ಪುತ್ತೂರು: ಕ್ರೈಸ್ತನ ಪುನರುತ್ಥಾನಕ್ಕಾಗಿ ಎದುರು ನೋಡುವ ಶುಭರಾತ್ರಿಯ ದಿನದಂದು ಬೆಳಕುಗಳಲ್ಲಿ ಬೆಳಕಾದ ಪ್ರಭು ಕ್ರಿಸ್ತರ ವಿಜಯದ ಸಂಕೇತವಾದ ‘ಪಾಸ್ಖ ಬತಿ’ಯ ಬೆಳಗುವಿಕೆ, ಪ್ರಭು ಕ್ರಿಸ್ತರನ್ನು ಸ್ತುತಿಸಿ ನಮಿಸಿ ಹಾಡುವ ಪಾಸ್ಖ ಸಂದೇಶ, ಜೀವವಾಕ್ಯದ ಧ್ಯಾನ, ದೀಕ್ಷಾ ಸ್ನಾನದ ಪ್ರಮಾಣ ವಚನದ ನವೀಕರಣ, ಪರಮಪ್ರಸಾದ ಸಂಸ್ಕಾರದ ಶ್ರದ್ಧಾಭಕ್ತಿಯ ಜಾಗರಣೆ ಕಾರ್ಯಕ್ರಮವು ಎ.೧೬ ರಂದು ರಾತ್ರಿ ದೇಶಾದ್ಯಂತ ನಡೆದಿದ್ದು ಪುತ್ತೂರು ತಾಲೂಕಿನಾದ್ಯಾಂತವೂ ಕ್ರೈಸ್ತ ದೇವಾಲಯಗಳಲ್ಲಿ ಶ್ರದ್ಧೆಯಿಂದ ಆಚರಿಸಲಾಯಿತು.
ಶಿಲುಬೆ ಪ್ರಭುವಿನ ಸಾವನ್ನು ಸಾರಿದಂತೆಯೇ ಅವರ ಪುನರುತ್ಥಾನವನ್ನೂ ಸಾರಿತು. ಶಿಲುಬೆಯ ಮೇಲೆ ‘ನಜರೇತಿನ ಯೇಸು?, ಯೆಹೂದ್ಯರ ಅರಸ’ ಎಂಬ ನಾಮಫಲಕ ಹಾಕಿ ಯೇಸುವಿನ ನಿಜ ಸ್ವರೂಪ ತಿಳಿಸಿದ್ದು ಒಂದಾದರೆ, ಯೇಸುವಿನ ಪಾರ್ಥಿವ ಶರೀರವನ್ನು ಕದ್ದುಕೊಂಡು ಹೋಗಲು ಬಿಡದ ಪಿಲಾತ ಅರಸನು ಈ ಮೂಲಕ ಪುನರುತ್ಥಾನಕ್ಕೆ ಪ್ರಥಮ ಸಾಕ್ಷಿಯಾಗಿರುತ್ತಾನೆ. ಪುನರುತ್ಥಾನದ ರಾತ್ರಿ ಇದಾಗಿದ್ದು ಈ ಪುನರುತ್ಥಾನದೊಂದಿಗೆ ನಾವು ಹೊಸ ಜೀವನ ಪಡೆಯಲಿzವೆ. ಈ ಕಾರಣಕ್ಕಾಗಿ ನಾವು ಈ ರಾತ್ರಿಯನ್ನು ಪ್ರಾರ್ಥನೆ ಹಾಗೂ ಜಾಗರಣೆಯೊಂದಿಗೆ ಕಳೆಯುತ್ತೇವೆ. ನಮ್ಮ ಹೊಸ ಬದುಕನ್ನು ಸೂಚಿಸಲು ಬೆಳಕು ಮತ್ತು ನೀರಿನ ಆಶೀರ್ವಚನ ಕಾರ್ಯ ಈ ರಾತ್ರಿ ನಡೆಯುತ್ತದೆ.
ಚರ್ಚ್ಗಳಲ್ಲಿ: ಪುತ್ತೂರು ಮಾದೆ ದೇವುಸ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ವಂ|ವಿಜಯ್ ಲೋಬೋ, ವಂ|ಸ್ಟ್ಯಾನಿ ಪಿಂಟೋ, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ವಂ|ಅಶೋಕ್ ರಾಯನ್ ಕ್ರಾಸ್ತಾ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ವಂ|ಅಬೆಲ್ ಲೋಬೋರವರು ಪಾಸ್ಖ ಬತ್ತಿಯನ್ನು ಬೆಳಗಿಸಿ ಬಳಿಕ ಕ್ರೈಸ್ತ ಭಕ್ತಾದಿಗಳಿಗೆ ಹಸ್ತಾಂತರಿಸಿ ಪಾಸ್ಖ ಬತ್ತಿಯೊಂದಿಗೆ ಚರ್ಚ್ ಪ್ರವೇಶಿಸಿದರು. ಬಳಿಕ ಚರ್ಚ್ನಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಆಯಾ ಚರ್ಚ್ಗಳ ಪಾಲನಾ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಧರ್ಮಭಗಿನಿಯರು, ಸದಸ್ಯರು, ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ವಾಳೆ ಗುರಿಕಾರರು, ಗಾಯನ ಮಂಡಳಿಯವರು ಸಹಕರಿಸಿದರು. ಸಾವಿರಾರು ಭಕ್ತಾಧಿಗಳು ಚರ್ಚ್ನಲ್ಲಿ ನಡೆಯುವ ಪೂಜಾವಿಧಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ಯೇಸುಕ್ರಿಸ್ತರ ಪುನರುತ್ಥಾನ..
