ಪುತ್ತೂರು: ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿಯವರಿಂದ ಮಾ. 28 ರಂದು ಸವಣೂರು ಗ್ರಾಮದ ಪರಣೆ ತುಳುಸಿಪುರಂನಲ್ಲಿ 26ನೇ ವರುಷದ ಶ್ರೀ ದೇವಿಯ ಸೇವಾ ಬಯಲಾಟವಾಗಿ” ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ ಕಥಾ ಭಾಗ ನಡೆಯಿತು. ರಾತ್ರಿ ಚೌಕಿಯಲ್ಲಿ ಪೂಜಾ ಕಾರ್ಯಕ್ರಮ ನಡೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರ-ಪರವೂರ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಯಕ್ಷಗಾನ ಬಯಲಾಟದ ಸೇವಾಕರ್ತರಾದ ಬಿ.ಪದ್ಮಯ್ಯ ಗೌಡ ಪರಣೆ ತುಳುಸಿಪುರಂನವರು ಕಲಾಭಿಮಾನಿಗಳನ್ನು ಸ್ವಾಗತಿಸಿ, ಗೌರವಿಸಿದರು.
ಅಚ್ಚುಕಟ್ಟಾದ ವ್ಯವಸ್ಥೆ
ಕಳೆದ 26 ವರ್ಷಗಳಿಂದ ಶ್ರೀ ದೇವಿಯ ಸೇವಾ ಬಯಲಾಟವನ್ನು ಪರಣೆ ತುಳುಸಿಪುರಂನಲ್ಲಿ ನಡೆಸಿಕೊಂಡು ಬರುತ್ತಿರುವ ಬಿ. ಪದ್ಮಯ್ಯ ಗೌಡರವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಹತ್ತೂರಲ್ಲಿ ಹೆಸರನ್ನು ಪಡೆದಿದ್ದಾರೆ. ಅತ್ಯಂತ ವಿಶಾಲವಾದ ಸುಂದರವಾದ ಚೌಕಿಯನ್ನು ನಿರ್ಮಿಸಿದ್ದಾರೆ. ವಿಸ್ತಾರವಾದ ಜಾಗದಲ್ಲಿ ಅನ್ನಸಂತರ್ಪಣೆ ನಡೆಯಿತು. ಸವಣೂರು-ಬೆಳ್ಳಾರೆ ರಾಜ್ಯ ಹೆದ್ದಾರಿ ಪಕ್ಕದ ಪರಣೆ ತುಳುಸಿಪುರಂನಲ್ಲಿ ಪ್ರತಿ ವರ್ಷ ನಡೆಯುವ ಯಕ್ಷಗಾನ ಬಯಲಾಟ ಕಲಾಭಿಮಾನಿಗಳ ಮನಸೂರೆಗೊಳ್ಳುತ್ತಿದೆ.