![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಇಡೀ ಭಾರತದಲ್ಲಿ ಯಾವ ರೈಲಿನಲ್ಲೂ ಕೂಡ ಪ್ರಯಾಣಿಕರಿಗೆ ಸೀಟು ಸಿಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ, ಅವರು ಹೆಚ್ಚುವರಿ ಬೋಗಿಗಳನ್ನು ಹಾಗೂ ಡೀಸೆಲ್ ಇಂಜಿನ್ ಗಳನ್ನು ಬಳಸಿ ಯಾತಕ್ಕಾಗಿ ಇಡೀ ವರ್ಷ ಹಾಗೂ ದಿನಂಪ್ರತಿ ರೈಲುಗಳನ್ನು ಹೆಚ್ಚುವರಿ ಯಾಗಿ ಓಡಿಸಬಾರದು ಎಂದು ಪ್ರಯಾಣಿಕರು ಬಹುತೇಕ ಬಾರಿ ಪ್ರಶ್ನಿಸಿದ್ದಾರೆ.
ನಿನ್ನೆ 23-10-2022 ಮುರುಡೇಶ್ವರದಿಂದ ಬೆಂಗಳೂರಿಗೆ ಹೊರಟ ದೀಪಾವಳಿ ಸ್ಪೆಷಲ್ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ: ೦6564 ) ದಿನಾಂಕ 23ರಂದು ಆದಿತ್ಯವಾರ ಸಾಯಂಕಾಲ 6.18ಕ್ಕೆ ಪುತ್ತೂರು ತಲುಪಿತ್ತು.
ಬಹುಶಃ ಈ ರೈಲಿನ ಲೋಕೋಪೈಲೆಟ್ ಅವರಿಗೆ ರೇಲನ್ನು ಚಲಾಯಿಸಿ ಯಾವುದೇ ಅನುಭವ ಇರಲಿಲ್ಲ ಎಂದು ಪ್ರಯಾಣಿಕರು ಅವಲತ್ತು ಕೊಂಡರು. ಯಾಕೆಂದರೆ ನಿನ್ನೆ ಅವರು ರೈಲನ್ನು ಪುತ್ತೂರು ರೈಲು ನಿಲ್ದಾಣದಲ್ಲಿ ನಿಲ್ಲಿಸುವಾಗ ಕಟ್ಟಕಡೆಯ ಎರಡು ಬೋಗಿಗಳ ಪ್ರಯಾಣಿಕರು (ಜನರಲ್ ಬೋಗಿ ಹಾಗೂ ಕಡೆಗೆ ಇರುವ ಲೇಡೀಸ್ ಬೋಗಿ) ಹಳಿಗಳ ಮೇಲೆ, ಜಲ್ಲಿ ಕಲ್ಲುಗಳ ಕಷ್ಟದಿಂದ ನಡೆದು ಬಂದು, ಅಲ್ಲಿಂದ ಎತ್ತರದಲ್ಲಿರುವ ರೈಲನ್ನು ಆ ಎಕ್ಸ್ಪ್ರೆಸ್ ರೇಲಿಗಿರುವ ಕೇವಲ ಒಂದು ನಿಮಿಷ ನಿಲುಗಡೆ ಸಮಯದೊಳಗೆ, ಬಹಳ ಕಷ್ಟದಿಂದ ಹತ್ತಬೇಕಾಯಿತು. ಅವೆರಡೂ ಬೋಗಿಗಳು ಫ್ಲ್ಯಾಟ್ ಫಾರ್ಮ್ ನಿಂದ ದೂರವಿದ್ದವು /ಹೊರಗಿದ್ದವು. ಸೀನಿಯರ್ ಸಿಟಿಜನ್ ಪ್ರಯಾಣಿಕರನ್ನು ಇತರ ಪ್ರಯಾಣಿಕರು ಅಷ್ಟೂ ಕೆಳಗಿನಿಂದ ಜಲ್ಲಿ ಕಲ್ಲುಗಳ ಮೇಲೆ ನಿಂತು, ಎತ್ತಿ ರೇಲಿನೊಳಗೆ ಬಾಗಿಲಿನ ಹತ್ತಿರ ಕೂರಿಸುವುದು ಕಂಡು ಬಂತು. ಲಗೇಜ್ ಮೇಲೆ ರೇಲಿನೊಳಗೆ ಬಿಸಾಡಿ ಆನಂತರ ರೇಲಿನೊಳಗೆ ಹೋಗಲು ಕಷ್ಟ ಪಡುವುದು ಕಂಡು ಬಂತು. ಇಷ್ಟರಲ್ಲಿ ರೇಲು ಮೆಲ್ಲಗೆ ಚಲಿಸಲು ಆರಂಬಿಸಿತು. ಕಟ್ಟಕಡೇಯ ಪ್ರಯಾಣಿಕ, ಸ್ವಲ್ಪ ದೂರ ಓಡಿ ಹೋಗಿ ರೇಲು ಹತ್ತಿದರು.
ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ 26 ಬೋಗಿಗಳನ್ನು ನಿಲ್ಲಿಸಬಹುದಾದ ರೈಲ್ವೆ ಪ್ಲಾಟ್ಫಾರ್ಮ್ ಇದೆ. ರೈಲು ಸಂಖ್ಯೆ ೦6564 ದೀಪಾವಳಿ ಸ್ಪೆಷಲ್;; ಮುರುಡೇಶ್ವರ ಟು ಬೆಂಗಳೂರು ರೇಲಿಗಿರುವುದು ಕೇವಲ 18 ಬೋಗಿಗಳು ಮಾತ್ರ ಆದರೂ ಕೂಡ ನಿಲ್ದಾಣದಲ್ಲಿ ಎರಡು ಬೋಗಿಗಳನ್ನು ಹೊರಗೆ ನಿಲ್ಲಿಸಿದ್ದು ಯಾಕೆ ? ರೈಲು ಪ್ರಯಾಣಿಕರ ಜೀವದೊಡನೆ ಚೆಲ್ಲಾಟವಾಡುವುದು ಯಾಕೆ ನಿನ್ನೆ ಅವರು ರೈಲು ಹತ್ತುವಾಗ ಜೀವಕ್ಕೆ ಏನಾದರು ಅಪಾಯವಾಗಿದ್ದರೆ ಅದಕ್ಕೆ ಯಾರು ಹೊಣೆ. ಈ ರೀತಿ ಮಾಡುವುದು ತಪ್ಪಲ್ಲವೇ ? ದೀಪಾವಳಿ ಹಬ್ಬದ ಸಮಯದಲ್ಲಿ ಜೀವ ಹೋಗಬೇಕು ಎಂದು ಈ ರೀತಿ ಮಾಡುವುದೇ ?
ಇದೇ ರೀತಿ ಈ ರೇಲಿಗೆ ಇನ್ನೊಂದು ಕೊರತೆಯೂ ಇದೆ. ಈ ರೈಲಿನ ಜನರೇಟರ್ ಡಬ್ಬಿಯ ಅರ್ಧ ಮೇಲ್ಚಾವಣಿ ಕಿತ್ತು ಹೋಗಿದೆ. ಉಳಿದ ಅರ್ಧ ಚಾವಣಿಯಲ್ಲಿ ಇದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದು, ಪುನಃ ವಾಪಸ್ ಹೋಗ್ತಾ ಇದೆ.
ಈ ರೈಲಿಗೆ ಮೇಂಟಿನೆನ್ಸ್ ನೈರುತ್ಯ ರೈಲ್ವೆ ಮಾಡ್ತಾ ಇದೆ. ಬೆಂಗಳೂರಿನಿಂದ ಈ ರೈಲನ್ನು ಬಿಡುವ ಮೊದಲು, ಆ ರೈಲಿನ ಮೇಂಟೆನೆನ್ಸ್ ಮಾಡಿಲ್ಲವೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಷ್ಟೇ ಅಲ್ಲ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ತಲುಪುವಾಗ ಮಧ್ಯದಲ್ಲಿರುವ ನಾಲ್ಕಾರು ಡಜನ್ ರೈಲು ನಿಲ್ದಾಣಗಳಲ್ಲಿರುವ ಎಲ್ಲಾ ರೇಲು ನೌಕರರಿಗೆ ಜಾಣ ಕುರುಡೇ ?