ಕತ್ತಲನ್ನು ಬೇಧಿಸಿದ ಪ್ರಭು ನಮಗೆ ಜೀವಜಲವಾಗುತ್ತಾರೆ. ಅವರ ಜೀವ ನಮ್ಮ ಜೀವನವಾಗುತ್ತದೆ. ನಮಗೆ ಈ ಪುನರುತ್ಥಾನ ಕತ್ತಲಿಂದ ಬೆಳಕಿಗೆ ಒಂದು ಆಹ್ವಾನ. ಹೊಸ ಬದುಕಿಗೆ ಸ್ವಾಗತ. ಈ ಬೆಳಕಲ್ಲಿ ಬದುಕು ಹೊಸದಾಗುತ್ತದೆ. ಪ್ರತಿಯೊಬ್ಬರು ಯೇಸುವಿನ ಸಹೋದರ, ಸಹೋದರಿಯರಾಗುತ್ತಾರೆ. ಯೇಸು ಮತ್ತೊಮ್ಮೆ ನಮ್ಮ ಮಧ್ಯೆ ಅದ್ಭುತಗಳನ್ನು ಮಾಡುತ್ತಾರೆ ಎನ್ನುವ ಸಂತೋಷದ ಸುದ್ದಿಯಿದು. ನಮ್ಮ ನೋವು, ನಿರಾಸೆ ಯಾವುದೂ ಶಾಶ್ವತವಲ್ಲ, ನಮ್ಮ ನಂಬಿಕೆ ಮೂಡಿಬರುತ್ತದೆ. ಈ ನಂಬಿಕೆಗಳು ಅಂತಿಮವಾಗಿ ನಮ್ಮ ಸಾವು ಕೂಡ ಅಂತಿಮವಲ್ಲ ಎಂಬ ದೃಢವಾದ ನಂಬಿಕೆಗೆ ನಮ್ಮನ್ನು ಕರೆದೊಯ್ಯುತ್ತದೆ. ಅವರ ಪುನರುತ್ಥಾನವೇ ನಮ್ಮ ಪುನರುತ್ಥಾನವಾಗುತ್ತದೆ. ಇದುವೇ ಪಾಸ್ಖ ಜಾಗರಣೆ ಎನ್ನುವುದು ಕ್ರೈಸ್ತ ಬಾಂಧವರ ನಂಬಿಕೆ.
ಇಂದು ಈಸ್ಟರ್ ಹಬ್ಬ..
ಪುನರುತ್ಥಾನ ಎಂಬುದು ಸಂತೋಷದ ಸುದ್ದಿ. ಕೆಡುಕನ್ನು ಮತ್ತು ಅದರ ಮೂಲ ಸಾವನ್ನು ಕೂಡ ಯೇಸುಕ್ರಿಸ್ತರು ಜಯಿಸುತ್ತಾರೆ. ಯೇಸು ಮತ್ತೊಮ್ಮೆ ನಮ್ಮ ಮಧ್ಯೆ ಅದ್ಭುತಗಳನ್ನು ಮಾಡುತ್ತಾರೆ ಎನ್ನುವ ಸಂತೋಷದ ಸುದ್ದಿ ಇದು. ಕ್ರೈಸ್ತ ದೇವಾಲಯಗಳಲ್ಲಿ ಯೇಸುಕ್ರಿಸ್ತರ ಪುನರುತ್ಥಾನ ಸಾರುವ ಈಸ್ಟರ್ ಹಬ್ಬದ ಆಚರಣೆ ಎ.೧೭ ರಂದು ನಡೆಯಲಿದೆ. ಆಯಾ ಚರ್ಚುಗಳಲ್ಲಿ ಬೆಳಿಗ್ಗೆ ಬಲಿಪೂಜೆ ನಡೆಯಲಿದ್ದು ಬಳಿಕ ಭಕ್ತಾದಿಗಳಿಗೆ ಆಶೀರ್ವದಿಸಿದ ಪವಿತ್ರ ಜಲ ವಿತರಣೆ ಕಾರ್ಯಕ್ರಮ ನಡೆಯಲಿದೆ.