ಪುತ್ತೂರು: 2021-22ನೇ ಸಾಲಿಗೆ ಸುಮಾರು 19ಸಾವಿರ ಕೊಳವೆ ಬಾವಿ ಕೊಟ್ಟಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಕೊಳವೆ ಬಾವಿ ಗುರಿ ನೀಡಬಹುದು. ಅದನ್ನು ಬೋವಿ, ತಾಂಡ, ಆದಿಜಾಂಬವ, ಅಂಬೇಡ್ಕರ್ ನಿಗಮ ಮತ್ತು ಹಿಂದುಗಳಿದ ವರ್ಗಗಳ ದೇವರಾಜ್ ನಿಗಮದ ಮೂಲಕವೂ ಅನುಷ್ಠಾನ ಮಾಡುತ್ತೇವೆ. ಪುತ್ತೂರಿಗೆ ಸೇರಿದಂತೆ ದಕ್ಷಿಣ ಕನ್ನಡಕ್ಕೆ ಹೆಚ್ಚು ಕೊಳವೆ ಬಾವಿ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಗಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭರವಸೆ ನೀಡಿದ್ದಾರೆ.
ಮಾ.23ರಂದು ವಿಧಾನಸಭೆ ಅಧಿವೇಶನದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಕೇಳಿದ ಪ್ರಶ್ನೆಗೆ ಅವರು ಸಚಿವರು ಉತ್ತರಿಸಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರು ಆರಂಭದಲ್ಲಿ ಮಾತನಾಡಿ ಪುತ್ತೂರು ವಿಧಾನ ಸಭಾ ಕ್ಷೇತ್ರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಾಗಿದ್ದು, ಅವರಿಗೆ ಬರುವ ಗಂಗಾಕಲ್ಯಾಣ ಯೋಜನೆಯ ಕೊಳವೆ ಬಾವಿ ಸೌಲಭ್ಯದ ಗುರಿ ಕಡಿಮೆ ಆಗಿದೆ. ಕಳೆದ 19, 20,21ನೇ ಸಾಲಿನಲ್ಲಿ 25 ರಿಂದ 30 ಗುರಿ ಕೊಟ್ಟಿದ್ದರು. ಆದರೆ ಬಳಿಕ ಅದನ್ನು ಕಡಿಮೆ ಮಾಡಲಾಗಿದೆ. ಇದನ್ನು ಹೆಚ್ಚಿಗೆ ಮಾಡಬೇಕು. ಪರಶಿಷ್ಟ ಜಾತಿ ಮತ್ತು ಪಂಗಡದ ಬಹಳಷ್ಟು ಬಂದುಗಳು ಅಲ್ಲಿ ಅರ್ಜಿಯನ್ನು ಕೊಟ್ಟು ಕೃಷಿ ಆಧಾರಿತ ಭೂಮಿ ಮಾಡಲು ಗಂಗಾ ಕಲ್ಯಾಣಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಮೇಜರ್ ಇರಿಗೇಷನ್ ಇಲ್ಲ. ಸಣ್ಣ ನೀರಾವರಿಯಲ್ಲೂ ಬೋರ್ವೆಲ್ ಕೊರೆಯುವುದನ್ನು ನಿಲ್ಲಿಸಿದ್ದಾರೆ. ಎಲ್ಲಿಯಾದರೂ ಕೊಳವೆ ಬಾವಿ ಕೊರೆಸಲು ಅನುಮತಿ ಇದ್ದರೆ ಅದು ಅಂಬೇಡ್ಕರ್ ಯೋಜನೆಯಲ್ಲಿ. ಹಾಗಾಗಿ ಈ ಆರ್ಥಿಕ ವರ್ಷದಲ್ಲಿ ಗುರಿಯನ್ನು ಜಾಸ್ತಿ ಮಾಡಲು ಅವರು ಸದನಲ್ಲಿ ಪ್ರಸ್ತಾಪಿಸಿದರು. ಉತ್ತರಿಸಿದ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಭೌಗೋಳಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಹೆಚ್ಚು ಅನುದಾನ ಕೊಡಬೇಕೆಂದು ಬೇಡಿಕೆಗೆ ಸಂಬಂಧಿಸಿ ಈ ಭಾರಿ ಹೆಚ್ಚು ಕೊಳವೆ ಬಾರೊ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.