ಆದರೂ ಕೂಡ ಬೆಂಗಳೂರಿನಲ್ಲಿರುವ ಇರುವ ಯಾವ ರೈಲು ಅಧಿಕಾರಿಯೂ ಜನರೇಟರ್ ಬೋಗಿಗೆ ಮೇಲ್ಚಾವಣಿ ಇಲ್ಲದಿರುವುದು ನೋಡಿಯೇ ಇಲ್ಲವೇ ? ಹೀಗೆ ಮಳೆಗಾಲದ ಸಮಯದಲ್ಲಿ ಮೇಲ್ಚಾವಣಿ ಇಲ್ಲದೆ ಜನರೇಟರ್ ಬೋಗಿಯನ್ನು ಓಡಿಸಿದರೆ ಅದಕ್ಕಾಗುವ ಹಾನಿಯೂ ಅಪಾರ. ಈ ಹಾನಿಯನ್ನು ಭಾರತೀಯ ಪ್ರಜೆಗಳು ತಮ್ಮ ತೆರಿಗೆಯ ಹಣದಿಂದ ಸರಿ ಮಾಡಿಸಬೇಕಾಗುತ್ತದೆ. ಇಷ್ಟೊಂದು ರೈಲ್ವೆ ಅಧಿಕಾರಿಗಳು ಹಾಗೂ ನೌಕರರು ಮುರುಡೇಶ್ವರದಿಂದ ಬೆಂಗಳೂರು ಮಧ್ಯದ ರೈಲು ನಿಲ್ದಾಣದಲ್ಲಿರುವಾಗ ಯಾರು ಈ ಬಗ್ಗೆ ಕಾಳಜಿ ವಹಿಸದ್ದು ನೋಡಿ ಅಸಹ್ಯ ಹುಟ್ಟಿಸುತ್ತದೆ.
ಇದನ್ನೆಲ್ಲಾ ನೋಡುವಾಗ ಹಾಲಿಡೇ ಸ್ಪೆಷಲ್ ಎಕ್ಸ್ಪ್ರೆಸ್ ಅಂದರೆ, ತೀರಾ ಹಳೆಯದಾದ, ಪ್ರಯಾಣಿಕರು ಉಪಯೋಗಿಸಲು ಆಗದೆ ಇರುವ, ಎಲ್ಲೋ ಒಂದು ಕಡೆ ಮೂಲೆಗೆ ಹಳಿಯಲ್ಲಿ ಬಿದ್ದಿರುವ ರೈಲಿನ ಬೋಗಿಗಳನ್ನು ಹಾಗೂ ಇಂಜಿನನ್ನು, ತಮ್ಮ ಸ್ವಾರ್ಥಕ್ಕೆ ಹೆಚ್ಚಿನ ಹಣ ಗಳಿಸಲು ಉಪಯೋಗಿಸುವ ಇಂತಹ ಅಧಿಕಾರಿಗಳಿಗೆ ಏನನ್ನಬೇಕು ?
ಮೇಲ್ಚಾವಣಿ ಇಲ್ಲದೆ ಓಡಿಸಿದ ಜನರೇಟರ್ ಒಂದು ವೇಳೆ ಹಾಳಾದರೆ, ಆಗ ಈ ದೀಪಾವಳಿ ಹಾಲಿಡೇ ಸ್ಪೆಷಲ್ ರೈಲು ಬೋಗಿಗಳಲ್ಲಿರುವ ಏರ್ ಕಂಡೀಶನ್ ಬೋಗಿಗಳಿಗೆ ಹವಾನಿಯಂತ್ರಣ ಮಾಡಲು ಸಾಧ್ಯವೇ ಇಲ್ಲ. ಆಗ ಅದಕ್ಕೆ ಯಾರು ಹೊಣೆ ? ಆಗ ಹವಾನಿಯಂತ್ರಣ ಬೋಗಿಗಳಲ್ಲಿ ಪ್ರಯಾಣಿಸಲು ಹೆಚ್ಚಿನ ಹಣ ಕೊಟ್ಟ ಪ್ರಯಾಣಿಕರಿಗೆ ಅವರ ಹೆಚ್ಚುವರಿ ಹಣವನ್ನು ರೇಲ್ವೆ ವಾಪಸ್ಸು ಕೊಡುತ್ತದೆಯೇ ? ಇದಕ್ಕೆ ರೈಲ್ವೆ ಉತ್ತರಿಸಬೇಕು.
ಈ ಬಗ್ಗೆ ಪುತ್ತೂರಿನ ಸಾಂಸದ ಹಾಗೂ ಶಾಸಕರು ಏನನ್ನುತ್ತಾರೆ ?
ಅಮ್ರುತ್ ಪ್ರಭು
ಮಂಗಳೂರು