ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ದೇವಳದ ಎದುರು ಗದ್ದೆಯಲ್ಲಿ ಸಂತೆ ಅಂಗಡಿಗಳಿಗಾಗಿ ಜಾಗ ಗುರುತು ಮಾಡುವ ಕಾರ್ಯ ಮಾ.28ರಂದು ನಡೆಯಿತು.
ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಸಿದ್ಧಪಡಿಸಿದ ನಕಾಶೆಯಂತೆ ದೇವಳದ ನಿತ್ಯ ಚಾಕ್ರಿಯವರು ದೇವಳದ ಎದುರು ಗದ್ದೆಯಲ್ಲಿ ಸಂತೆ ಅಂಗಡಿಗಳಿಗೆ ಜಾಗ ಗುರುತು ಮಾಡುವ ಕಾರ್ಯ ಮಾಡಿದ್ದಾರೆ.ಐಸ್ಕ್ರೀಮ್, ಬ್ಯಾಗ್, ತಂಪು ಪಾನೀಯ, ಆಟಿಕೆಗಳು ಸೇರಿದಂತೆ ವಿವಿಧ ಬಗೆಯ ಅಂಗಡಿಗಳಿಗೆ ಪ್ರತ್ಯೇಕ ಸ್ಥಳಾವಕಾಶ ಗುರುತಿಸಿ ಅಲ್ಲಿ ಸಾರ್ವಜನಿಕರಿಗೆ ಓಡಾಡಲು ಅಗಲವಾದ ಪ್ಯಾಸೇಜ್ ಸೇರಿದಂತೆ ಅಂಗಡಿಗಳ ನಡುವೆ ಮತ್ತೊಂದು ಅಂಗಡಿಗೆ ಹೋಗಲು ಸ್ಥಳಾವಕಾಶ ನೀಡಲಾಗಿದೆ.ಒಟ್ಟು ಜಾತ್ರಾ ಗದ್ದೆಯಲ್ಲಿ ಭಕ್ತರಿಗೆ ಹೋಗಲು ತೊಂದರೆ ಆಗದಂತೆ ಅಂಗಡಿಗಳಿಗೆ ಗುರುತು ಕಾರ್ಯ ಮಾಡಲಾಗುತ್ತಿದೆ.
ಇಂದು ಏಲಂ: ಜಾತ್ರಾ ಗದ್ದೆಯಲ್ಲಿ ಸಂತೆ ವ್ಯಾಪಾರಕ್ಕೆ ಮಾ.29ರಂದು ಗದ್ದೆ ಏಲಂ ನಡೆಯಲಿದೆ.ಹಿಂದೂ ಬಾಂಧವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯವರು ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.