- ಕುತೂಹಲಕ್ಕೆ ಕಾರಣವಾದ ಅಡಿಕೆ ಕಳ್ಳತನ ಪ್ರಕರಣ
ಪುತ್ತೂರು: ಅಂಗಡಿಯಿಂದ ಕದ್ದ ಅಡಿಕೆಯನ್ನು ಕಳ್ಳರು ಮರುದಿನ ಅದೇ ಅಂಗಡಿಯ ಮುಂಭಾಗದಲ್ಲಿ ಇಟ್ಟು ಹೋಗಿರುವ ವಿಚಿತ್ರ ಘಟನೆ ತಿಂಗಳಾಡಿಯಲ್ಲಿ ನಡೆದಿದೆ.
ತಿಂಗಳಾಡಿ ಶಾಲಾ ಬಳಿ ಅಡಿಕೆ ವ್ಯಾಪಾರ ನಡೆಸುತ್ತಿರುವ ಜಗನ್ನಾಥ ರೈ ಎಂಬವರ ಅಂಗಡಿಯ ಹಿಂಬಾಗಿಲ ಚಿಲಕವನ್ನು ಮುರಿದು ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಅಂದಾಜು 60 ಸಾವಿರ ರೂ ಮೌಲ್ಯದ 4 ಗೋಣಿ ಚೀಲ ಅಡಿಕೆಯನ್ನು ಮಾ.1ರಂದು ರಾತ್ರಿ ಕಳ್ಳರು ಕದ್ದೊಯ್ದಿದ್ದರು. ಈ ಬಗ್ಗೆ ಅಂಗಡಿ ಮಾಲಕರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.
ಈತನ್ಮಧ್ಯೆ ಕಳ್ಳತನವಾಗಿದ್ದ 4 ಗೋಣಿ ಅಡಿಕೆಯನ್ನು ಮಾ.2ರಂದು ರಾತ್ರಿ ಅಂಗಡಿ ಮುಂದೆ ಕಳ್ಳರು ಇಟ್ಟು ಹೋಗಿದ್ದು ಮಾ.3ರಂದು ಬೆಳಿಗ್ಗೆ ಮಾಲಕರು ಅಂಗಡಿಗೆ ಬರುವ ವೇಳೆ ಅಂಗಡಿಯ ಬಾಗಿಲ ಬಳಿ ಕದ್ದ ಅಡಿಕೆಯನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಕದ್ದ ಅಡಿಕೆಯನ್ನು ಕಳ್ಳರು ವಾಪಾಸ್ ತರಲು ಕಾರಣವೇನು ಎನ್ನುವ ಪ್ರಶ್ನೆ ಸ್ಥಳೀಯವಾಗಿ ಕೇಳಿ ಬಂದಿದ್ದು ಕದ್ದ ಬಳಿಕ ಕಳ್ಳರಿಗೆ ಪಾಶ್ಚತ್ತಾಪವಾಗಿ ವಾಪಾಸ್ ತಂದರೇ..? ಅಥವಾ ಪೊಲೀಸ್ ದೂರು ನೀಡಿರುವುದರಿಂದ ಹೆದರಿ ವಾಪಸ್ ತಂದಿಟ್ಟು ಹೋದರೇ ಎನ್ನುವ ಸಂಶಯ ಉಂಟಾಗಿದೆ. ಏನೇ ಆಗಲಿ ಕಳ್ಳತನವಾದ ಅಡಿಕೆ ವಾಪಸ್ ತಂದಿಟ್ಟು ಹೋಗಿರುವ ಕಳ್ಳರ ಕಥೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.