ಕಂಬಳವು ಸಾಮರಸ್ಯದ ಸಂದೇಶವನ್ನು ಪಸರಿಸಲಿ – ಶ್ರೀವಿಖ್ಯಾತಾನಂದ ಸ್ವಾಮೀಜಿ
ಬಂಟ್ವಾಳ : ಕಂಬಳ ಕೂಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾವೈಕ್ಯತೆಯ ದ್ಯೋತಕ ಎಂದು ಸೊಲೂರು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ. ಅವರು ಎ.17ರಂದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ 11 ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಕಂಬಳ ಉದ್ಘಾಟಿಸಿ ಮಾತನಾಡಿದರು. ರೈ ನೇತೃತ್ವದಲ್ಲಿ ಪುನರಾರಂಭಗೊಂಡಿರುವ ಕಂಬಳ, ಸಾಮರಸ್ಯದ ಸಂದೇಶವನ್ನು ಎಲ್ಲೆಡೆಯಲ್ಲೂ ಪಸರಿಸಲಿ ಎಂದರು. ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಪರಸ್ಪರ ಅಶಾಂತಿ ಅಸಮಾಧಾನ ಮೇಳೈಸುವ ಈ ಕಾಲಘಟ್ಟದಲ್ಲಿ ಐಕ್ಯತೆ ಹಾಗೂ ಭಾವೈಕ್ಯತೆಗೆ ಈ ಕಂಬಳದ ಮೂಲಕ ಪ್ರೇರಣೆ ಸಿಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಾಮರಸ್ಯದ ಪ್ರತೀಕವಾಗಿ ನಾವೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಕಂಬಳದ ಕರೆ ನಿರ್ಮಿಸಿ, ಕಂಬಳ ಕೂಟದ ಯಶಸ್ವಿ ಆಯೋಜನೆಯಾಗಿರುವುದು ಭಗವಂತನ ಕೃಪೆಗೆ ಸಾಕ್ಷಿ ಎಂದರು.
ಅಲ್ಲಿಪಾದೆ ಸಂತ ಅಂತೊನಿ ಚರ್ಚ್ನ ಧರ್ಮಗುರು ಫೆಡ್ರಿಕ್ ಮೊಂತೆರೊ, ದೈಜಿವರ್ಲ್ಡ್ ವಾಹಿನಿ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ವಿಶ್ರಾಂತ ತಹಶೀಲ್ದಾರ್ ಮೋಹನ್ ರಾವ್, ನಾವೂರು ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೋರಸ್, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಶ್ರೀಬುಳ್ಳಾಳ್ತಿ ಚಾವಡಿಯ ಮನೋಜ್ ರೈ, ಮಾಜಿ ಶಾಸಕ ಜೆ.ಆರ್.ಲೋಬೋ, ಪ್ರಮುಖರಾದ ಸಚಿನ್ ರೈ ಮಾಣಿಗುತ್ತು, ಜಗನ್ನಾಥ ಚೌಟ, ನರೇಂದ್ರ ರೈ, ಬಿ.ಹೆಚ್.ಖಾದರ್, ಪಿ.ಎ. ರಹೀಂ, ಅಬ್ಬಾಸ್ ಆಲಿ, ಸುದರ್ಶನ್ ಜೈನ್, ಪದ್ಮನಾಭ ರೈ, ಗುಣಪಾಲ ಕಡಂಬ, ಕಂಬಳ ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಕಂಬಳ ಸಮಿತಿ ಸದಸ್ಯರಾದ ಶಬೀರ್, ಡೆನ್ಜಿಲ್ ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಸ್ವಾಗತಿಸಿದರು. ರಾಜೀವ್ ಕಕ್ಕೆಪದವು, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.