ್ಯ ತಿಳಿದು ಬಂದಿಲ್ಲ.